ಕೆಆರ್ಎಸ್, ಬೃಂದಾನವನಕ್ಕೆ ಪ್ರವಾಸಿಗರ ಭೇಟಿ ನಿಷೇಧ
ಮಂಡ್ಯ, ಜುಲೈ 16 : ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯ ಭರ್ತಿಯಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಕೆಆರ್ಎಸ್ ಮತ್ತು ಬೃಂದಾನವಕ್ಕೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೆಆರ್ಎಸ್ ಜಲಾಶಯವಿದೆ. ಗರಿಷ್ಠ 124 ಅಡಿ ಎತ್ತರದ ಜಲಾಶಯದಲ್ಲಿ ಸದ್ಯ, 123 ಅಡಿ ನೀರಿನ ಸಂಗ್ರಹವಿದೆ. 65,777 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ.
45 ವರ್ಷದ ಬಳಿಕ ದಾಖಲೆ ಬರೆದ ಕಾವೇರಿ ಕಣಿವೆಯ 4 ಜಲಾಶಯಗಳು!
ಕೆಆರ್ಎಸ್ನಿಂದ 30 ಗೇಟ್ಗಳ ಮೂಲಕ 71,583 ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತಿದೆ. ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆಯನ್ನು ನೀಡಲಾಗಿದೆ.
ತುಂಬೈತೆ ಕೆಆರ್ ಎಸ್: ರುದ್ರರಮಣೀಯ ವಿಡಿಯೋ ಐತೆ ನೋಡಿ!
ಕೆಆರ್ಎಸ್ ಜಲಾಶಯದ ಹೊರ ಹರವಿನ ಪ್ರಮಾಣ ಹೆಚ್ಚಾದ ಹಿನ್ನಲೆಯಲ್ಲಿ ಕೆಆರ್ಎಸ್ ಬೃಂದಾವನ, ಉದ್ಯಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಕಾರಂಜಿಗಳನ್ನು ಬಂದ್ ಮಾಡಲಾಗಿದೆ. ಎಷ್ಟು ದಿನದ ತನಕ ಪ್ರವಾಸಿಗರಿಗೆ ನಿರ್ಬಂಧವಿದೆ? ಎಂಬುದು ಇನ್ನೂ ಖಚಿತ ವಾಗಿಲ್ಲ.
ಜು.20ರಂದು ಬಾಗಿನ : ಕೆಆರ್ಎಸ್ ಜಲಾಶಯಕ್ಕೆ ಜುಲೈ 20ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸಲಿದ್ದಾರೆ. ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಸೇರಿದಂತೆ ರಾಜ್ಯ ಸರ್ಕಾರದ ಇತರೆ ಸಂಪುಟ ಸಚಿವರುಗಳು, ಮೈಸೂರು ಹಾಗೂ ಮಂಡ್ಯ ಜಿಲ್ಲೆಯ ಸಚಿವರುಗಳು ಹಾಗೂ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ.