ಇಂದಿನಿಂದ ನಾಲೆಗಳಿಗೆ ನೀರು; ನಿಟ್ಟುಸಿರುಬಿಟ್ಟ ಮಂಡ್ಯ ರೈತರು
ಮಂಡ್ಯ, ಜುಲೈ 16: ಇಂದಿನಿಂದ ಹತ್ತು ದಿನಗಳ ಕಾಲ ಮಂಡ್ಯದ ಸುತ್ತಮುತ್ತಲ ನಾಲೆಗಳಿಗೆ ನೀರು ಹರಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕಾವೇರಿ ಅಚ್ಚುಕಟ್ಟು ವ್ಯಾಪ್ತಿಯ ಸಚಿವರು, ಶಾಸಕರು ಹಾಗೂ ಕಾವೇರಿ ಉಸ್ತುವಾರಿ ಸಮಿತಿ ಸದಸ್ಯರ ಬೆಳೆಗಳ ರಕ್ಷಣೆ ತಂಡ ಕುಡಿಯುವ ನೀರು ಬಿಡಲು ತೀರ್ಮಾನ ಕೈಗೊಂಡಿದ್ದು, ಇಂದಿನಿಂದ ನಾಲೆಗಳಿಗೆ ನೀರು ಹರಿದುಬಂದಿದೆ. ಈ ನಿರ್ಧಾರ ರೈತರು ಅಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಮಂಡ್ಯ ರೈತರಿಗೆ ಶುಭ ಸುದ್ದಿ : ಮಂಗಳವಾರದಿಂದ ಬೆಳೆಗಳಿಗೆ ನೀರು
ಜು.26ರವರೆಗೆ ಕೆಆರ್ ಎಸ್ ನಿಂದ ವಿಶ್ವೇಶ್ವರಯ್ಯ ನಾಲೆಗೆ ನೀರು ಹರಿಸಲಾಗುವುದು ಎಂದು ಕೃಷ್ಣರಾಜ ಸಾಗರ ಆಧುನೀಕರಣ ಮತ್ತು ಮಧ್ಯಮ ನೀರಾವರಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ರಾಮಕೃಷ್ಣ ತಿಳಿಸಿದ್ದಾರೆ.
ಒಣಗುತ್ತಿರುವ ಕಬ್ಬು, ಭತ್ತದ ಬೆಳೆ ರಕ್ಷಣೆಗೆ ನೀರು ಹರಿಸುವಂತೆ ರೈತರು ಜಿಲ್ಲೆಯಾದ್ಯಂತ ಹೋರಾಟ ನಡೆಸುತ್ತಿದ್ದರು. ಹೋರಾಟಕ್ಕೆ ಮಣಿದಿರುವ ಸರ್ಕಾರ ನೀರು ಬಿಡಲು ಮುಂದಾಗಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ರಚನೆ ನಂತರ ಕಾವೇರಿ ಸಲಹಾ ಸಮಿತಿ ಮಾನ್ಯತೆ ಕಳೆದುಕೊಳ್ಳಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಜನ-ಜಾನುವಾರುಗಳ ಕುಡಿಯುವ ನೀರಿಗೂ ತತ್ವಾರ ಉಂಟಾಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ. ಸೋಮವಾರ ಸಂಜೆ ವೇಳೆಗೆ ಜಲಾಶಯದ ನೀರಿನ ಮಟ್ಟ 90.50 ಅಡಿಗೆ ತಲುಪಿದೆ. ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ.