ಗ್ರಾ.ಪಂ ಚುನಾವಣಾ ಕಣದಲ್ಲಿ ಟೆಕ್ಕಿಗಳು, ಎಂಬಿಎ, ಬಿ.ಇ ಪದವೀಧರರು!
ಮಂಡ್ಯ, ಡಿಸೆಂಬರ್ 21: ಗ್ರಾಮ ಪಂಚಾಯತಿ ಚುನಾವಣೆ ಎಂದರೆ ನಮಗೆ ಈಗಲೂ ಕಣ್ಮುಂದೆ ಬರುವ ದೃಶ್ಯ ಊರ ಹಿರಿಯ ಅಭ್ಯರ್ಥಿಗಳು, ವಿದ್ಯಾಭ್ಯಾಸ ಕಡಿಮೆ ಇರುವವರು ಮತ್ತು ಹಳ್ಳಿಗಾಡಿನ ಜನರದ್ದು. ಆದರೆ ರಾಜ್ಯದ ಗ್ರಾಮೀಣ ಭಾಗದಲ್ಲಿ ಈಗ ಅಮೂಲಾಗ್ರ ಬದಲಾವಣೆ ಆಗುತ್ತಿದೆ. ವಿದ್ಯಾವಂತ ಯುವಕರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.
ಮತಗಟ್ಟೆಗೆ ಬಾರದ ಎಲೈಟ್ ಕ್ಲಾಸ್ ಜನರೂ ಈಗ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಹಳ್ಳಿಗಳಿಗೆ ಬಾರದ ಎಂಎ, ಬಿಇ, ಎಂಬಿಎ ಪದವೀಧರರೂ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ. ಅಷ್ಟೇ ಅಲ್ಲ ಟೆಕ್ಕಿಗಳು ಉತ್ತಮ ಉದ್ಯೋಗವನ್ನು ಬಿಟ್ಟು ಸ್ಪರ್ಧೆಗೆ ಧುಮುಕಿದ್ದಾರೆ.
ಕ್ಯಾಂಪಸ್ ಸೆಲೆಕ್ಷನ್ನಲ್ಲಿಯೇ ಇನ್ಫೋಸಿಸ್ ಗೆ ಆಯ್ಕೆ
ಈ ವಿದ್ಯಮಾನ ಮಂಡ್ಯ ಜಿಲ್ಲೆಯ ಗ್ರಾ.ಪಂ ಚುನಾವಣೆಯಲ್ಲಿ ಕಂಡು ಬಂದಿದ್ದು, ಮೈಸೂರಿನ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿಖರನಹಳ್ಳಿ ಗ್ರಾಮದ ಯುವಕ ಎಸ್.ಜೆ. ಪ್ರಮೋದ್ ಇದೀಗ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಮೋದ್, ಎಂಬಿಎ ಮುಗಿಸಿ ಕ್ಯಾಂಪಸ್ ಸೆಲೆಕ್ಷನ್ನಲ್ಲಿಯೇ ಇನ್ಫೋಸಿಸ್ ಗೆ ಆಯ್ಕೆಯಾಗಿದ್ದರು. ಅಲ್ಲಿ ಎರಡು ವರ್ಷ ಕೆಲಸ ಮಾಡಿದ ಪ್ರಮೋದ್, ಇದೀಗ ಕದಬಹಳ್ಳಿ ಪಂಚಾಯತಿಯಿಂದ ಸ್ಪರ್ಧಿಸಲು ಉದ್ಯೋಗ ತೊರೆದಿದ್ದಾರೆ. ಅಷ್ಟೊಳ್ಳೆ ಉದ್ಯೋಗವನ್ನು ಬಿಟ್ಟು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನೆಂದು ಕೇಳಿದರೆ, ಗ್ರಾಮಾಭಿವೃದ್ಧಿ ಕನಸು ಎನ್ನುತ್ತಾರೆ.
ಗ್ರಾ.ಪಂ ಚುನಾವಣೆ: ವಿಭಿನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ ಪ್ರಜ್ಞಾವಂತ ಅಭ್ಯರ್ಥಿ
ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಕಣಕ್ಕೆ
ಪ್ರಮೋದ್ ಮಾತ್ರವಲ್ಲ, ಇನ್ನೋರ್ವ ಎಂಬಿಎ ಪದವೀಧರೆ ಸೌಮ್ಯ ಕೂಡ ಇದೇ ದಾರಿ ಹಿಡಿದಿದ್ದಾರೆ. ಇವರು ಬಿಳಗುಂದ ಗ್ರಾಮದವರಾಗಿದ್ದು, ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಕಣಕ್ಕೆ ಇಳಿದಿದ್ದಾರೆ. ಸೌಮ್ಯ ಎಂಬಿಎ ಪದವಿ ಅಭ್ಯಾಸ ಮಾಡಿದ್ದಾರೆ. ಸದ್ಯ ಪತಿಯೊಂದಿಗೆ ತುಮಕೂರಿನಲ್ಲಿ ನೆಲೆಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಗ್ರಾಮದ ಏಳಿಗೆಗಾಗಿ ಸೇವೆ
ವೋಟರ್ ಐಡಿ ಹುಟ್ಟೂರಿನಲ್ಲೇ ಇರುವುದರಿಂದ, ಮಂಡ್ಯದ ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ರಾಜಕಾರಣಕ್ಕೆ ವಿದ್ಯಾವಂತರು ಧುಮುಕಬೇಕು. ಇದರಿಂದ ಸುಧಾರಣೆಯೂ ಆಗುತ್ತದೆ. ನಾನೂ ಅಷ್ಟೇ ಗ್ರಾಮದ ಏಳಿಗೆಗಾಗಿ ಸೇವೆ ಸಲ್ಲಿಸುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಆಸಕ್ತಿ
ಇನ್ನು ಮಳವಳ್ಳಿ ತಾಲೂಕಿನ ಹಲಗೂರು ಗ್ರಾ.ಪಂ ಚುನಾವಣಾ ಕಣದಲ್ಲಿ ಬಿ.ಇ ಪದವೀಧರೆಯೊಬ್ಬರು ಸ್ಪರ್ಧಿಸಿದ್ದಾರೆ. ಹಲಗೂರು ಗ್ರಾಮದವರೇ ಆಗಿರುವ ಶೃತಿ, ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಮಾಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಹೆರಿಗೆಗಾಗಿ ತವರು ಹಲಗೂರಿಗೆ ಬಂದಿದ್ದು, ಇಲ್ಲಿಯೇ ಚುನಾವಣಾ ಕಣಕ್ಕಿಳಿದಿದ್ದಾರೆ.