ಮೈಷುಗರ್ ನಲ್ಲಿ ಹಣ ದುರುಪಯೋಗ ಬಹಿರಂಗಪಡಿಸುವ ಸವಾಲು!
ಮಂಡ್ಯ, ಜೂನ್ 11: ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರಗಳು ಬಿಡುಗಡೆ ಮಾಡಿರುವ 504 ಕೋಟಿ ರೂ. ಹಣ ದುರುಪಯೋಗವಾಗಿದ್ದು, ಆ ಹಗರಣವನ್ನು ದಾಖಲೆಗಳ ಸಹಿತ ಶೀಘ್ರ ಬಹಿರಂಗಪಡಿಸುವುದಾಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ತಿಳಿಸಿದರು.
ಮೈಷುಗರ್ ಕಂಪನಿಯ ಅಭಿವೃದ್ಧಿಗಾಗಿ ಹಲವು ಸರ್ಕಾರಗಳು ನೀಡಿದ 504 ಕೋಟಿ ರೂ. ಹಣದಲ್ಲಿ ಕಾರ್ಖಾನೆಯ ಆಡಳಿತ ಚುಕ್ಕಾಣಿ ಹಿಡಿದಿದ್ದವರು ಏನೆಲ್ಲಾ ಅಕ್ರಮ-ಅನ್ಯಾಯಗಳನ್ನು ಮಾಡಿದ್ದಾರೆ ಎನ್ನುವುದರ ಸಂಪೂರ್ಣ ದಾಖಲೆಗಳು ನಮ್ಮ ಬಳಿ ಇವೆ ಎಂದರು.
ಮೈಷುಗರ್ ಕಾರ್ಖಾನೆಯ ಗೊಂದಲಕ್ಕೆ ತೆರೆ ಬೀಳುತ್ತಾ?
ಹೀಗಿದ್ದೂ ಸಂಸದೆ ಸುಮಲತಾ ಅವರು ನಯದ ಮಾತಿನಿಂದ ಜಿಲ್ಲೆಯ ರೈತರನ್ನು ಯಾಮಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಕಾರ್ಖಾನೆ ಇಂದು 161 ಕೋಟಿ ರೂ. ಸಾಲದ ಹೊರೆ ಹೊತ್ತಿದೆ. ಸದ್ಯ ಕಾರ್ಖಾನೆಯ ಮಿಲ್ ಕಾರ್ಯಾರಂಭಕ್ಕೆ 9.5 ಕೋಟಿ ರೂ. ಅಗತ್ಯವಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕೇ ಹೊರತು ಒ ಅಂಡ್ ಎಂ ಪ್ರತಿಪಾದಿಸುವುದು ತರವಲ್ಲ ಎಂದರು.
ಮಂಡ್ಯ ಜಿಲ್ಲಾಧಿಕಾರಿಗಳು ಸಮಿತಿಯ ಹೋರಾಟವನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಮ್ಮ ಯಾವುದೇ ಮನವಿಗೂ ಮೌನವೊಂದೇ ಅವರ ಉತ್ತರವಾಗುತ್ತಿದೆ. ಸಂಸದರು ಹಾಗೂ ಜಿಲೆಯ ಶಾಸಕರು ಕೆಲವು ಸಭೆಗಳಲ್ಲಿ ಮಾತನಾಡುತ್ತಾರೆ. ಮುಖ್ಯವಾದ ಸಂದರ್ಭಗಳಲ್ಲಿ ಜಾಣಮೌನ ವಹಿಸುತ್ತಿದ್ದಾರೆ ಎಂದು ದೂರಿದ ಸುನಂದಾ ಅವರು, ಇಂದು ಕಾರ್ಖಾನೆ ಆರಂಭಿಸಲೇಬೇಕಾದ ತುರ್ತು ಸನ್ನಿವೇಶ ಸೃಷ್ಟಿಯಾಗಿದೆ. ಶಾಸಕರು ಸರಿಯಾಗಿ ಮಾತನಾಡಲಿ ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿಗಳ ನಿರ್ಲಕ್ಷ್ಯ ಮನೋಭಾವದಿಂದ ನಾವು ಬಹಳ ನೊಂದಿದ್ದೇವೆ. ನಾವೇನು ನಮ್ಮ ಮನೆಯ ಅಭಿವೃದ್ಧಿಗೆಂದು ಹೋರಾಟ ನಡೆಸುತ್ತಿಲ್ಲ. ಮೈಷುಗರ್ ಕಾರ್ಖಾನೆ ಸರ್ಕಾರಿ ಸ್ವಾಮ್ಯದಲ್ಲಿದ್ದರೆ ಕಬ್ಬು ಬೆಳೆಗಾರರ ಹಾಗೂ ಜಿಲ್ಲೆಯ ಜನರ ಆರ್ಥಿಕಾಭಿವೃದ್ಧಿಗೆ ಪೂರಕವಾಗುತ್ತದೆ ಎಂಬುದಷ್ಟೇ ನಮ್ಮ ಧ್ಯೇಯ. ಆದರೆ, ಜಿಲ್ಲಾಧಿಕಾರಿಗಳು ನಮ್ಮ ಯಾವುದೇ ಮನವಿ ಹಾಗೂ ಬೇಡಿಕೆಗಳಿಗೆ ಸ್ಪಂದಿಸಲು ಅತ್ಯಂತ ನಿರ್ಲಕ್ಷ್ಯಭಾವ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜೂ.15ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಹೇಳಿದರು.