ಮಂಡ್ಯ: ಸಂಶಯ ಹುಟ್ಟಿಸಿದ ಇಬ್ಬರು ವಿಚಾರಣಾಧೀನ ಖೈದಿಗಳ ಸಾವು
ಆನಂದ್(26) ಮತ್ತು ಬೋರಯ್ಯ(75) ಮೃತಪಟ್ಟ ಖೈದಿಗಳು. ಮಂಡ್ಯ ತಾಲೂಕು ಎಚ್.ಮಲ್ಲಿಗೆರೆ ಗ್ರಾಮದ ನಿವಾಸಿಯಾಗಿದ್ದ ಆನಂದ್ ಮತ್ತು ಮದ್ದೂರು ತಾಲೂಕು ಮೆಳ್ಳಹಳ್ಳಿ ಗ್ರಾಮದ ಬೋರಯ್ಯ ಫೋಸ್ಕೋ ಕಾಯ್ದೆಯಡಿ ಬಂಧಿತರಾಗಿದ್ದರು.
ಮಂಡ್ಯ, ಮೇ 22: ಅನಾರೋಗ್ಯದಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲಾ ಉಪ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗಳಿಬ್ಬರು ಬುಧವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಯುವಕ ಆನಂದ್(26) ಮತ್ತು ವೃದ್ಧ ಬೋರಯ್ಯ(75) ಮೃತಪಟ್ಟ ಖೈದಿಗಳಾಗಿದ್ದಾರೆ. ಮಂಡ್ಯ ತಾಲೂಕು ಎಚ್.ಮಲ್ಲಿಗೆರೆ ಗ್ರಾಮದ ನಿವಾಸಿಯಾಗಿದ್ದ ಆನಂದ್ ಮತ್ತು ಮದ್ದೂರು ತಾಲೂಕು ಮೆಳ್ಳಹಳ್ಳಿ ಗ್ರಾಮದ ಬೋರಯ್ಯ ಫೋಸ್ಕೋ ಕಾಯ್ದೆಯಡಿ ಬಂಧಿತರಾಗಿದ್ದರು.
ಮೃತ ಆನಂದ್ ಕಳೆದ ಒಂದು ತಿಂಗಳಿನಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಈತನಿಗೆ ಮಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಈತನ ಪರೀಕ್ಷಿಸಿದ ವೈದ್ಯರು ಸ್ಕ್ಯಾನಿಂಗ್ ಮಾಡಿಸುವಂತೆ ಹೇಳಿದ್ದರು.
ಬುಧವಾರ ಮುಂಜಾನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆನಂದ್ ಮೃತಪಟ್ಟಿದ್ದಾನೆ.
ಈ ನಡುವೆ ವೃದ್ಧ ಬೋರಯ್ಯ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಮೊದಲಿಗೆ ಮಿಮ್ಸ್ ನಲ್ಲೇ ಚಿಕಿತ್ಸೆ ನೀಡಲಾಗಿತ್ತಾದರೂ ವೈದ್ಯರ ಸಲಹೆ ಮೇರೆಗೆ ಇವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಖೈದಿಗಳಿಬ್ಬರು ಫೋಸ್ಕೋ ಕಾಯಿದೆಯಡಿ ಕೆಲ ತಿಂಗಳ ಹಿಂದೆಯಷ್ಟೆ ಜೈಲ್ ಸೇರಿದ್ದರು ಎನ್ನಲಾಗಿದೆ. ಒಂದೇ ದಿನ ಇಬ್ಬರು ಖೈದಿಗಳು ಸಾವನ್ನಪ್ಪಿರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ಇತರೆ ಖೈದಿಗಳು ಕಾರಾಗೃಹದಲ್ಲಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಜೈಲು ಅಧೀಕ್ಷಕ ಲೋಕೇಶ್ ಅವರು ಸೂಕ್ತ ಚಿಕಿತ್ಸೆ ನೀಡದ ಹಿನ್ನಲೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಈ ಸಂಬಂಧ ಖೈದಿಗಳು ದೂರಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ತೆರಳಿ ಪರಿಶೀಲನೆ ನಡೆಸಿ ಖೈದಿಗಳಿಂದ ಮಾಹಿತಿ ಪಡೆದಿದ್ದಾರೆ. ಅವರು ಮುಂದಿನ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ನಡುವೆ ಸಾವನ್ನಪ್ಪಿದ ಖೈದಿಗಳ ಪೋಷಕರು ಹಾಗೂ ಸಂಬಂಧಿಕರು ಜೈಲ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮಗೆ ಯಾವುದೇ ಮಾಹಿತಿ ನೀಡದೆ ನಿರ್ಲಕ್ಷ್ಯ ತೋರಿದ್ದಾರೆ ಆದ್ದರಿಂದ ಘಟನೆಗೆ ಜೈಲು ಅಧೀಕ್ಷಕ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ದೂರಿದ್ದಾರೆ.
ಮಂಡ್ಯ ಜೈಲಿನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಇಲ್ಲಿ ನಡೆಯುತ್ತಿದ್ದ ಅಕ್ರಮ ಚಟುವಟಿಕೆಯನ್ನು ಪೊಲೀಸರು ದಾಳಿ ನಡೆಸಿ ಬಯಲು ಮಾಡಿದ್ದರು. ಇತ್ತೀಚೆಗೆ ಜೈಲ್ ಅಧೀಕ್ಷಕರನ್ನು ಕರ್ತವ್ಯಲೋಪದ ಮೇರೆಗೆ ಸೇವೆಯಿಂದ ಅಮಾನತು ಮಾಡಿದ್ದನ್ನು ಸ್ಮರಿಸಬಹುದಾಗಿದೆ.