ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ!
ಮಂಡ್ಯ, ಅಕ್ಟೋಬರ್.15: ಭಾರೀ ಪೈಪೋಟಿ ನಡುವೆಯೂ ಮಂಡ್ಯ ಲೋಕಸಭಾ ಉಪಚುನಾವಣೆಗೆ ಜೆಡಿಎಸ್ ನಿಂದ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಪಕ್ಷದ ಬಿ ಫಾರಂ ಪಡೆದಿದ್ದು, ಕೊನೆಗೂ ತಮ್ಮ ಪ್ರಾಬಲ್ಯ ಮೆರೆದಿದ್ದಾರೆ.
ಇದರಿಂದ ಆಕಾಂಕ್ಷಿಗಳಾಗಿದ್ದ ಐಆರ್ಎಸ್ ನಿವೃತ್ತ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ, ಮಾಜಿ ಸಚಿವ ಎಸ್.ಡಿ. ಜಯರಾಂ ಅವರ ಪತ್ನಿ, ಮಾಜಿ ಶಾಸಕಿ ಪ್ರಭಾವತಿ ಜಯರಾಂ ಅವರಿಗೆ ಬೇಸರವಾದಂತಾಗಿದೆ.
ಮಂಡ್ಯ ಲೋಕಸಭೆ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಶಿವರಾಮೇಗೌಡ ಆಯ್ಕೆ
ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿದ್ದು, ಇಲ್ಲಿ ಸುಲಭವಾಗಿ ಗೆಲುವು ಸಾಧಿಸಬಹುದೆಂಬ ಆಲೋಚನೆಯಿರುವುದರಿಂದ ಆಕಾಂಕ್ಷಿಗಳ ಸಂಖ್ಯೆ ಸ್ವಲ್ಪ ಜಾಸ್ತಿನೇ ಇತ್ತು.
ಜೊತೆಗೆ ಟಿಕೆಟ್ ಗಾಗಿ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡರ ಮೇಲೆ ಪ್ರಭಾವ ಬೀರಿದ್ದಲ್ಲದೆ, ದೇವರ ಮೊರೆ ಹೋದ ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಅವರು ಆದಿಚುಂಚನಗಿರಿ ಕಾಳಭೈರವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಟಿಕೆಟ್ ಸಿಗುವಂತೆ ಪ್ರಾರ್ಥಿಸಿಕೊಂಡಿದ್ದರು.
ಮಂಡ್ಯ ಉಪ ಚುನಾವಣೆ : ಶಿವರಾಮೇಗೌಡರಿಗೆ ಟಿಕೆಟ್ ಸಿಗಲು 5 ಕಾರಣಗಳು
ಅಲ್ಲದೇ ಆದಿಚುಂಚನಗಿರಿ ಪೀಠಾಧಿಪತಿಗಳ ಮೂಲಕವೂ ಶಿಫಾರಸ್ಸು ಮಾಡಿಸಿದ್ದರು. ಇದೆಲ್ಲವೂ ಫಲ ಕೊಟ್ಟಿದ್ದು, ಸದ್ಯ ಜೆಡಿಎಸ್ ನಿಂದ ಶಿವರಾಮೇಗೌಡರು ಕಣಕ್ಕಿಳಿಯಲಿದ್ದಾರೆ. ಮುಂದೆ ಓದಿ...
ಆಶಾಭಾವನೆಯಲ್ಲಿರುವ ಶಿವರಾಮೇಗೌಡ
ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಆಪ್ತರಾದ ಐಆರ್ಎಸ್ ನಿವೃತ್ತ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಟಿಕೆಟ್ ಖಚಿತ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಶಿವರಾವೇಗೌಡರು ಮಂಕಾಗಿದ್ದರು. ಭಾನುವಾರ ಬೆಳಗ್ಗೆವರೆಗೂ ಶಿವರಾವೇಗೌಡರಿಗೆ ಟಿಕೆಟ್ ಖಚಿತವಾಗಿರಲಿಲ್ಲ.
ಇದರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿತ್ತಲ್ಲದೆ, ಒಂದಷ್ಟು ಕುತೂಹಲ ಟಿಕೆಟ್ ಆಕಾಂಕ್ಷಿಗಳಾದ ಮೂವರನ್ನು ಕಾಡಿತ್ತು. ಆದರೆ, ಭಾನುವಾರ ಬೆಳಗ್ಗೆ 11ರ ವೇಳೆಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಎಲ್.ಆರ್.ಶಿವರಾಮೇಗೌಡ ಅವರ ಹೆಸರನ್ನು ಘೋಷಿಸುವ ಮೂಲಕ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.
ಈ ಹಿಂದೆ ಶಾಸಕರಾಗಿ ಆಯ್ಕೆಯಾಗಿದ್ದ ಶಿವರಾಮೇಗೌಡರಿಗೆ ಆ ನಂತರ ರಾಜಕೀಯದಲ್ಲಿ ಗೆಲುವಿನ ಅದೃಷ್ಟ ಕೂಡಿ ಬಂದಿಲ್ಲ. ಇದರಿಂದಾಗಿ ಸೋಲನ್ನೇ ಕಂಡಿರುವ ಅವರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು ಗೆದ್ದೇ ಗೆಲ್ಲುತ್ತೇನೆ ಎಂಬ ಆಶಾಭಾವನೆಯಲ್ಲಿದ್ದಾರೆ.
ಗೆಲುವು ಕಂಡೇ ಇಲ್ಲ
ಹಾಗೆನೋಡಿದರೆ 1989ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದು ವಿಧಾನಸೌಧವನ್ನು ಪ್ರವೇಶಿಸಿದ್ದರು. 1994ರ ಸಾರ್ವತ್ರಿಕ ಚುನಾವಣೆಯಲ್ಲೂ ಸಹ ಜನತಾ ಪಕ್ಷದ ಎಚ್.ಟಿ.ಕೃಷ್ಣಪ್ಪ, ಬಿಜೆಪಿಯ ಧರಣೇಂದ್ರ ಬಾಬು ಹಾಗೂ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ನರಸೇಗೌಡ ಅವರ ವಿರುದ್ಧ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಎರಡನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
1999ರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರಿದ ಎಲ್.ಆರ್. ಶಿವರಾಮೇಗೌಡ ಅವರು ಜನತಾದಳದ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ವಿರುದ್ಧ ನಿಂತು ಸೋಲು ಕಂಡರು. ಅದಾದ ಬಳಿಕ ಅವರು ಗೆಲುವು ಕಂಡೇ ಇಲ್ಲ.
2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಟಿಕೆಟ್ ನೀಡದ ಕಾರಣ ಕೈ ನಾಯಕರೊಂದಿಗೆ ಮುನಿಸಿಕೊಂಡ ಅವರು ಕಾಂಗ್ರೆಸ್ ವಿರುದ್ಧ ಸೆಟೆದು ನಿಂತು ಜೆಡಿಎಸ್ ನತ್ತ ಒಲವು ತೋರಿದರಾದರೂ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಇದರ ಪರಿಣಾಮ ಅವತ್ತು ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಅಂಬರೀಶ್ ಸೋತು ಚೆಲುವರಾಯಸ್ವಾಮಿ ಗೆಲುವು ಕಂಡರು.
ಚಲುವರಾಯಸ್ವಾಮಿಗೆ ಇರಿಸುಮುರಿಸು
ಮತ್ತೆ ಬಿಜೆಪಿ ಬಿಟ್ಟು ಕಾಂಗ್ರೆಸ್ ನಿಂದ ಸ್ಪರ್ಧಿಸಿದರೂ ಗೆಲುವು ಅವರ ಪಾಲಿಗೆ ಇಲ್ಲದಾಯಿತು. 2018ರ ವೇಳೆಗೆ ಮತ್ತೆ ಜೆಡಿಎಸ್ ಗೆ ಬಂದ ಶಿವರಾಮೇಗೌಡರು ಇದೀಗ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಇದಕ್ಕೆ ಕಾರಣವೂ ಇದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವ ಕಾರಣ ಕಾಂಗ್ರೆಸ್ ನಿಂದ ಯಾರೂ ಸ್ಪರ್ಧಿಸುತ್ತಿಲ್ಲ.
ಕಾಂಗ್ರೆಸ್ ನಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸದಿರುವುದು ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿರುವ ಚಲುವರಾಯಸ್ವಾಮಿ ಅವರಿಗೆ ಇರಿಸುಮುರಿಸನ್ನುಂಟು ಮಾಡಿದೆ.
ಮಂಡ್ಯ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ!
ಗೆಲುವು ಸುಲಭವಲ್ಲ
ಕೊನೆ ಗಳಿಗೆಯ ರಾಜಕೀಯ ಬೆಳವಣಿಗೆಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಂತ್ರ ನಡೆದಿದೆ. ಈಗಾಗಲೇ ಕೆ.ಎಸ್. ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ, ರೈತ ಸಂಘದ ಮುಖಂಡರಾದ ನಂದಿನಿ ಜಯರಾಂ, ರಾಜೇಗೌಡ, ಚುಕ್ಕಿನಂಜುಂಡಸ್ವಾಮಿ, ಬಡಗಲಪುರ ನಾಗೇಂದ್ರ, ಶಂಭೂನಹಳ್ಳಿ ಸುರೇಶ್ ಮತ್ತಿತರರುಗಳ ಹೆಸರುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಇದು ಕಾರ್ಯರೂಪಕ್ಕೆ ಬಂದಿದ್ದೇ ಆದರೆ ಜೆಡಿಎಸ್ ನ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಅವರಿಗೆ ಗೆಲುವು ಸುಲಭವಲ್ಲ.
ಮಂಡ್ಯ ಉಪಚುನಾವಣೆ: ಜೆಡಿಎಸ್, ಕಾಂಗ್ರೆಸ್ಸಿಗೆ ಬಿಜೆಪಿ ನೀಡಿದ ಅಚ್ಚರಿಯ ಆಫರ್