ಮಂಡ್ಯ: ತಾಯಿ ಒಳಗೆ ಹೋದಾಗ ಮಹಡಿಯಿಂದ ಬಿದ್ದು ಹೆಣ್ಣುಮಗು ಸಾವು
ಮಂಡ್ಯ, ಅಕ್ಟೋಬರ್ 6: ಮೂರು ವರ್ಷದ ಮಗುವಿಗೆ ಊಟ ಮಾಡಿಸಿ ತಾಯಿ ಕೈ ತೊಳೆಯಲು ಮನೆಯೊಳಗೆ ಹೋದ ವೇಳೆ ಮೂರು ವರ್ಷದ ಕಂದಮ್ಮ ಮಹಡಿಯ ಮೇಲಿನಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಮಂಡ್ಯ ನಗರದ ರಾಜಕುಮಾರ್ ಬಡಾವಣೆಯ ನಿವಾಸಿ ಸತೀಶ್ ಹಾಗೂ ಶೃತಿ ದಂಪತಿಯ ಮಗಳು ಧನುಶ್ರೀ (3) ಮೃತ ದುರ್ದೈವಿಯಾಗಿದೆ. ರಾಜಕುಮಾರ್ ಬಡಾವಣೆಯಲ್ಲಿ ಸತೀಶ್ ಅವರದ್ದು ಮಹಡಿ ಮನೆಯಾಗಿದ್ದು, ಎಂದಿನಂತೆ ಶೃತಿ ತಮ್ಮ ಮಗಳು ಧನುಶ್ರೀಯನ್ನು ಆಟವಾಡಿಸಿಕೊಂಡು ಮನೆಯ ಮುಂಭಾಗ ಊಟ ಮಾಡಿಸಿದ್ದಾರೆ. ನಂತರ ಮಗುವನ್ನು ಬಿಟ್ಟು ಕೈ ತೊಳೆಯಲು ಒಳಗೆ ಹೋಗಿದ್ದಾರೆ.
ಈ ವೇಳೆ ಮಹಡಿಯ ಮೇಲಿನ ಸಂಧಿಯಲ್ಲಿ ಮಗು ಇಣುಕಿ ನೋಡಲು ಹೋಗಿದ್ದ, ಆಗ ಮಗು ಮುಗ್ಗರಿಸಿ ಕೆಳಗೆ ಬಿದ್ದಿದೆ. ಮೇಲಿಂದ ಬಿದ್ದ ರಭಸಕ್ಕೆ ಮಗುವಿನ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಪೋಷಕರು ಮಗುವನ್ನು ಕರೆದುಕೊಂಡು ಮೂರು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ಮಗು ಸಾವನ್ನಪ್ಪಿದೆ.
Recommended Video
ಮಗುವನ್ನು ಕಳೆದುಕೊಂಡಿರುವ ಪೋಷಕರ ದುಃಖ ಮುಗಿಲು ಮುಟ್ಟಿದೆ. ಮಂಡ್ಯದ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.