ಮಹಾಮಳೆಗೆ ಕೊಚ್ಚಿಹೋಗಿವೆ ರಂಗನತಿಟ್ಟಿನ ನಡುಗಡ್ಡೆಗಳು
ಮೈಸೂರು, ಆಗಸ್ಟ್ 24: ಕಾವೇರಿ ನದಿಯ ರಭಸಕ್ಕೆ ಕೆಆರ್ ಎಸ್ ಜಲಾಶಯದ ಒಳಹರಿವು ಏರಿಕೆಯಾಗಿದ್ದರ ಪರಿಣಾಮ ರಂಗನತಿಟ್ಟು ಪಕ್ಷಿಧಾಮದ ಮೇಲೂ ಆಗಿದೆ.
ಮಳೆಯ ಹಿನ್ನೆಲೆಯಲ್ಲಿ ರಂಗನತಿಟ್ಟು ಪಕ್ಷಿಧಾಮದ ಬೋಟಿಂಗ್ ಸ್ಥಗಿತ
ನೀರಿನ ಹರಿವಿನ ಪ್ರಮಾಣ ಅಧಿಕಗೊಂಡ ಹಿನ್ನೆಲೆ ಪಕ್ಷಿಧಾಮದಲ್ಲಿದ್ದ 23 ನಡುಗಡ್ಡೆಗಳ ಪೈಕಿ 10 ನಡುಗಡ್ಡೆಗಳು ಕೊಚ್ಚಿ ಹೋಗಿವೆ. ಈ ನಡುಗಡ್ಡೆಗಳಲ್ಲಿದ್ದ ಮರಗಳೂ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಲ್ಲಿ ನಡುಗಡ್ಡೆ ಇತ್ತು ಎಂಬುದಕ್ಕೂ ಕುರುಹು ಸಿಗದಂತಾಗಿದೆ. ಇವನ್ನು ಪುನರ್ ನಿರ್ಮಾಣ ಮಾಡಬೇಕಾದರೆ ಕೋಟ್ಯಾಂತರ ರೂ. ವೆಚ್ಚವಾಗಲಿದ್ದು, ಸುಮಾರು ವರ್ಷಗಳೇ ಹಿಡಿಯಬಹುದು.
ಪ್ರತಿ ನಡುಗಡ್ಡೆ ಮೇಲೂ ಹಲವು ಪ್ರಭೇದದ ಪಕ್ಷಿಗಳು ವಾಸ್ತವ್ಯ ಹೂಡುತ್ತಿದ್ದವು. ಈ ಬಾರಿಯ ಪ್ರವಾಹ ರಂಗನತಿಟ್ಟು ಪಕ್ಷಿಧಾಮಕ್ಕೆ ದೊಡ್ಡ ಮಟ್ಟದ ನಷ್ಟ ಉಂಟು ಮಾಡಿದೆ. ಕೆಆರ್ ಎಸ್ ನಿಂದ ನೀರನ್ನು ಹೊರಬಿಟ್ಟಾಗ ರಂಗನತಿಟ್ಟು ಪಕ್ಷಿಧಾಮದಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿತ್ತು. ಪಕ್ಷಿ ಧಾಮಕ್ಕೆ ಪ್ರವಾಸಿಗರಿರಲಿ, ಅಲ್ಲಿನ ಸಿಬ್ಬಂದಿಯೇ ಹೋಗಲಾರದಷ್ಟು ಸಂಪೂರ್ಣವಾಗಿ ಮುಳುಗಡೆಯಾಗಿತ್ತು. ಆ ಸಂದರ್ಭದಲ್ಲಿ ಪಕ್ಷಿಧಾಮಕ್ಕೆ ಸುಮಾರು 30 ಲಕ್ಷದಷ್ಟು ಆದಾಯ ನಷ್ಟವಾಗಿತ್ತು. ಇದರೊಟ್ಟಿಗೆ ಇವುಗಳ ಪುನರ್ ನಿರ್ಮಾಣವೂ ಈಗ ಹೊರೆಯಾಗಿದೆ.
ಕಾವೇರಿ ನದಿಯಲ್ಲಿ ಪ್ರವಾಹ ಸಂಪೂರ್ಣ ನಿಂತ ಬಳಿಕವಷ್ಟೇ ನಷ್ಟದ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ನಾಶವಾಗಿರುವ ನಡುಗಡ್ಡೆಗಳ ಅಭಿವೃದ್ಧಿ ಕಾರ್ಯವನ್ನು ನವೆಂಬರ್ ನಂತರ ಆರಂಭಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.