ಮಂಡ್ಯ ಉಪ ಚುನಾವಣೆ : ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ನಿರಾಳ
ಮಂಡ್ಯ, ಅಕ್ಟೋಬರ್ 16 : ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ ನಿರಾಳಗೊಂಡಿದೆ. ಚುನಾವಣೆಯಲ್ಲಿ ಎದುರಾಗಬಹುದಾಗಿದ್ದ ದೊಡ್ಡ ಸವಾಲು ಈಗ ಇಲ್ಲವಾಗಿದೆ.
ಹೌದು, ನವೆಂಬರ್ 3ರಂದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮೈತ್ರಿಕೊಂಡಿದ್ದು, ಎಲ್.ಆರ್.ಶಿವರಾಮೇಗೌಡ ಒಮ್ಮತದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಮಂಡ್ಯ ಉಪ ಚುನಾವಣೆ : ಬಿಜೆಪಿ ಅಭ್ಯರ್ಥಿ ಆಯ್ಕೆ ಬಗ್ಗೆ ಅಸಮಾಧಾನ!
ಆದರೆ, ಮೈತ್ರಿಕೂಟಕ್ಕೆ ದೊಡ್ಡ ಸವಾಲು ಎದುರಾಗಿತ್ತು. ಸ್ವರಾಜ್ ಇಂಡಿಯಾ ಪಕ್ಷದಿಂದ ಮಾಜಿ ಶಾಸಕ, ರೈತ ಮುಖಂಡ ದಿ.ಪುಟ್ಟಣ್ಣಯ್ಯ ಪತ್ನಿ ಸುನೀತಾ ಅವರು ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಸುನೀತಾ ಅವರು ಕಣಕ್ಕಿಳಿದಿದ್ದರೆ ಮೈತ್ರಿಕೂಟ ತೀವ್ರ ಪೈಪೋಟಿ ಎದುರಿಸಬೇಕಿತ್ತು.
ಮಂಡ್ಯ ಉಪ ಚುನಾವಣೆ : ಶಿವರಾಮೇಗೌಡರಿಗೆ ಟಿಕೆಟ್ ಸಿಗಲು 5 ಕಾರಣಗಳು
ನಾಮಪತ್ರವನ್ನು ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿದೆ. ಸುನೀತಾ ಅವರು ಕಣಕ್ಕಿಳಿಯುತ್ತಿಲ್ಲ. ಬಿಜೆಪಿಯಿಂದ ನಿವೃತ್ತ ಸರ್ಕಾರಿ ನೌಕರರಾದ ಡಾ.ಸಿದ್ದರಾಮಯ್ಯ ಅವರು ಕಣದಲ್ಲಿದ್ದಾರೆ.
ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಗೆ ಗೆಲುವು ಸುಲಭವಿಲ್ಲ
ಸಂಧಾನ ಸಭೆ
ಸ್ವರಾಜ್ ಇಂಡಿಯಾದಿಂದ ದಿ.ಪುಟ್ಟಣ್ಣಯ್ಯ ಪುತ್ನಿ ಸುನೀತಾ ಅವರು ಕಣಕ್ಕಿಳಿದರೆ ಮೈತ್ರಿಕೂಟದ ಗೆಲುವಿಗೆ ಹಿನ್ನಡೆ ಆಗುತ್ತಿತ್ತು. ಆದ್ದರಿಂದ, ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಅವರ ಜೊತೆ ಸಂಧಾನ ಸಭೆ ನಡೆಸಿ ಅಭ್ಯರ್ಥಿ ಕಣಕ್ಕಿಳಿಸಬಾರದು ಎಂದು ಮನವಿ ಮಾಡಿದ್ದಾರೆ. ಆದ್ದರಿಂದ, ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿಲ್ಲ.
ಚೆಲುವರಾಯಸ್ವಾಮಿ ಬೆಂಬಲ?
ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಡ ಎಂದು ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಒತ್ತಾಯಿಸಿದ್ದರು. ಆದರೂ ಪಕ್ಷದ ನಾಯಕರು ಮೈತ್ರಿ ಮಾಡಿಕೊಂಡಿದ್ದರು. ಆದ್ದರಿಂದ, ಅವರು ಸುನೀತಾ ಅವರನ್ನು ಕಣಕ್ಕಿಳಿಸುವಂತೆ ಮಾತುಕತೆ ನಡೆಸಿರುವ ಸಾಧ್ಯತೆ ಇದೆ.
ಚೆಲುವರಾಯಸ್ವಾಮಿ ಹೇಳುವುದೇನು?
ಮಂಡ್ಯ ಲೋಕಸಭೆ ಉಪ ಚುನಾವಣೆ ಬಗ್ಗೆ ಮಾತನಾಡಿರುವ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಅವರು, 'ಮಂಡ್ಯ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಅವರು ಯಾರನ್ನು ಬೇಕಾದರೂ ಅಭ್ಯರ್ಥಿಯನ್ನಾಗಿ ಮಾಡಲಿ. ನಮಗೂ ಅದಕ್ಕೂ ಸಂಬಂಧವಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಹಾಗಂತ ಜಂಟಿಯಾಗಿ ಅಭ್ಯರ್ಥಿ ಹಾಕಿಲ್ಲ.ಪಕ್ಷದ ವರಿಷ್ಠರ ಸೂಚನೆ ಪಾಲಿಸುವೆ' ಎಂದು ಅವರು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ಸೋಲು
2018ರ ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ದಿ.ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಅವರು ಸ್ವರಾಜ್ ಇಂಡಿಯಾ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 73,779 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದ್ದರು. ಈಗ ಮಂಡ್ಯ ಲೋಕಸಭೆ ಉಪ ಚುನಾವಣೆಗೆ ಸ್ವರಾಜ್ ಇಂಡಿಯಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂಬ ಸುದ್ದಿ ಹಬ್ಬಿತ್ತು.
ಬಿಜೆಪಿ/ಜೆಡಿಎಸ್ ಹೋರಾಟ
ಮಂಡ್ಯ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಡೆಯಲಿದೆ. ಬಿಜೆಪಿಯಿಂದ ಡಾ.ಸಿದ್ದರಾಮಯ್ಯ, ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿ ಎಲ್.ಆರ್.ಶಿವರಾಮೇಗೌಡ ಕಣದಲ್ಲಿದ್ದಾರೆ. (ಚಿತ್ರ : ಬಿಜೆಪಿ ಅಭ್ಯರ್ಥಿ ಸಿದ್ದರಾಮಯ್ಯ)