ಬೆಸಗರಳ್ಳಿ ಜತೆಗಿನ ಭಾವನಾತ್ಮಕ ನಂಟು ತೆರೆದಿಟ್ಟ ಸುಮಲತಾ ಅಂಬರೀಶ್
Recommended Video
ಮದ್ದೂರು, ಏಪ್ರಿಲ್ 16: ಮಂಡ್ಯ ಜಿಲ್ಲೆಯ ಬೆಸಗರಳ್ಳಿಗೂ ಸುಮಲತಾ ಅಂಬರೀಶ್ ಅವರಿಗೂ ಭಾವನಾತ್ಮಕ ಸಂಬಂಧವಿದ್ದು, ಅದು ಈ ಬಾರಿಯ ಚುನಾವಣೆಯಲ್ಲಿ ಬೆಳಕಿಗೆ ಬಂದಿದೆ. ಈಗಾಗಲೇ ಮಂಡ್ಯ ಕ್ಷೇತ್ರದಾದ್ಯಂತ ಚುನಾವಣಾ ಪ್ರಚಾರ ನಡೆಸಿದ ಸುಮಲತಾ ಅಂಬರೀಶ್ ಅವರು ಬೆಸಗರಳ್ಳಿಗೆ ಬಂದಾಗ ಹಳೆಯ ನೆನಪು ಮರುಕಳಿಸಿತ್ತು.
ಅಂಬರೀಶ್ ಅವರು ಬದುಕಿದ್ದಾಗ ಮತ್ತು ಸಿನಿಮಾ ಕ್ಷೇತ್ರದಲ್ಲಿದ್ದಾಗಲೇ ಅವರ ಅಭಿಮಾನಿಗಳು ರಾಜ್ಯದಾದ್ಯಂತ ಹುಟ್ಟಿಕೊಂಡಿದ್ದರು. ಆದರೆ ಅವರಿಗೊಂದು ಅಭಿಮಾನಿಗಳ ಸಂಘ ಹುಟ್ಟಿಕೊಂಡಿದ್ದು ಮಾತ್ರ ಬೆಸಗರಳ್ಳಿಯಲ್ಲಂತೆ. ಇದನ್ನು ನೆನಪಿನಲ್ಲಿಟ್ಟುಕೊಂಡಿದ್ದ ಸುಮಲತಾ ಅವರು ಬೆಸಗರಳ್ಳಿಗೆ ಬಂದಾಗ ಈ ವಿಚಾರವನ್ನು ನೆನಪಿಸಿಕೊಳ್ಳಲು ಮರೆಯಲಿಲ್ಲ.
ಮತ ಬೇಡ ಮಂಡ್ಯದ ಸ್ವಾಭಿಮಾನ ಕೊಡಿ: ಸುಮಲತಾ ಭಾವನಾತ್ಮಕ ಭಾಷಣ
ಹೀಗಾಗಿಯೇ ಅವರು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಅಂಬರೀಶ್ ಅಭಿಮಾನಿಗಳ ಸಂಘವನ್ನು ಕಟ್ಟಿದ್ದು ಬೆಸಗರಹಳ್ಳಿ ಗ್ರಾಮದಲ್ಲಿ. ಅಂಬರೀಶ್ ಅವರಿಗೂ ಬೆಸಗರಹಳ್ಳಿ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ಅಂಬರೀಶ್ ಅವರ ಅಭಿಮಾನವನ್ನು ಉಳಿಸಲು ನನ್ನನ್ನು ಗೆಲ್ಲಿಸಿ. ಕ್ರಮ ಸಂಖ್ಯೆ ಇಪ್ಪತ್ತು, ಕಹಳೆ ಊದುತ್ತಿರುವ ರೈತನ ಗುರುತಿಗೆ ಅಧಿಕ ಮತಗಳನ್ನು ನೀಡಬೇಕು ಎಂದರು.
ನನ್ನ ವಿರುದ್ಧ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಯಾರೂ ಕಿವಿಗೊಡಬಾರದು. ಹೆಣ್ಣಿನ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಮಾತನಾಡುವವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಸ್ವಾಭಿಮಾನದ ಮುಂದೆ ಹಣ ಬಲವನ್ನು ಜಿಲ್ಲೆಯ ಮತದಾರರು ಸೋಲಿಸಬೇಕು ಎಂದು ಮನವಿ ಮಾಡಿದರು.
ರೈತ ಸಂಘದ ಕಾರ್ಯಕರ್ತರು ಹಸಿರು ಟವಲ್ ಗಳನ್ನು ಮೇಲಕ್ಕೆತ್ತಿ ಬೀಸುವ ಮೂಲಕ ಸುಮಲತಾ ಅವರಿಗೆ ಬೆಂಬಲ ಸೂಚಿಸಿದರು.