ರಾಜಕೀಯ ವಿಶೇಷ: ಗೌಡರ ಕುಟುಂಬದ ಮೇಲಿನ ವಾಗ್ದಾಳಿ ಫಲ ಕೊಡುತ್ತಾ?
ಮಂಡ್ಯ, ಜೂನ್ 30: ಮತ್ತೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ನಡುವೆ ಮಾತಿನ ಸಮರ ಮುಂದುವರೆದಿದೆ.
ಮನ್ಮುಲ್ ಆಡಳಿತ ಮಂಡಳಿ ಸೂಪರ್ಸೀಡ್ ಮಾಡದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಜೊತೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ ಎನ್ನುವ ವಿಚಾರ ಈಗ ಕಿಚ್ಚು ಹೊತ್ತಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರಂಭವಾಗಿರುವ ಮಾತಿನ ವೈಖರಿ ಇದೀಗ ಗಡಿಮೀರಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ತಿರುವುಗಳಿಗೆ ಸಾಕ್ಷಿಯಾದರೂ ಅಚ್ಚರಿ ಪಡಬೇಕಾಗಿಲ್ಲ.
ಕಾಂಗ್ರೆಸ್ನಲ್ಲಿ ಯಾವುದೇ ಒಳಜಗಳ ಇಲ್ಲ; ಇವೆಲ್ಲಾ ಮಾಧ್ಯಮಗಳ ಸೃಷ್ಟಿ; ಸಿದ್ದರಾಮಯ್ಯ
ಕಾಂಗ್ರೆಸ್ನಲ್ಲಿ ಮನೆಯೊಂದು ಮೂರು ಬಾಗಿಲು
ಈಗಾಗಲೇ ಕಾಂಗ್ರೆಸ್ನೊಳಗೆ ಸಿಎಂ ಅಭ್ಯರ್ಥಿ ವಿಚಾರಕ್ಕೆ ಸಂಬಂಧಿಸಿದಂತೆ ಗೊಂದಲಗಳು ಜೀವಂತವಾಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಒಂದೆಡೆ ಒಕ್ಕಲಿಗ, ಮತ್ತೊಂದೆಡೆ ಕುರುಬ ಮಗದೊಂದು ಕಡೆ ಲಿಂಗಾಯಿತ ಹೀಗೆ ಮೂರು ಸಮುದಾಯವೂ ತಮ್ಮ ನಾಯಕರ ಹೆಸರನ್ನು ಮುಂಚೂಣಿಯಲ್ಲಿಟ್ಟುಕೊಂಡೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ನಡುವೆ ದಲಿತ ನಾಯಕರನ್ನು ಸಿಎಂ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಡಿಕೆಶಿಯನ್ನೇ ಸಿಎಂ ಮಾಡುವ ಸಂಕಲ್ಪ
ಇತ್ತೀಚೆಗಿನ ವರ್ಷಗಳಲ್ಲಿ ಕಾಂಗ್ರೆಸ್ನಲ್ಲಿರುವ ಭಿನ್ನಾಭಿಪ್ರಾಯಗಳು ಬೂದಿ ಮುಚ್ಚಿದ ಕೆಂಡದಂತಿದೆ. ಒಕ್ಕಲಿಗ ಸಮುದಾಯ ಡಿ.ಕೆ. ಶಿವಕುಮಾರ್ರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಸಂಕಲ್ಪ ತೊಟ್ಟಿದೆ. ಹೀಗಾಗಿ ಮೇಲ್ನೋಟಕ್ಕೆ ಸಿಎಂ ರೇಸ್ನಲ್ಲಿ ಎಂ.ಬಿ. ಪಾಟೀಲ್ ಇದ್ದರೂ ಕೂಡ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿರುವುದು ಡಿಕೆಶಿ ಮತ್ತು ಸಿದ್ದರಾಮಯ್ಯ ಅವರ ನಡುವೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಸಿದ್ದರಾಮಯ್ಯ ನೇತೃತ್ವದ ಚುನಾವಣೆ ಫಲ ಕೊಟ್ಟಿಲ್ಲ
ಸಿದ್ದರಾಮಯ್ಯ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರೂ ಅವರನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಕೈಹಿಡಿದಿಲ್ಲ. ಅದಕ್ಕೆ ಕಾರಣಗಳು ಅನೇಕವಾಗಿದ್ದರೂ, ಅವರನ್ನು ಹಿಂದೂ ವಿರೋಧಿ ಎಂಬಂತೆ ಬಿಂಬಿಸುವಲ್ಲಿ ಬಿಜೆಪಿ ಸಫಲವಾಯಿತು. ಅದರ ಪರಿಣಾಮವೋ ಏನೋ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಚುನಾವಣೆಗಳು ಯಾವುದೇ ರೀತಿಯ ಫಲವನ್ನು ಕೊಟ್ಟಿಲ್ಲ.
ಗೌಡರ ಮೇಲಿನ ವಾಗ್ದಾಳಿಗೆ ಒಕ್ಕಲಿಗರ ಆಕ್ರೋಶ
ಸಿದ್ದರಾಮಯ್ಯ ಅವರು ದೇವೇಗೌಡರ ಕುಟುಂಬದ ಬಗ್ಗೆ ಸಿಕ್ಕ ಸಿಕ್ಕ ಕಡೆ ವಾಗ್ದಾಳಿ ನಡೆಸಿರುವುದು ಒಕ್ಕಲಿಗರ ಆಕ್ರೋಶಕ್ಕೆ ಕಾರಣವಾಯಿತಲ್ಲದೆ, ಅದು ಚುನಾವಣೆ ವೇಳೆ ಪರಿಣಾಮ ಬೀರಿತು ಎಂಬುದು ಕೂಡ ಅಷ್ಟೇ ಸತ್ಯ. ಜೆಡಿಎಸ್ ಮತ್ತು ಕಾಂಗ್ರೆಸ್ನ್ನೊಳಗೊಂಡ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಎಚ್ಡಿಕೆ ಮತ್ತು ಸಿದ್ದರಾಮಯ್ಯ ನಡುವೆ ವಾಕ್ಸಮರ ತಾರಕ್ಕೇರಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಕೇವಲ ದೇವೇಗೌಡರ ಕುಟುಂಬವನ್ನಷ್ಟೇ ಟಾರ್ಗೆಟ್ ಮಾಡಿ ಮಾತನಾಡುವ ಸಿದ್ದರಾಮಯ್ಯನವರ ತಂತ್ರಗಾರಿಕೆ ಚುನಾವಣೆ ಸಮಯದಲ್ಲಿ ಕೆಲಸ ಮಾಡಿದಂತೆ ಕಾಣುತ್ತಿಲ್ಲ.
ಮತ್ತೆ ಗೌಡರ ಕುಟುಂಬವೇ ಟಾರ್ಗೆಟ್
ಇದೀಗ ಸಿದ್ದರಾಮಯ್ಯ ಗೌಡರ ಕುಟುಂಬವನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಿ ಮಾತನಾಡಿದರೂ, ಅದು ಕೊನೆಯ ದಡ ಮುಟ್ಟುವ ಹೊತ್ತಿಗೆ ಒಕ್ಕಲಿಗ ವಿರೋಧಿ ಎಂಬಂತೆ ಬಿಂಬಿತವಾಗುತ್ತಿದೆ. ಇದು ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಸಿದ್ದರಾಮಯ್ಯ ಅವರಿಗೆ ಮಗ್ಗುಲ ಮುಳ್ಳಾದರೂ ಅಚ್ಚರಿಪಡಬೇಕಾಗಿಲ್ಲ. ಈ ನಡುವೆ ಮನ್ಮುಲ್ ಆಡಳಿತ ಮಂಡಳಿ ಸೂಪರ್ಸೀಡ್ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮಾಡಿದ ಆರೋಪಗಳಿಗೆ ಉತ್ತರ ನೀಡಿರುವ ಕುಮಾರಸ್ವಾಮಿ, "ಸಿದ್ದರಾಮಯ್ಯ ಮಂಡ್ಯಕ್ಕೆ ಮಾಡಿರುವುದನ್ನು ನಾನು ನೋಡಿದ್ದೇನೆ. ನನಗೆ ಬಡ್ಡಿ ಮಗ ಅಂದಿದ್ದಾರಲ್ಲಾ, ಬಡ್ಡಿ ಇರಲಿ ಇವರೆಲ್ಲ ನನ್ನ ಬಳಿ ತೆಗೆದುಕೊಂಡಿರುವ ಅಸಲನ್ನೇ ಕೊಟ್ಟಿಲ್ಲ. ತನಿಖೆ ಮಾಡುವ ವಿಚಾರದಲ್ಲಿ ನಾವು ಯಾರಿಗೂ ರಕ್ಷಣೆ ನೀಡಲ್ಲ. ಮಾನ ಮಾರ್ಯಾದೆ ಇದ್ದರೆ ತನಿಖೆ ನಡೆಸುವ ಬಗ್ಗೆ ಮಾತನಾಡಲಿ,'' ಎಂದು ಸವಾಲ್ ಹಾಕಿದ್ದಾರೆ.
Recommended Video
ವಾಕ್ಸಮರಗಳು ಎಲ್ಲಿಗೆ ತಲುಪಲಿದೆಯೋ?
"ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲಿಯೇ ಮಂಡ್ಯದ ಮೂಡಾದಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದ್ರಲ್ವಾ ಅದನ್ನು ತನಿಖೆ ಮಾಡಿದರಾ? ಲೂಟಿ ಹೊಡೆದವರಿಗೆ ಶಿಕ್ಷೆ ನೀಡಿದರಾ?'' ಎಂದು ಪ್ರಶ್ನಿಸಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ನಡುವಿನ ಆರೋಪ- ಪ್ರತ್ಯಾರೋಪಗಳು ಮುಂದುವರೆಯುತ್ತಿದ್ದು, ಇದು ಎಲ್ಲಿಗೆ ಹೋಗಿ ತಲುಪುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.