ಸುಮಲತಾ ಹಣಿಯಲು ಹೊಸ ತಂತ್ರ: ಅದೇ ಹೆಸರಿನ ಮೂವರಿಂದ ನಾಮಪತ್ರ
ಮಂಡ್ಯ, ಮಾರ್ಚ್ 26: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಅವರನ್ನು ಎದುರಿಸಲು ಜೆಡಿಎಸ್-ಕಾಂಗ್ರೆಸ್ ಮಿತ್ರ ಪಕ್ಷಗಳು ತರಹವೇವಾರಿ ತಂತ್ರಗಳ ಮೊರೆ ಹೋಗಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುಮಲತಾಗೆ ದೊರಕುತ್ತಿರುವ ಬೆಂಬಲ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಲ್ಲಿ ತಳಮಳ ಹುಟ್ಟಿಸಿದೆ ಎಂದು ವ್ಯಾಖ್ಯಾನಿಸಲಾಗಿದೆ. ಮೈತ್ರಿ ಪಕ್ಷಗಳ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಗೆಲುವು ಕುಮಾರಸ್ವಾಮಿ ಅವರಿಗೆ ಪ್ರತಿಷ್ಠೆಯಾಗಿದೆ. ಹೀಗಾಗಿ ವ್ಯಾಪಕ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗಕ್ಕೆ ಸುಮಲತಾ ದೂರು
ಸುಮಲತಾ ಅಂಬರೀಷ್ ಅವರು ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ತೀವ್ರ ಪ್ರಚಾರ ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಪೈಪೋಟಿ ನೀಡಲು ಹೊಸ ತಂತ್ರ ರೂಪಿಸಲಾಗಿದೆ. ಸುಮಲತಾ ಅವರದೇ ಹೆಸರಿನ ಇನ್ನೂ ಮೂವರು ಮಹಿಳೆಯರು ಮಂಡ್ಯ ಲೋಕಸಭೆಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಹೆಸರಿನ ನಾಲ್ಕು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದಂತಾಗಿದೆ.
ಮತದಾರರಲ್ಲಿ ಗೊಂದಲ ಉಂಟುಮಾಡುವ ಉದ್ದೇಶದಿಂದ ಒಂದೇ ಹೆಸರಿನ ಮೂವರನ್ನು ಕಣಕ್ಕಿಳಿಸಲಾಗುತ್ತಿದೆ. ಮತದಾನ ಯಂತ್ರದಲ್ಲಿ ಒಟ್ಟು ನಾಲ್ವರು ಸುಮಲತಾ ಹೆಸರಿನ ಅಭ್ಯರ್ಥಿಗಳು ಇದ್ದರೆ ಮತದಾರರು ಗೊಂದಲಕ್ಕೆ ಒಳಗಾಗುತ್ತಾರೆ. ಇದರಿಂದ ಸುಮಲತಾ ಅಂಬರೀಷ್ ಅವರಿಗೆ ಬೀಳಬೇಕಾದ ಮತಗಳು ಹಂಚಿಕೆಯಾಗುವ ಸಾಧ್ಯತೆ ಹೆಚ್ಚು.
ಇದು ಈಗಾಗಲೇ ಪ್ರಭಾವಿ ಮುಖಂಡರ ವಾಗ್ದಾಳಿಗೆ ತುತ್ತಾಗಿರುವ ಸುಮಲತಾ ಅಂಬರೀಷ್ ಅವರಿಗೆ ತಲೆನೋವಾಗಿ ಪರಿಣಮಿಸಿದೆ.
'ಡಿ ಬಾಸ್' ವಿರುದ್ಧ ಸಿಡಿಮಿಡಿಗೊಂಡ ಸಿಎಂ ಕುಮಾರಸ್ವಾಮಿ
ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮಂಗಳವಾರ ಕನಕಪುರದ ರಂಗನಾಥ ಬಡಾವಣೆಯ ದರ್ಶನ್ ಎಂಬವರು ಪತ್ನಿ ಟಿ.ಸುಮಲತಾ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ. ಇವರು ಪ್ರಸ್ತುತ ಬೆಂಗಳೂರು ಸಾಧನ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕಿಯಾಗಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಬಳಿಯ ಗೊರವಿ ಗ್ರಾಮದ ಮಂಜೇಗೌಡ ಅವರ ಪತ್ನಿ ಸುಮಲತಾ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗ್ರಾಮದ ಸಿದ್ದೇಗೌಡರ ಪತ್ನಿ ಸುಮಲತಾ ಎಂಬುವವರು ನಾಮಪತ್ರ ಸಲ್ಲಿಸಿದ್ದಾರೆ.