ಮಂಡ್ಯ; ಕಾವೇರಿ ನದಿ ಪ್ರವಾಹದಲ್ಲೇ ಶವ ಸಾಗಿಸಿದ ಗ್ರಾಮಸ್ಥರು
ಮಂಡ್ಯ, ಆಗಸ್ಟ್, 08: ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ರಸ್ತೆ ಜಲಾವೃತವಾಗಿದ್ದು, ಕಾವೇರಿ ನದಿ ಪ್ರವಾಹದಿಂದಾಗಿ ಶವ ಸಂಸ್ಕಾರಕ್ಕೂ ತೊಂದರೆಯಾಗಿದೆ. ಪರಿಣಾಮ ನದಿಯ ನೀರಿನಲ್ಲೇ ಶವವನ್ನು ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಹದೇವಪುರದಲ್ಲಿ ಜನರು ಕಾವೇರಿ ನದಿಯ ಪ್ರವಾಹದಲ್ಲೇ ಶವವನ್ನು ಹೊತ್ತುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಗ್ರಾಮದ ಸುಲೋಚನಾ ಎಂಬುವರು ಕ್ಯಾನ್ಸರ್ ರೋಗದಿಂದ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರ ನಡೆಸಲು ಸಿದ್ಧತೆಯನ್ನು ಮಾಡಲಾಗಿತ್ತು. ನದಿ ಪಾತ್ರದಲ್ಲೇ ಸ್ಮಶಾನ ಇದ್ದ ಕಾರಣ, ನದಿಯನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಡ್ಯ; ಬಾಲ್ಯ ವಿವಾಹ, ಮಕ್ಕಳ ಭಿಕ್ಷಾಟನೆ ತಡೆಗೆ ಕ್ರಮ
ಎದೆ ಮಟ್ಟದಲ್ಲಿ ಹರಿಯುತ್ತಿದ್ದ ಪ್ರವಾಹದ ನೀರಿನಲ್ಲೇ ಶವವನ್ನು ಸ್ಮಶಾನಕ್ಕೆ ಹೊತ್ತು ತರಲಾಯಿತು. ಪ್ರತೀ ಬಾರಿಯೂ ಭೀಕರ ಪ್ರವಾಹ ಎದುರಾದಾಗ ಗ್ರಾಮದಲ್ಲಿ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶವ ಸಾಗಣೆ ಮಾಡುವಾಗ ಜನರ ಜೀವಕ್ಕೂ ಅಪಾಯ ಎದುರಾಗಲಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇಲ್ಲಿನ ನದಿ ಅಪಾಯದ ಪಟ್ಟದಲ್ಲಿ ಹರಿಯುತ್ತಿದ್ದು, ಜನರು ಆತಂಕದಲ್ಲೇ ಜೀವನ ನಡೆಸುವಂತಾಗಿದೆ. ಮತ್ತು ಶವ ಸಂಸ್ಕಾರಕ್ಕೂ ಪರದಾಡುವಂತಾಗಿದೆ. ಇನ್ನು ಮಹದೇವಪುರದಲ್ಲಿರುವ ಸ್ಮಶಾನದ ರಸ್ತೆ ಜಲಾವೃತವಾಗಿದ್ದು, ಅಲ್ಲಿನ ಜನರು ಪ್ರವಾಹದ ನಡುವೆಯೂ ಶವ ಹೊತ್ತು ತೆರಳುತ್ತಾರೆ.
ಸಸೂಕ್ತ ವ್ಯವಸ್ಥೆ ಇಲ್ಲದೇ ಅಂತ್ಯ ಸಂಸ್ಕಾರಕ್ಕೆ ಹೆಣಗಾಟ ನಡೆಸಬೇಕಾಗಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು. ಈ ಭಾಗದಲ್ಲಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದ್ದಾರೆ ಎಂದು ಜನರು ಆರೋಪಿಸಿದರು.