ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು ಯಾರು? ಅಂದಿನ ಸತ್ಯ ಈಗ ಬಹಿರಂಗ!
Recommended Video
ಮಂಡ್ಯ, ಸೆ 23: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಪತನಗೊಂಡ ನಂತರ, ಇಬ್ಬರ ನಡುವೆ ಈಗಾಗಲೇ ಬಹಿರಂಗ ವಾಕ್ಸಮರ ಆರಂಭವಾಗಿದೆ. ಉಪಚುನಾವಣೆಯಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ, ಇಬ್ಬರೂ ಹೇಳಿಯಾಗಿದೆ.
ಈಗ, ಒಂದೊಂದೆ ವಿಷಯಗಳು ಹೊರಕ್ಕೆ ಬರುತ್ತಿವೆ. ಅದರಲ್ಲಿ, ಸುಮಲತಾ ಅಂಬರೀಶ್, ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರದಲ್ಲಿ ಅವರಿಗೆ ಯಾರ ಬೆಂಬಲವಿತ್ತು ಎನ್ನುವ ವಿಷಯದ ಸತ್ಯಾಸತ್ಯತೆಯೂ ಹೊರಬಂದಿದೆ.
ಸಿದ್ದರಾಮಯ್ಯ ಮಗನ ಸಾವಿಗೆ ಕಾರಣ ಯಾರು? ಎಂಟಿಬಿ ನಾಗರಾಜ್ ಸ್ಪೋಟಕ ಹೇಳಿಕೆ
" ಸುಮಲತಾ ಅವರನ್ನು ಕಣಕ್ಕಿಳಿಸಿರುವ ಹಿಂದೆ, ನಮ್ಮ ಪಕ್ಷದ ಮುಖಂಡರ 'ಕೈ'ವಾಡವಿದೆ" ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿಕೆಯನ್ನು ನೀಡಿದ್ದಾರೆ. ಹಾಗಾಗಿ, ಎಲ್ಲರಿಗೂ ಗೊತ್ತಿದ್ದ ಸತ್ಯ, ಈಗ ಬಹಿರಂಗಗೊಂಡಂತಾಗಿದೆ.
ಯಡಿಯೂರಪ್ಪ ದೆಹಲಿ ಭೇಟಿ ಕಾರಣ ಬಿಚ್ಚಿಟ್ಟ ಕುಮಾರಸ್ವಾಮಿ!
ಸುಮಲತಾ ಅವರು, ಕಾಂಗ್ರೆಸ್ ಟಿಕೆಟಿಗಾಗಿ ಬಹಳ ಪ್ರಯತ್ನವನ್ನು ನಡೆಸಿದ್ದರು. ಸಿದ್ದರಾಮಯ್ಯ, ಪರಮೇಶ್ವರ್, ಡಿ.ಕೆ.ಶಿವಕುಮಾರ್ ಮುಂತಾದ ನಾಯಕರನ್ನೂ ಭೇಟಿಯಾಗಿದ್ದರು. ಅದ್ಯಾವುದೂ ವರ್ಕೌಟ್ ಆಗದೇ ಇದ್ದಾಗ, ಪಕ್ಷೇತರರರಾಗಿ ಸ್ಪರ್ಧಿಸಿ, ಗೆದ್ದಿದ್ದು, ಈಗ ಇತಿಹಾಸ. ಕಾಂಗ್ರೆಸ್ ಮುಖಂಡರ್ ಹೇಳಿಕೆ ಹೀಗಿದೆ:
ಚುನಾವಣೆ ನಡೆಯುತ್ತಿರುವ ಮಂಡ್ಯದಲ್ಲೋ, ಇಂಡ್ಯದಲ್ಲೋ
ಚುನಾವಣೆ ನಡೆಯುತ್ತಿರುವುದು ಮಂಡ್ಯದಲ್ಲೋ, ಇಂಡ್ಯದಲ್ಲೋ ಎನ್ನುವ ಮಟ್ಟಿಗೆ ಅಲ್ಲಿನ ಲೋಕಸಭಾ ಚುನಾವಣೆ ಕಾವನ್ನು ಪಡೆದಿತ್ತು. ಕಂಡು ಕೇಳರಿಯದ ವಾಕ್ಸಮರಕ್ಕೆ ಚುನಾವಣಾ ಆಖಾಡ ವೇದಿಕೆಯಾಗಿತ್ತು. ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕಾಂಗ್ರೆಸ್ಸಿಗೆ ಬೆಂಬಲಿಸಿದ್ದು ಗೌಪ್ಯವಾಗಿ ಉಳಿದಿರಲಿಲ್ಲ.
ನಿಖಿಲ್ ಕುಮಾರಸ್ವಾಮಿ
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಪರ ಕಾಂಗ್ರೆಸ್ ಮುಖಂಡರು ಪ್ರಚಾರವನ್ನೇನೋ ಮಾಡಿದ್ದರು. ಆದರೆ, ಅದು ಒಳಗೊಂದು, ಹೊರಗೊಂದು ಎನ್ನುವುದು ಗೊತ್ತಾಗಲು ಹೆಚ್ಚುದಿನ ಬೇಕಾಗಿರಲಿಲ್ಲ. ಈಗ, ಸುಮಲತಾ ಅವರನ್ನು ಕಣಕ್ಕಿಸಿದ್ದೇ ನಾವು ಎಂದು ಜಿಲ್ಲೆಯ ಪ್ರಭಾವೀ ಕಾಂಗ್ರೆಸ್ ಮುಖಂಡರೊಬ್ಬರು ಒಪ್ಪಿಕೊಂಡಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು
ಕೆ.ಆರ್.ಪೇಟೆ ಉಪಚುನಾವಣೆಯ ದಿನಾಂಕ ಘೋಷಣೆಯಾದ ನಂತರ, ಕ್ಷೇತ್ರದ ಕಾರ್ಯಕರ್ತರ ಮತ್ತು ಮುಖಂಡರ ಸಭೆಯನ್ನು ಭಾನುವಾರ (ಸೆ 22) ಆಯೋಜಿಸಲಾಗಿತ್ತು. ಆ ಸಭೆಯಲ್ಲಿ ಮುಖಂಡ ಕೆ.ಬಿ. ಚಂದ್ರಶೇಖರ್, ಮಂಡ್ಯದಲ್ಲಿ ಸುಮಲತಾ ಅವರನ್ನು ಕಣಕ್ಕಿಳಿಸಿದ್ದು ಕಾಂಗ್ರೆಸ್ ಎನ್ನುವ ಮಾತನ್ನು ಹೇಳಿದ್ದಾರೆ.
ದೇವೇಗೌಡರೇ ಸ್ಪರ್ಧಿಸಲಿ ಎನ್ನುವ ಪ್ರಸ್ತಾವನೆಯನ್ನು ಮುಂದಿಟ್ಟೆವು
" ಜಿಲ್ಲೆಯ ಎಲ್ಲಾ ಏಳೂ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಮೂವರು ಸಚಿವರಿದ್ದಾರೆ. ಶಿವರಾಮೇಗೌಡ ಅವರನ್ನೇ ಕಣಕ್ಕಿಳಿಸುವಂತೆ ಒತ್ತಾಯಿಸಲಾಗಿತ್ತು. ಅದಕ್ಕೆ, ಜೆಡಿಎಸ್ ವರಿಷ್ಠರು ಸೊಪ್ಪು ಹಾಕಲಿಲ್ಲ. ಇದಾಗದಿದ್ದಾಗ, ದೇವೇಗೌಡರೇ ಸ್ಪರ್ಧಿಸಲಿ ಎನ್ನುವ ಪ್ರಸ್ತಾವನೆಯನ್ನು ಮುಂದಿಟ್ಟೆವು" ಎಂದು ಚಂದ್ರಶೇಖರ್ ಹೇಳಿದರು.
ಕುಮಾರಸ್ವಾಮಿಯವರ ಸುಳ್ಳು ಆಶ್ವಾಸನೆ ಮುಳುವಾಯಿತು
" ಅದಕ್ಕೂ ಒಪ್ಪದೇ, ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಕಾಂಗ್ರೆಸ್ಸಿನ ಯಾವ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸವನ್ನು ಮಾಡಲಿಲ್ಲ. ಕುಮಾರಸ್ವಾಮಿಯವರ ಸುಳ್ಳು ಆಶ್ವಾಸನೆ, ಸುಮಲತಾ ಅವರ ವೈಯಕ್ತಿಕ ವಿಚಾರವನ್ನು ಕೆದಕಿದ್ದು ಜೆಡಿಎಸ್ಸಿಗೆ ಮುಳುವಾಯಿತು" ಎಂದು ಚಂದ್ರಶೇಖರ್ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ನಡುವೆ ಸಂಬಂಧ ಹಾಳಾಗಿತ್ತು
" ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕುಮಾರಸ್ವಾಮಿ ಅಲೆಯಿತ್ತು. ಹಾಗಾಗಿ, ಎಲ್ಲಾ ಏಳು ಕ್ಷೇತ್ರಗಳನ್ನು ಜೆಡಿಎಸ್ ಗೆದ್ದಿತು. ಲೋಕಸಭಾ ಚುನಾವಣೆಯ ವೇಳೆ, ಕಾಂಗ್ರೆಸ್ - ಜೆಡಿಎಸ್ ನಡುವೆ ಸಂಬಂಧ ಹಾಳಾಗಿತ್ತು. ಹಾಗಾಗಿ, ಸುಮಲತಾ ಅವರನ್ನು ಕಣಕ್ಕಿಳಿಸಿ, ಪರೋಕ್ಷವಾಗಿ ಬೆಂಬಲಿಸುವ ನಿರ್ಧಾರವನ್ನು ಮಾಡಲಾಯಿತು " ಎಂದು ಚಂದ್ರಶೇಖರ್ ಹೇಳಿದರು.