ಕೆಆರ್ಎಸ್ ಹಿನ್ನೀರಿನಲ್ಲಿ ಪ್ರವಾಸೋದ್ಯಮ ಚಟುವಟಿಕೆ
ಮಂಡ್ಯ, ಜುಲೈ 17: "ಪ್ರವಾಸೋದ್ಯಮದ ವಿವಿಧ ಚಟುವಟಿಕೆಗಳಿಗೆ ಕೆಆರ್ಎಸ್ ಜಲಾಶಯದ ಹಿನ್ನೀರನ್ನು ಬಳಸಿಕೊಳ್ಳಲಾಗುವುದು,'' ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ಕೃಷ್ಣರಾಜ ಸಾಗರದ ಹಿನ್ನೀರಿನಲ್ಲಿ ಸಚಿವ ಕೆ.ಆರ್. ನಾರಾಯಣಗೌಡ, ಮಂಡ್ಯ ಜಿಲ್ಲಾಧಿಕಾರಿ ಸಿ. ಅಶ್ವಥಿ, ಜಿ.ಪಂ ಸಿಇಒ ದಿವ್ಯಪ್ರಭು ನೇತೃತ್ವದ ಅಧಿಕಾರಿಗಳ ತಂಡದೊಂದಿಗೆ ವಿಶೇಷ ಬೋಟ್ನಲ್ಲಿ ಕೃಷ್ಣರಾಜಪೇಟೆ ತಾಲೂಕಿನ ತ್ರಿವೇಣಿ ಸಂಗಮದ ಮೂಲಕ ಭೂವರಹನಾಥ ದೇಗುಲಕ್ಕೆ ಆಗಮಿಸಿ ಹೇಮಾವತಿ ನದಿಯ ಪಕ್ಕದಲ್ಲಿರುವ ನಡುಗಡ್ಡೆಯಲ್ಲಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ವತಿಯಿಂದ ಆಯೋಜಿಸಿದ್ದ ಸಾಹಸ ಕ್ರೀಡೆಗಳನ್ನು ವೀಕ್ಷಿಸಿ ಮಾತನಾಡಿದರು.
ಆಹಾ!: ವಿಸ್ಟಾಡೋಮ್ ಕೋಚ್ನಲ್ಲಿ ಕುಳಿತು ನೋಡಿ ಪಶ್ಚಿಮ ಘಟ್ಟದ ಸೌಂದರ್ಯ
"ಕೆಆರ್ಎಸ್ ಅಣೆಕಟ್ಟೆ ಇನ್ನು ಮುಂದೆ ರೈತರಿಗೆ ಹಾಗೂ ಕುಡಿಯಲು ಬಳಸುವ ನೀರಿಗಷ್ಟೇ ಸೀಮಿತವಾಗಿಸದೆ ಗುಜರಾತ್ ರಾಜ್ಯದ ನರ್ಮದಾ ಸರೋವರದ ಮಾದರಿಯಲ್ಲಿ ಹಿನ್ನೀರನ್ನು ಬಳಕೆ ಮಾಡಿಕೊಂಡು ಮಂಡ್ಯ ಜಿಲ್ಲೆಯನ್ನು ಇಡೀ ವಿಶ್ವವೇ ನೋಡುವಂತೆ ಮಾಡಲಾಗುವುದು,'' ಎಂದು ಹೇಳಿದರು.
"ರಾಜ್ಯದ ಅಣೆಕಟ್ಟೆಯಿಂದ ಹೊರಬಿಡಲಾಗುವ ನೀರು ಕೃಷಿಗೆ ಹಾಗೂ ಜನರಿಗೆ ಕುಡಿಯಲು ಉಪಯೋಗವಾದರೆ ಅಣೆಕಟ್ಟೆಯ ಒಳಭಾಗದ ಹಿನ್ನೀರು ವ್ಯರ್ಥವಾಗುವುದರ ಬದಲಾಗಿ ಮನರಂಜನಾ ಕ್ರೀಡೆಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.''
"ಹಿನ್ನೀರಿನ ವ್ಯಾಪ್ತಿಯಲ್ಲಿ ಹಲವಾರು ನಡುಗಡ್ಡೆಗಳಿದ್ದು ಅವುಗಳೆಲ್ಲವನ್ನೂ ಅಭಿವೃದ್ಧಿಪಡಿಸಿ ಪ್ರವಾಸಿಗರಿಗೆ ಬೇಕಾದ ಹೋಟೆಲ್, ರೆಸಾರ್ಟ್, ದೋಣಿ ವಿಹಾರ ಕೇಂದ್ರಗಳು, ಸಾಹಸ ಕ್ರೀಡೆಗಳು ಸೇರಿದಂತೆ ಪ್ರವಾಸಿಗರನ್ನು ಆಕರ್ಷಿಸಲು ಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡುವುದರ ಜತೆಗೆ ಹೆಲಿ ಟೂರಿಸಂ ಅನ್ನು ಆರಂಭಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆ.''
"ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರು ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಗೆ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದು, ಅದಕ್ಕೆ ಪೂರಕವಾಗಿ ಪ್ರವಾಸೋದ್ಯಮ ಇಲಾಖೆಯು ಸ್ಪಂದಿಸಿ ಕೆಲಸ ಮಾಡಲಿದೆ,'' ಎಂದು ಸಚಿವ ಯೋಗೇಶ್ವರ್ ತಿಳಿಸಿದರು.
ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ.ನಾರಾಯಣಗೌಡ ಮಾತನಾಡಿ, ""ಮಂಡ್ಯ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಆಕರ್ಷಿಸುವಂತಹ ನೂರಾರು ಸ್ಥಳಗಳಿವೆ. ಆದರೆ ಇದುವರೆಗೂ ಪ್ರವಾಸೋದ್ಯಮ ಇಲಾಖೆಯು ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಇನ್ನು ಮುಂದೆ ನಾನು ಹೀಗಾಗಲು ಬಿಡುವುದಿಲ್ಲ. ಮಂಡ್ಯ ಜಿಲ್ಲೆಯ ಹೆಸರನ್ನು ಜಾಗತಿಕ ಭೂಪಟದಲ್ಲಿ ಶಾಶ್ವತಗೊಳಿಸುವ ನಿಟ್ಟಿನಲ್ಲಿ ನಾನು ಈಗಾಗಲೇ ಕಾರ್ಯೋನ್ಮುಖನಾಗಿದ್ದೇನೆ.''
"ದೇವಾಲಯಗಳು, ನದಿಗಳ ಹಿನ್ನೀರು ಹಾಗೂ ನಡುಗಡ್ಡೆಗಳು ಹೀಗೆ ಹಲವು ನಿಸರ್ಗ ರಮಣೀಯ ತಾಣಗಳನ್ನು ಹೊಂದಿ, ಕೃಷಿಯಲ್ಲಿ ಪಾಂಡಿತ್ಯವನ್ನು ಪಡೆದಿರುವ ನೂರಾರು ರೈತರನ್ನು ಪ್ರವಾಸೋದ್ಯಮ ಇಲಾಖೆಯ ಮೂಲಕ ಪ್ರವಾಸಿಗರು ಸಂದರ್ಶಿಸುವ ಕೆಲಸವನ್ನು ಮಾಡಲಾಗುವುದು. ಜತೆಗೆ ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವರಹನಾಥ ಕಲ್ಲಹಳ್ಳಿಯಿಂದ ಹೇಮಾವತಿ ನದಿಗೆ ತೂಗುಸೇತುವೆಯನ್ನು ನಿರ್ಮಾಣ ಮಾಡಿ ದ್ವೀಪವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಲಾಗುವುದು,'' ಎಂದು ಹೇಳಿದರು.
Recommended Video
ಇದೇ ವೇಳೆ ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ, ಅಪರ ಜಿಲ್ಲಾಧಿಕಾರಿ ಶೈಲಜಾ, ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ದಿವ್ಯಪ್ರಭು, ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ಶ್ರೀರಂಗಪಟ್ಟಣ ತಹಶೀಲ್ದಾರ್ ರೂಪ, ತಹಶೀಲ್ದಾರ್ ಶಿವಮೂರ್ತಿ, ಸಚಿವ ನಾರಾಯಣಗೌಡರ ಆಪ್ತ ಕಾರ್ಯದರ್ಶಿ ಪ್ರಭಾಕರ್, ಭೂವರಹನಾಥ ದೇವಾಲಯದ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವನ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಡಾ.ಅಂ.ಚಿ. ಸಣ್ಣಸ್ವಾಮಿಗೌಡ, ಡಾ.ಆರ್.ಕೆ. ವೆಂಕಟೇಶ್ ಸೇರಿದಂತೆ ಪ್ರವಾಸೋದ್ಯಮ, ಕ್ರೀಡೆ ಹಾಗೂ ಯುವಜನಸೇವಾ ಇಲಾಖೆಯ ಅಧಿಕಾರಿಗಳು ಇದ್ದರು.