ಮಂಡ್ಯ: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಎಲ್ಲಲ್ಲೂ ಸರ್ಕಾರಿ ಜಾಹೀರಾತು!
ಮಂಡ್ಯ, ಏಪ್ರಿಲ್ 11: ಚುನಾವಣಾ ನೀತಿ ಸಂಹಿತೆ ಜಾರಿಯಾದ ತಕ್ಷಣದಿಂದಲೇ ಎಲ್ಲೆಡೆ ಹಾಕಲಾಗಿದ್ದ ಜಾಹೀರಾತುಫಲಕಗಳನ್ನು ತೆರವುಗೊಳಿಸಲಾಗಿದೆಯಾದರೂ ಮಂಡ್ಯ ವೈದ್ಯಕೀಯ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ಆವರಣದಲ್ಲಿ ಅಳವಡಿಸಿರುವ ಜಾಹೀರಾತು ಫಲಕ ಮಾತ್ರ ಚುನಾವಣಾಧಿಕಾರಿಗಳ ಕಣ್ಣಿಗೆ ಬೀಳದಿರುವುದು ಅಚ್ಚರಿಗೆ ಕಾರಣವಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
2018ರ ವಿಧಾನಸಭಾ ಚುನಾವಣೆ ನಿಮಿತ್ತ ರಾಜ್ಯದ ಎಲ್ಲೆಡೆ ಸರ್ಕಾರದ ಜಾಹೀರಾತುಗಳನ್ನು ತ್ವರಿತವಾಗಿ ತೆರವುಗೊಳಿಸಿದ್ದರೂ ಇಲ್ಲಿ ಮಾತ್ರ ಏಕೆ ತೆರವುಗೊಳಿಸಿಲ್ಲ? ಇದೇನು ನಿರ್ಜನ ಪ್ರದೇಶವಂತೂ ಅಲ್ಲವೇ ಅಲ್ಲ. ಹೀಗಿದ್ದರೂ ಯಾರ ಕಣ್ಣಿಗೂ ಬಿದ್ದಿಲ್ಲವೆ ಎಂದು ಜಾಹೀರಾತು ಫಲಕವನ್ನು ನೋಡಿ ಜನ ಪ್ರಶ್ನೆ ಕೇಳುತ್ತಿದ್ದಾರೆ.
ಚುನಾವಣೆ ನೀತಿ ಸಂಹಿತೆ: ಮೈಸೂರಿನಲ್ಲಿ 7 ಲಕ್ಷ 48 ಸಾವಿರ ವಶಕ್ಕೆ
ಹಾಗೆನೋಡಿದರೆ ಜಿಲ್ಲಾಸ್ಪತ್ರೆಗೆ ನಿತ್ಯ ಸಾವಿರಾರು ಜನತೆ ಚಿಕಿತ್ಸೆ, ರೋಗಿಗಳನ್ನು ನೋಡಲು ಬರುತ್ತಾರೆ. ಹಾಗೆ ಬಂದವರು ಈ ಜಾಹೀರಾತನ್ನು ನೋಡಿಯೇ ಇರುತ್ತಾರೆ. ಹೀಗಿದ್ದೂ ತೆರವುಗೊಳಿಸದೆ ಇರುವುದು ನೀತಿ ಸಂಹಿತೆ ಉಲ್ಲಂಘನೆ ಎಂಬ ಮಾತು ಕೇಳಿ ಬರುತ್ತಿದೆ.
ನಗರಕ್ಕೊಂದು ಸುತ್ತು ಹೊಡೆದರೆ ಇಂತಹ ಅವಾಂತರಗಳು ಅಲ್ಲಲ್ಲಿ ಕಂಡು ಬರುತ್ತಿದೆ. ಆರ್.ಪಿ. ರಸ್ತೆಯಲ್ಲಿ ಹಿಂದೆ ಇದ್ದ ಕಾಂಗ್ರೆಸ್ ಕಚೇರಿಯ ಮೇಲೆ ಪಕ್ಷದ ಹೆಸರಿದೆ. ಇನ್ನು ಮುಂದುವರೆದು ವಿವಿಧೆಡೆ ಈ ಬಾರಿ ಬಿಜೆಪಿ ಎಂದು ಬರೆದಿದ್ದರ ಮೇಲೆ ಬಣ್ಣ ಬಳಿಯಲಾಗಿದೆ. ಆದರೆ, ಕಾಂಗ್ರೆಸ್ ಕಚೇರಿಯ ಮೇಲೆ ಬಣ್ಣ ಬಳಿಯದೆ ಹಾಗೆಯೇ ಬಿಡಲಾಗಿದೆ. ಕಾವೇರಿ ವನದ ಅಕ್ಕಪಕ್ಕದಲ್ಲಿ ಕಲ್ಲುಬೆಂಚುಗಳ ಮೇಲೆ ಎಸ್.ಎಂ.ಕೃಷ್ಣ ಅನುದಾನ ಎಂದು ಬರೆಯಲಾಗಿದೆ. ಒಟ್ಟಾರೆ ಒಂದಷ್ಟು ಚುನಾವಣಾನೀತಿ ಉಲ್ಲಂಘನೆಗೆ ಹತ್ತಿರವಾಗಿರುವ ಕೆಲವೊಂದು ನಿದರ್ಶನಗಳು ಕಣ್ಣಿಗೆ ಕಾಣುತ್ತಿದ್ದು, ಸಂಬಂಧಿಸಿದವರು ಇತ್ತ ಗಮನಹರಿಸಬೇಕಾದ ಅಗತ್ಯವಿದೆ.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?