ಮೆಚ್ಚುಗೆಗೆ ಪಾತ್ರವಾದ ಸುಮಲತಾ ಅಂಬರೀಷ್ ಫೇಸ್ಬುಕ್ ಪೋಸ್ಟ್ನಲ್ಲಿ ಏನಿದೆ?
ಮಂಡ್ಯ, ಮೇ 25: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಅಮೋಘ ಜಯ ಸಾಧಿಸಿ ಇತಿಹಾಸ ನಿರ್ಮಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್, ಮಂಡ್ಯದ ಜನತೆಗೆ ಮಾತ್ರವಲ್ಲದೆ ಇಡೀ ರಾಜ್ಯದ ಜನರಿಗೆ ವಿಶೇಷವಾದ ಮನವಿಯೊಂದನ್ನು ಸಲ್ಲಿಸಿದ್ದಾರೆ.
ಚುನಾವಣೆ ಮುಗಿದ ಬಳಿಕ ಎಲ್ಲರೂ ತಮಗೆ ಬೆಂಬಲ ನೀಡಿದ ವ್ಯಕ್ತಿಗಳು, ಸಂಘಟನೆ ಹಾಗೂ ಪಕ್ಷಗಳಿಗೆ ಧನ್ಯವಾದ ಅರ್ಪಿಸುವುದು ಸಹಜ. ಸುಮಲತಾ ಅವರೂ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳ ಮೂಲಕ ತಮ್ಮ ಗೆಲುವಿಗೆ ಕಾರಣರಾದವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆದರೆ, ಶನಿವಾರ ಅವರು ಪ್ರಕಟಿಸಿರುವ ಫೇಸ್ಬುಕ್ ಪೋಸ್ಟ್ ಅತ್ಯಂತ ವಿಶಿಷ್ಟವಾದುದು. ಗೆಲುವಿನ ಸಂಭ್ರಮದಲ್ಲಿ ತೇಲಾಡದೆ, ಪ್ರಬುದ್ಧತೆಯಿಂದ ಹಾಗೂ ಕಾಳಜಿಯಿಂದ ಜನಪ್ರತಿನಿಧಿಯೊಬ್ಬರು ಮಾಡಬೇಕಾದ ಕೆಲಸವನ್ನು ಸುಮಲತಾ ಮಾಡಿದ್ದಾರೆ.
ಮಂಡ್ಯ ಜನ ಪ್ರೀತಿಗೆ ಮರುಳಾಗುತ್ತಾರೆ, ಮೋಸಕ್ಕಲ್ಲ: ಸುಮಲತಾ
ಚುನಾವಣಾ ಪ್ರಚಾರದುದ್ದಕ್ಕೂ ಎದುರಾದ ನಿಂದನೆಗಳು, ಬೆದರಿಕೆ, ಅವಮಾನ, ಟೀಕೆಗಳಿಗೆ ಪ್ರತ್ಯುತ್ತರ ನೀಡದೆ ಎಲ್ಲವನ್ನೂ ಅವುಡುಗಚ್ಚಿ ಸಹಿಸಿಕೊಂಡು ಸುಮಲತಾ ಪ್ರದರ್ಶಿಸಿದ್ದ ಸಂಯಮ ವ್ಯಾಪಕ ಪ್ರಶಂಸೆಗೆ ಅರ್ಹವಾಗಿತ್ತು. ಪ್ರಚಾರ ಸಭೆಗಳಲ್ಲಿ ಅವರ ಭಾಷಣಗಳು, ತಮ್ಮೊಂದಿಗೆ ಎಲ್ಲರನ್ನೂ ಕರೆದುಕೊಂಡು ಹೋದ ಬಗೆ ಅಷ್ಟೇ ಚರ್ಚೆಗೆ ಒಳಗಾಗಿತ್ತು. ತಮ್ಮ ವಿರುದ್ಧ ಆಕ್ಷೇಪಾರ್ಹ ಪದಗಳ ಬಳಕೆಯಾದಾಗಲೂ ಸುಮಲತಾ, ಎದುರಾಳಿಗಳಂತೆ ತಾವು ಕೊಳಕು ರಾಜಕೀಯ ಮಾಡುವುದಿಲ್ಲ ಎಂಬುದನ್ನು ಸಾಬೀತುಪಡಿಸುವ ಸ್ಥಿತಪ್ರಜ್ಞೆ ಮೆರೆದಿದ್ದರು. ಅವರಲ್ಲಿ ಒಬ್ಬ ಪ್ರಬುದ್ಧ ರಾಜಕಾರಣಿ ಇದ್ದಾರೆ ಎಂದು ಅನೇಕರು ಶ್ಲಾಘಿಸಿದ್ದರು.
ಈಗ ಸುಮಲತಾ ಅವರು ಫೇಸ್ಬುಕ್ನಲ್ಲಿ ಬರೆದಿರುವ ಪುಟ್ಟ ಬರಹ ಅದನ್ನು ಸಾಬೀತುಪಡಿಸುವಂತಿದೆ. ಯಾವ ಜನಪ್ರತಿನಿಧಿಯೂ ಮಾಡಿರದ ಮನವಿಯನ್ನು ಅವರು ಮಾಡಿದ್ದಾರೆ. ಈ ಪೋಸ್ಟ್ ಪ್ರಕಟಿಸಿದ ಒಂದು ಗಂಟೆಯೊಳಗೇ ಎರಡೂವರೆ ಸಾವಿರಕ್ಕೂ ಅಧಿಕ ಲೈಕ್ ಬಂದಿದ್ದು, 180ಕ್ಕೂ ಹೆಚ್ಚು ಮಂದಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ.
ಚುನಾವಣೆಗೆ ಬಿಟ್ಟುಬಿಡಿ
ನನ್ನ ಎಲ್ಲಾ ಬಂಧುಗಳೇ ..ಚುನಾವಣೆ ಮುಗಿದಿದೆ ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಳು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ ಆದರೆ ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು ಪರಸ್ಪರ ಹೊಂದಾಣಿಕೆಯ ಜೀವನ ನಡೆಸುತ್ತಿರುವವರು ಚುನಾವಣೆಯ ದ್ವೇಷಗಳನ್ನು ವೈಷಮ್ಯಗಳನ್ನು ಚುನಾವಣೆಗೆ ಬಿಟ್ಟುಬಿಡಬೇಕು. ಚುನಾವಣೆ ಮುಗಿದು ಫಲಿತಾಂಶ ಬಂದ ನಂತರವೂ ಅದನ್ನು ಮುಂದುವರಿಸಬಾರದು ಒಂದೇ ಕುಟುಂಬದಂತೆ ನಾವೆಲ್ಲರೂ ಬದುಕಬೇಕಾಗಿದೆ.
ಮಂಡ್ಯದಲ್ಲಿ ನಾಲ್ವರು ಸುಮಲತಾ ಪಡೆದ ಮತಗಳೆಷ್ಟು?
ಒಂದೇ ಕುಟುಂಬದಂತೆ ಬದುಕೋಣ
ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಇವೆಲ್ಲವೂ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು ಚುನಾವಣೆಯ ನಂತರ ನಮ್ಮ ಊರು ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಬೇಕು, ಚಿಂತಿಸಬೇಕು. ಮಂಡ್ಯದ ಜನತೆಯಾದ ನಾವೆಲ್ಲರೂ ಒಂದೇ ಕುಟುಂಬದಂತೆ ಬದುಕೋಣ. ರಾಜಕೀಯ ಕಿತ್ತಾಟಗಳನ್ನು ದಯವಿಟ್ಟು ಯಾರೂ ಮಾಡಬೇಡಿ .ಇದು ನನ್ನ ಜನತೆಯಲ್ಲಿ ನನ್ನ ಪ್ರೀತಿಯ ಮನವಿ ಎಂದು ಸುಮಲತಾ ಹೇಳಿದ್ದಾರೆ.
ಋಣಿಯಾಗಿದ್ದೇನೆ
ಮಂಡ್ಯದ ಜನ ನನ್ನ ಪರವಾಗಿ ಇದ್ದರು. ಅಂಬರೀಷ್ ಮೇಲಿನ ಪ್ರೀತಿ ನನ್ನ ಕೈ ಹಿಡಿಯಿತು. ಇದು ಅಂಬರೀಷ್, ಮಂಡ್ಯದ ಸ್ವಾಭಿಮಾನಿಗಳ ಗೆಲುವು. ಕಾಂಗ್ರೆಸ್ಸಿನ ರೆಬೆಲ್ ಕಾರ್ಯಕರ್ತರು, ರಾಜ್ಯ ರೈತ ಸಂಘದವರು, ಯಶ್, ದರ್ಶನ್ ಅಭಿಮಾನಿಗಳು, ನನ್ನ ಪುಟ್ಟ ತಂಡ ಹಗಲು ರಾತ್ರಿ ದುಡಿದರು, ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ ಎಂದು ಸುಮಲತಾ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಸುಮಲತಾ: ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದ ಕರ್ನಾಟಕದ ಮೊದಲ ಮಹಿಳೆ
ಸ್ವಾಭಿಮಾನ ಎಂದರೇನೆಂದು ತೋರಿಸಿದ್ದರು
ಮಂಡ್ಯದ ಜನ ಸ್ವಾಭಿಮಾನ ಎಂದರೆ ಏನು ಎಂಬುದನ್ನು ಇಂಡಿಯಾಕ್ಕೆ ತೋರಿಸಿಬಿಟ್ಟರು. ಅವರು ಎಷ್ಟೇ ಹಣ ಚೆಲ್ಲಿರಬಹುದು, ಎಷ್ಟೇ ಮೋಸ, ಕುತಂತ್ರ ಮಾಡಿರಬಹುದು, ನೆಗೆಟಿವ್ ತಂತ್ರ ಮಾಡಿರಬಹುದು, ಟೀಕೆ ಮಾಡಿರಬಹುದು, ಜಾತಿ ವಿಷಯ ತಂದರು. ಆದರೆ, ಎಲ್ಲವನ್ನು ರಿಜೆಕ್ಟ್ ಮಾಡಿ ಒಂದೇ ದನಿಯಲ್ಲಿ ಮಂಡ್ಯದ ಜನರು ಹೇಳಿದರು, ಪ್ರೀತಿಗೆ ಮರುಳಾಗುತ್ತೀವಿ, ಮೋಸಕ್ಕೆ ಮರುಳಾಗುವುದಿಲ್ಲ ಎಂದು ತೋರಿಸಿಕೊಟ್ಟರು ಎಂಬುದಾಗಿ ಸುಮಲತಾ ತಮ್ಮ ಕೃತಜ್ಞತೆ ಸಲ್ಲಿಸಿದ್ದರು.