ಮದ್ದೂರು: ಪಾಲೀಶ್ ನೆಪದಲ್ಲಿ ಚಿನ್ನ ದೋಚುತ್ತಿದ್ದರ ಸೆರೆ
ಮದ್ದೂರು, ಆಗಸ್ಟ್ 04: ಮದ್ದೂರು ಬಳಿ ಪಾಲೀಶ್ ಮಾಡುವ ನೆಪದಲ್ಲಿ ಚಿನ್ನ ಕರಗಿಸುತ್ತಿದ್ದ ಮೂವರು ವಂಚಕರನ್ನು ಪೊಲೀಸರು ಬಂಧಿಸಿದ್ದು ಅದೆಷ್ಟು ಮಂದಿಗೆ ಟೋಪಿ ಹಾಕಿದ್ದಾರೆ ಎಂಬುದು ಪೊಲೀಸರ ತನಿಖೆಯಿಂದ ತಿಳಿಯ ಬೇಕಿದೆ.
ಬಿಹಾರ್ ಮೂಲದ ಮಿಥುಲ್ ಕುಮಾರ್, ಕುಂದನ್ ಶರ್ಮಾ ಹಾಗೂ ಗಜೇಂದ್ರಕುಮಾರ್ ಚೌಹಾಣ್ ಬಂಧಿತ ಅರೋಪಿಗಳು.
ಇವರು ಕಳೆದ 5 ದಿನಗಳ ಹಿಂದೆ ಗ್ರಾಮದ ಹುಲಿಕೆರೆ ಗ್ರಾಮದಲ್ಲಿ ಮಹಿಳೆಯೊಬ್ಬರ ಬಳಿ ಬಂದು 20 ಗ್ರಾಂ ಚಿನ್ನದ ಸರವನ್ನು ಪಾಲೀಶ್ ಮಾಡುವುದಾಗಿ ಹೇಳಿಕೊಂಡು 4 ಗ್ರಾಂನ್ನು ಕರಗಿಸಿಕೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದ್ದವು. ಈ ವಿಷಯ ಬಸವೇಗೌಡದದೊಡ್ಡಿ ಗ್ರಾಮದ ಬಸವರಾಜು ಎಂಬುವರಿಗೆ ತಿಳಿದಿದ್ದು ಅವರು ಈ ವಿಷಯವನ್ನು ತಮ್ಮ ಹೆಂಡತಿಗೆ ತಿಳಿಸಿದ್ದರು.
ಶನಿವಾರ ಬಸವೇಗೌಡದೊಡ್ಡಿ ಗ್ರಾಮಕ್ಕೆ ವಂಚಕರು ಪಾಲೀಸ್ ಮಾಡಲು ಬಂದಾಗ ಬಸವರಾಜು ಪತ್ನಿ ಬಸವರಾಜು ಅವರಿಗೆ ದೂರವಾಣಿ ಕರೆ ಮಾಡಿ ಚಿನ್ನದ ಸರಕ್ಕೆ ಪಾಲೀಸ್ ಮಾಡಲು ಗ್ರಾಮಕ್ಕೆ ಬಂದಿದ್ದಾರೆಂದು ತಿಳಿಸಿದ್ದಾರೆ. ಆಗ ಗ್ರಾಮಕ್ಕೆ ಬಂದು ಪರಿಶೀಲನೆ ಮಾಡಿದಾಗ ಹುಲಿಕೆರೆ ಗ್ರಾಮದಲ್ಲಿ ಪಾಲೀಸ್ ಮಾಡುದಾಗಿ ಮೋಸ ಮಾಡಿದವರು ಇವರೇ ಎಂಬುವುದು ಗೊತ್ತಾಗಿ ಕಂಬಕ್ಕೆ ಕಟ್ಟಿ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.