ಸುಮಲತಾ ಗೆದ್ದು ಸಚಿವ ಸ್ಥಾನ ಸಿಗುತ್ತದಂತೆ; ಈ ಸ್ವಾಮಿಯ ಭವಿಷ್ಯ ಕೇಳಿ
Recommended Video
ಮಂಡ್ಯ, ಮೇ 6: ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶದ ಕುರಿತಂತೆ ಎಲ್ಲರೂ ಮಾತನಾಡುತ್ತಿದ್ದು, ಸ್ವಾಮಿಗಳು, ಜ್ಯೋತಿಷಿಗಳು ಭವಿಷ್ಯ ನುಡಿಯುತ್ತಲೇ ಇದ್ದಾರೆ. ಕೆಲವರು ಒಗಟಾಗಿ ಭವಿಷ್ಯ ನುಡಿದರೆ, ಮುಖ್ಯಮಂತ್ರಿಗೆ ನೀಡಿದ ಗುಪ್ತಚರ ವರದಿಗಳಲ್ಲಿ ನಿಖಿಲ್ ಕುಮಾರಸ್ವಾಮಿ ಕಡೆಗೆ ಹೆಚ್ಚು ಒಲವು ವ್ಯಕ್ತಪಡಿಸುವುದು ಕಂಡು ಬರುತ್ತಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಈ ಮಧ್ಯೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸುವುದರ ಜತೆಗೆ ಕೇಂದ್ರ ಸಚಿವರಾಗುವುದು ಖಚಿತ ಎಂದು ಬೀದರ್ ಜಿಲ್ಲೆ ಬಸವಕಲ್ಯಾಣದ ಬಸವಧರ್ಮ ಪ್ರಸಾರಕ ಶ್ರೀ ಬಸವಾನಂದಸ್ವಾಮಿ ವಿಭೂತಿಮಠ ಭವಿಷ್ಯ ನುಡಿದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಸರ್ವ ಸಂಗ ಪರಿತ್ಯಾಗಿಗಳಾದವರು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಹೀಗೆ ಭವಿಷ್ಯ ನುಡಿಯುವ ಮೂಲಕ ಸುಮಲತಾ ಅಭಿಮಾನಿಗಳನ್ನು ಖುಷಿಪಡಿಸಿದರೆ, ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿ ಆಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಸುಮಲತಾ ಮಧ್ಯೆ ತುರುಸಿನ ಪೈಪೋಟಿ ನಡೆದಿತ್ತು. ಇದೀಗ ಮತದಾನ ಆಗಿ, ಫಲಿತಾಂಶಕ್ಕೆ ಎದುರು ನೋಡಲಾಗುತ್ತಿದೆ.
ಚುನಾವಣೆಯಲ್ಲಿ ಪ್ರಬುದ್ಧವಾಗಿ ಮಾತಾಡಿದರು ಸುಮಲತಾ
ಶ್ರೀ ಬಸವಾನಂದಸ್ವಾಮಿ ವಿಭೂತಿಮಠ ಅವರು ಮಾತನಾಡುತ್ತಾ ಕೆಲವು ವಿಚಾರಗಳನ್ನು ಬಹಿರಂಗಪಡಿಸಿದ್ದು, ಸುಮಲತಾ ಅವರನ್ನು ಹಾಡಿ ಹೊಗಳಿದ್ದಾರೆ. ಚುನಾವಣೆಯಲ್ಲಿ ಪ್ರಬುದ್ಧತೆಯಿಂದ ಮಾತಾಡುವುದರ ಜತೆಗೆ ಎಲ್ಲ ಸಮುದಾಯದವರ ಮನಸ್ಸನ್ನು ಗೆಲ್ಲುವಲ್ಲಿ ಸುಮಲತಾ ಅಂಬರೀಶ್ ಯಶಸ್ವಿಯಾಗಿದ್ದಾರೆ. ಅವರ ಪ್ರತಿ ಮಾತು ಸುಮಧುರ, ಸುಸಂಸ್ಕೃತವಾಗಿತ್ತು ಎಂದಿದ್ದಾರೆ.
ಉತ್ತಮ ಸಚಿವ ಸ್ಥಾನ ಪಡೆಯಲಿದ್ದಾರೆ
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮತದಾನವಾಗಿದೆ. ಇದು ಸುಮಲತಾ ಅವರಿಗೆ ಸಹಾಯವಾಗಲಿದೆ. ಈ ಎಲ್ಲ ಅಂಶ ಗಮನಿಸಿದರೆ ಗೆಲುವು ಖಚಿತವಾಗಿದೆ. ಅಂತೆಯೇ, ಅವರ ಬುದ್ಧಿ ಸಾಮರ್ಥ್ಯಕ್ಕೆ ತಕ್ಕಂತೆ ಉತ್ತಮ ಸಚಿವ ಸ್ಥಾನ ಪಡೆಯುತ್ತಾರೆ. ಅಲ್ಲದೆ, ರಾಜಕಾರಣದಲ್ಲಿ ಅವರಿಗೆ ಅತ್ಯುತ್ತಮವಾದ ಭವಿಷ್ಯವಿದೆ. ನಾನು ಕೂಡ ಎರಡು ದಿನ ಕ್ಷೇತ್ರದ ವಿವಿಧೆಡೆ ಅವರ ಪರ ಮತ ಯಾಚನೆ ಮಾಡಿದ್ದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ
ಇನ್ನು ದೇಶದ ರಕ್ಷಣೆಯ ದೃಷ್ಟಿಯಿಂದ ನರೇಂದ್ರ ಮೋದಿ ಅವರ ಆಡಳಿತ ಬೇಕಿದೆ. ಮಾಸ್ ಲೀಡರ್ ಆಗಿರುವ ಅವರು, ಎರಡನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುವುದು ನಿಶ್ಚಿತ. ಅಂತೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಅವರ ಪ್ರಚಾರ ಮಾಡಲು ವಾರಣಾಸಿಗೆ ಹೋಗುತ್ತಿರುವುದಾಗಿಯೂ ಇದೇ ವೇಳೆ ತಿಳಿಸಿದರು.
ಫಲಿತಾಂಶ ಬರುವ ತನಕ ಕಾಯಬೇಕು
ಈಗಾಗಲೇ ಫಲಿತಾಂಶದ ಕುರಿತಂತೆ ಭಾರೀ ಚರ್ಚೆಗಳು ನಡೆಯುತ್ತಿರುವ ವೇಳೆಯಲ್ಲೇ ಈ ಹೇಳಿಕೆಗಳು ಒಂದಷ್ಟು ಚರ್ಚೆಗಳಿಗೆ ಕಾರಣವಾಗಿದೆ. ಮೇ 23ರ ಫಲಿತಾಂಶ ಬರುವ ತನಕ ಈ ರೀತಿಯ ಹೇಳಿಕೆಗಳು ಬರುತ್ತಲೇ ಇರುತ್ತವೆ. ಆದರೆ ಫಲಿತಾಂಶ ಬರುವ ತನಕ ನಾವು ಕಾಯಲೇ ಬೇಕಾಗಿದೆ.