ತಮಿಳುನಾಡು ರೈತರ ಸೆಳೆದ ಮಂಡ್ಯದ ಆಧುನಿಕ ಕಬ್ಬು ಕೃಷಿ ಪದ್ಧತಿ
ಮಂಡ್ಯ ಸೆಪ್ಟೆಂಬರ್ 15: ಮಂಡ್ಯದ ಕಬ್ಬು ನೆರೆ ರಾಜ್ಯಗಳಲ್ಲಿಯೂ ಖ್ಯಾತಿ ಗಳಿಸಿದೆ. ತಮಿಳುನಾಡಿನ ರೈತರ ತಂಡವೊಂದು ಇತ್ತೀಚೆಗೆ ಮಂಡ್ಯಕ್ಕೆ ಬಂದು ಆಧುನಿಕ ಕಬ್ಬು ಬೆಳೆ ಪದ್ಧತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಹೋಗಿದೆ.
ತಮಿಳುನಾಡಿನಲ್ಲಿ ಭತ್ತದೊಂದಿಗೆ ಅಲ್ಲಿನ ರೈತರು ಕಬ್ಬು ಬೆಳೆಯುತ್ತಾರೆ ಆದರೆ ಅಲ್ಲಿ ಸಾಂಪ್ರದಾಯಿಕ ಪದ್ಧತಿಯನ್ನು ಅಳವಡಿಸಿಕೊಂಡು ಕೃಷಿ ಮಾಡುತ್ತಿರುವುದರಿಂದ ಖರ್ಚಿನ ವೆಚ್ಚ ಅಧಿಕವಾಗುತ್ತಿದ್ದರೂ ಉತ್ತಮ ಇಳುವರಿ ಪಡೆಯುವಲ್ಲಿ ಸೋಲುತ್ತಿದ್ದಾರಂತೆ.
ಸಹಕಾರಿ ಬ್ಯಾಂಕ್ನ ರೈತರ ಸಾಲಮನ್ನಾದ ಎರಡನೇ ಕಂತು ಬಿಡುಗಡೆ
ಹೀಗಾಗಿಯೇ ಅವರು ಮಂಡ್ಯದ ರೈತರು ಅನುಸರಿಸುತ್ತಿರುವ ಬೇಸಾಯ ಕ್ರಮದತ್ತ ಆಕರ್ಷಿತರಾಗಿದ್ದು, ಇಲ್ಲಿ ಕಬ್ಬು ಬೆಳೆಯುವಂತೆ ತಮ್ಮ ಊರಲ್ಲಿ ಬೆಳೆಯುವ ಸಲುವಾಗಿ ತರಬೇತಿ ಪಡೆಯಲು ಆಗಮಿಸಿದ್ದರು. ಹಾಗೆ ತರಬೇತಿ ಪಡೆಯಲು ಬಂದ ರೈತರಿಗೆ ಮಂಡ್ಯ ನಗರದ ಹೊರವಲಯದ ವಿ.ಸಿ. ಫಾರಂನಲ್ಲಿ ತರಬೇತಿಯನ್ನು ನೀಡಲಾಗಿದ್ದು, ಅದಾಗಲೇ ಅವರು ತರಬೇತಿ ಮುಗಿಸಿಕೊಂಡು ತಮ್ಮ ಊರಿಗೂ ಮರಳಿದ್ದಾರೆ.
20 ಮಂದಿ ತಮಿಳುನಾಡು ರೈತರು
ತಮಿಳುನಾಡಿನ ಈರೋಡ್ನಿಂದ ಬಂದ ಸುಮಾರು 20 ಮಂದಿ ರೈತರಲ್ಲಿ ಐವರು ರೈತ ಮಹಿಳೆಯರಿದ್ದರು. ಅವರಿಗೆ ವಿ.ಸಿ.ಫಾರಂನಲ್ಲಿ ಸಸ್ಯ ವಿಜ್ಞಾನಿಗಳಾದ ಕೆ.ವಿ.ಕೇಶವಯ್ಯ, ಆರ್.ಸುಮಾ ಕಬ್ಬು ಬೆಳೆಯುವ ತರಬೇತಿಯನ್ನು ನೀಡಿದ್ದಾರೆ.
ಅಲ್ಪ ಭೂಮಿಯಲ್ಲಿ ಅಧಿಕ ಲಾಭ ತೆಗೆದು ಹುಬ್ಬೇರುವಂತೆ ಮಾಡಿದ ಸಿರಗುಪ್ಪ ರೈತ
ತಮಿಳುನಾಡಿನ ಈರೋಡ್ನಿಂದ ಕಲಿಯಲು ಬಂದಿದ್ದರು
ತಮಿಳುನಾಡಿನ ಈರೋಡ್ ಜಿಲ್ಲೆಯಿಂದ ತರಬೇತಿಗೆ ಬಂದಿದ್ದ ರೈತರ ಪೈಕಿ ಹೆಚ್ಚಿನ ರೈತರು ಕೊಳವೆ ಬಾವಿಯನ್ನು ನಂಬಿ ಕೃಷಿ ಮಾಡುತ್ತಾ ಬಂದಿದ್ದು, ಅವರೆಲ್ಲರೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನೇ ಅನುಸರಿಸುತ್ತಿರುವವರೇ ಆಗಿದ್ದಾರೆ. ಆದರೆ ಈ ಕೃಷಿ ಪದ್ಧತಿಯಿಂದ ಉತ್ಪಾದನಾ ವೆಚ್ಚ ಹೆಚ್ಚು ಆದರೆ ಇಳುವರಿ ಕಡಿಮೆ. ಹೀಗಾಗಿ ಇದನ್ನು ಬಿಟ್ಟು ಮಂಡ್ಯ ರೈತರು ಅನುಸರಿಸುತ್ತಿರುವ ಕೃಷಿಯನ್ನು ಕಲಿತು ಅಲ್ಲಿ ಅದನ್ನು ಅಳವಡಿಸಿಕೊಳ್ಳಲು ಅವರು ಬಂದಿದ್ದರು.
ಕೈ ಕೊಟ್ಟ ತಂಬಾಕು, ರೈತರ ಜೇಬು ತುಂಬಿಸಿದ ಪರ್ಯಾಯ ಬೆಳೆ
ಮಂಡ್ಯದ ವಿ.ಸಿ.ಫಾರಂನಲ್ಲಿ ತರಬೇತಿ
ಹೀಗೆ ಬಂದ ರೈತರಿಗೆ ವಿ.ಸಿ.ಫಾರಂನ ಆವರಣದಲ್ಲಿಯೇ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿತ್ತಲ್ಲದೆ ಪ್ರಗತಿಪರ ಕೃಷಿಕರು ಕಬ್ಬು ಬೇಸಾಯದಲ್ಲಿನ ವಿವಿಧ ಅಂಶಗಳ ಕುರಿತು ಒಳ ಮತ್ತು ಹೊರಾಂಗಣ ತರಬೇತಿ ನೀಡಿದ್ದರು.
ಜತೆಗೆ ಅಧಿಕಾರಿಗಳು ವಿಶೇಷ ಉಪನ್ಯಾಸಗಳು, ಪ್ರಾತ್ಯಕ್ಷಿಕೆ, ಛಾಯಾಚಿತ್ರ ಹಾಗೂ ವಿಡಿಯೋ ಪ್ರದರ್ಶನ ಮೂಲಕ ಕೃಷಿ ಕುರಿತಂತೆ ಮಾಹಿತಿಯನ್ನು ಒದಗಿಸಿದ್ದಾರೆ.
ನೀರಿನ ಬಳಕೆ, ರಾಸಾಯನಿಕ, ಗೊಬ್ಬರದ ಬಗ್ಗೆ ಮಾಹಿತಿ
ನೀರಿನ ಮಿತ ಹಾಗೂ ಸಮರ್ಪಕ ಬಳಕೆ, ಗೊಬ್ಬರ ಮತ್ತು ಕೀಟನಾಶಕಗಳ ಸಮರ್ಪಕ ಬಳಕೆ, ನೀರು ಪೋಲು ತಡೆ, ಬೇಕಾಬಿಟ್ಟಿ ಗೊಬ್ಬರ ಮತ್ತು ಕೀಟನಾಶಕ ಬಳಕೆಯ ಅಡ್ಡಪರಿಣಾಮ, ಬೀಜಗಳ ಉತ್ಪಾದನೆ ಮತ್ತು ಆಯ್ಕೆಯಲ್ಲಿ ಬಳಸಬೇಕಾದ ಎಚ್ಚರಿಕೆ, ಅಂತರ್ಗತ ಬೇಸಾಯ ಪದ್ಧತಿ, ಸಾಲುಗಳ ನಡುವೆ ಕಾಯ್ದುಕೊಳ್ಳಬೇಕಾದ ಅಂತರ, ನೀರು ಕಟ್ಟುವುದು, ಕಬ್ಬನ್ನು ಅಧಿಗೂ ಮುನ್ನ ಮತ್ತು ಅವಧಿಯ ನಂತರ ಕಟಾವು ಮಾಡುವುದರಿಂದ ಇಳುವರಿಯ ಮೇಲೆ ಉಂಟಾಗುವ ಪರಿಣಾಮ ಮೊದಲಾದ ವಿಷಯಗಳ ಕುರಿತಂತೆ ಮಾಹಿತಿಯನ್ನು ಒದಗಿಸಿದ್ದಾರೆ.
ಮಂಡ್ಯ ವಿಧಾನ ತಮಿಳುನಾಡಿನಲ್ಲಿ ಚಾಲ್ತಿ
ಕಬ್ಬು ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ರೈತರು ತಮ್ಮ ಊರಿಗೆ ಮರಳಿದ್ದು, ಮಂಡ್ಯ ಜಿಲ್ಲೆಯ ರೈತರು ಬಳಸುವ ವಿಧಾನವನ್ನು ಬಳಸಿ ಅಲ್ಲಿ ಕಬ್ಬು ಕೃಷಿಗೆ ಮುಂದಾಗಿದ್ದಾರೆ. ಮಂಡ್ಯದ ಕಬ್ಬಿನ ಕೃಷಿ ಪದ್ಧತಿ ಇತರೆ ರಾಜ್ಯದ ರೈತರನ್ನು ಸೆಳೆದಿದ್ದು ನಿಜಕ್ಕೂ ಶ್ಲಾಘನೀಯ ವಿಚಾರ.