ಮಂಡ್ಯ; ತಂದೆ ಅಂತ್ಯಸಂಸ್ಕಾರಕ್ಕೆ ತೆರಳಿದ್ದ ಮಗಳ ಗ್ರಾಮ ಸೀಲ್ ಡೌನ್
ಮಂಡ್ಯ, ಮೇ 04: ಮಂಡ್ಯಕ್ಕೆ ಮುಂಬೈನಿಂದ ಶವ ತಂದು ಅಂತ್ಯ ಸಂಸ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ವ್ಯಕ್ತಿಯ ಪುತ್ರಿಗೂ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆಕೆ ವಾಸವಿರುವ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ.
ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ರಾಜಘಟ್ಟ ಗ್ರಾಮದ ಮಹಿಳೆ ಮುಂಬೈನಿಂದ ತಂದಿದ್ದ ತನ್ನ ತಂದೆಯ ಶವದ ಅಂತ್ಯಕ್ರಿಯೆ ನಡೆಸುವ ಸಲುವಾಗಿ ಪಾಂಡವಪುರ ತಾಲೂಕಿನ ಬಿ.ಕೊಡಗಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಹೀಗಾಗಿ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಅವರು ರೋಗಿ ಸಂಖ್ಯೆ ಪಿ.569 ಆಗಿದ್ದಾರೆ. ಹೀಗಾಗಿ ಅವರು ವಾಸವಿದ್ದ ರಾಜಘಟ್ಟ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಕೆ.ಆರ್.ಪೇಟೆಯಲ್ಲಿ ಬಫರ್ ಝೋನ್ ಘೋಷಣೆ
ರಾಜಘಟ್ಟ ಗ್ರಾಮವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಿ ಸುತ್ತಲೂ 7 ಕಿ.ಮಿ. ವ್ಯಾಪ್ತಿಯಲ್ಲಿರುವ ಕೆ.ಆರ್.ಪೇಟೆ ತಾಲೂಕಿನ 17 ಗ್ರಾಮಗಳು ಹಾಗೂ ಪಾಂಡವಪುರ ತಾಲೂಕಿನ 4 ಗ್ರಾಮಗಳ ವ್ಯಾಪ್ತಿಯನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ರೋಗಿ 569 ವಾಸವಿದ್ದ ರಾಜಘಟ್ಟ ಗ್ರಾಮದಲ್ಲಿ 232 ಮನೆಗಳಿದ್ದು, 1285 ಜನಸಂಖ್ಯೆ ಹೊಂದಿದೆ.
ಮುಂಬೈನಿಂದ ಮಂಡ್ಯಕ್ಕೆ ಶವ ತಂದಿದ್ದ ಕುಟುಂಬದವರಲ್ಲಿ ಕೊರೊನಾ!
ಈ ಹಳ್ಳಿಗಳಲ್ಲಿ ಅಗತ್ಯ ಕ್ರಮ
ರಾಜಘಟ್ಟ ಗ್ರಾಮದಿಂದ 7ಕಿ.ಮೀ. ವ್ಯಾಪ್ತಿಯಲ್ಲಿ ಪರಿಧಿಯೊಳಗೆ ಬರುವ ಕೆ.ಆರ್.ಪೇಟೆ ತಾಲೂಕಿನ ಶೀಳನೆರೆ, ಶೀಳನೆರೆಕೊಪ್ಪಲು, ಗುಡುಗನಹಳ್ಳಿ, ನವಿಲುಮಾರನಹಳ್ಳಿ, ಪಿ.ಬಿ.ಮಂಚನಹಳ್ಳಿ, ರಾಮನಹಳ್ಳಿ, ತೆಂಡೇಕೆರೆ, ಮಲ್ಕೋನಹಳ್ಳಿ, ಚಟ್ಟಂಗೆರೆ, ದಾಸೇಗೌಡನಕೊಪ್ಪಲು, ಶೀರ್ ಬಿಲ್ಲೇನಹಳ್ಳಿ, ಕೆ.ಜಿ.ಕೋಡಹಳ್ಳಿ, ಹುಣಸನಹಳ್ಳಿ, ಬಳ್ಳೇಕೆರೆ, ಮರಡಹಳ್ಳಿ, ಕಾಗೇಪುರ ಹಾಗೂ ಪಾಂಡವಪುರ ತಾಲೂಕಿನ ಕೆ.ಮಂಚನಹಳ್ಳಿ, ನಲ್ಲೇನಹಳ್ಳಿ, ಮಾರ್ಮನಹಳ್ಳಿ ಮತ್ತು ಸಿಂಗಾಪುರ ಗ್ರಾಮಗಳನ್ನು ಬಫರ್ ಜೋನ್ ಎಂದು ಘೋಷಣೆ ಮಾಡಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತಾಲೂಕು ಆಡಳಿತವು ಕೈಗೊಂಡಿದೆ.
ಗ್ರಾಮದಲ್ಲಿ ಪೊಲೀಸರ ಕಣ್ಗಾವಲು
ಇದೀಗ ರಾಜಘಟ್ಟ ಗ್ರಾಮದ ಎಲ್ಲ ಸಂಪರ್ಕ ರಸ್ತೆಗಳಿಗೂ ಬ್ಯಾರಿಕೇಡ್ ಗಳನ್ನು ಹಾಕಿ ಬಂದೋಬಸ್ತ್ ಮಾಡಲಾಗಿದ್ದು, ಪೊಲೀಸರ ಕಣ್ಗಾವಲಿದೆ. ಜನರ ಓಡಾಟವನ್ನು ನಿಷೇಧಿಸಲಾಗಿದೆ. ಅನುಮತಿಯಿಲ್ಲದೆ ಯಾವುದೇ ವಾಹನಗಳ ಸಂಚಾರ ನಿಷೇಧ. ತುರ್ತು ಸಮಯದಲ್ಲಿ ಇಲ್ಲಿಂದ ಹೊರಹೋಗುವ ವಾಹನಗಳಿಗೆ ಕಡ್ಡಾಯವಾಗಿ ಸೋಡಿಯಂ ಕೈಪೋ ಕ್ಲೋರೈಡ್ನಿಂದ ಸ್ಯಾನಿಟೈಸರ್ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ. ಮನೆ ಮನೆ ಬಳಿಗೆ ಅಗತ್ಯ ವಸ್ತುಗಳಾದ ತರಕಾರಿ, ಹಾಲು, ಆಹಾರ ಸಾಮಗ್ರಿಗಳನ್ನು ಒದಗಿಸಿಕೊಡಲಾಗುತ್ತಿದೆ. ಯಾರೊಬ್ಬರೂ ಮನೆಯಿಂದ ಹೊರಬಾರದಂತೆ ಕಟ್ಟುನಿಟ್ಟಿನ ಆದೇಶ ಜಾರಿಗೊಳಿಸಲಾಗಿದೆ.
ಕೊರೊನಾ ಸೋಂಕಿನಿಂದ ಕಂಟೈನ್ಮೆಂಟ್ ವ್ಯಾಪ್ತಿಗೆ ಮೇಲುಕೋಟೆ
ಕೃಷಿ ಚಟುವಟಿಕೆಗೂ ನಿರ್ಬಂಧ
ಕೃಷಿ ಚಟುವಟಿಕೆಯನ್ನು ಕೈಗೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಜಾನುವಾರುಗಳಿಗೂ ಮನೆಯಲ್ಲಿಯೇ ಮೇವು ನೀಡಿ ಅಲ್ಲಿಯೇ ಆರೈಕೆ ಮಾಡುವಂತೆ ಸೂಚಿಸಲಾಗಿದೆ.
ಬಫರ್ ಝೋನಿನ ಎಲ್ಲ 21 ಗ್ರಾಮಗಳಲ್ಲಿಯೂ ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದ ತಂಡ ನಿಗಾವಹಿಸಿದೆ. ಕಂಟೈನ್ಮೆಂಟ್ ಝೋನ್ ಮತ್ತು ಬಫರ್ ಝೋನ್ ನಲ್ಲಿ ಸೇವೆ ಸಲ್ಲಿಸುವ ಸರ್ಕಾರಿ ನೌಕರರಿಗೆ ಯಾರಾದರೂ ಅಡಚಣೆ ಮಾಡಿದರೆ ಐಪಿಸಿ ಸೆಕ್ಷನ್ 188, 269, 270 ಪ್ರಕರಣ ದಾಖಲಿಸುವುದಾಗಿ ತಾಲ್ಲೂಕು ಆಡಳಿತವು ಖಡಕ್ ಎಚ್ಚರಿಕೆ ನೀಡಿದೆ.