ಮಂಡ್ಯ; ಕೆ. ಆರ್. ಎಸ್ಗೆ ಆತಂಕ ತಂದೊಡ್ಡಿರುವ ಗಣಿಗಾರಿಕೆ!
ಮಂಡ್ಯ, ಜನವರಿ 24: ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆದ ಭೀಕರ ಸ್ಫೋಟದ ಬಳಿಕ ಮಂಡ್ಯ ಜಿಲ್ಲೆಯ ಕೆ. ಆರ್. ಎಸ್ ಜಲಾಶಯಕ್ಕೆ ಹತ್ತಿರದಲ್ಲಿರುವ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಅಪಾಯ ಸಂಭವಿಸುವ ಭಯ ಶುರುವಾಗಿದೆ.
ಹಾಗೆ ನೋಡಿದರೆ ಮಂಡ್ಯ ಜಿಲ್ಲೆಯಲ್ಲಿ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿಯೇ ನಡೆಯುತ್ತಿದ್ದು, ಪ್ರಭಾವಿಗಳೇ ಇದನ್ನು ನಿರ್ವಹಿಸುತ್ತಿರುವ ಕಾರಣದಿಂದಾಗಿ ಜಿಲ್ಲಾಡಳಿತ ಏನೇ ಕ್ರಮ ಕೈಗೊಂಡರೂ ಪ್ರಯೋಜನಕ್ಕೆ ಬರುತ್ತಿಲ್ಲ.
ಅಕ್ರಮ ಗಣಿಗಾರಿಕೆ; ಸ್ಪೋಟಕ ರವಾನೆಯಾಗುತ್ತಿರುವುದು ಎಲ್ಲಿಂದ?
ಅದರಲ್ಲೂ ಬೇಬಿ ಬೆಟ್ಟದಲ್ಲಿ ನಡೆಯುತ್ತಿದ್ದ ಗಣಿಗಾರಿಕೆಯನ್ನು ತಡೆಯಬೇಕೆಂದು ದೊಡ್ಡ ಹೋರಾಟವೇ ನಡೆದಿತ್ತು. ಕೊನೆಗೂ ನಿರ್ಬಂಧ ಹೇರಲಾಗಿತ್ತಲ್ಲದೆ, ಅಲ್ಲಿ ಕಂದಕ ತೋಡಿ ಯಾವುದೇ ವಾಹನಗಳು ಹೋಗದಂತೆ ತಡೆಯಲಾಯಿತು. ಆದರೆ, ಕಂದಕವನ್ನು ಮುಚ್ಚಿ ಮತ್ತೆ ಅಕ್ರಮವಾಗಿ ಇಲ್ಲಿಂದ ಕಲ್ಲುಗಳ ಸಾಗಾಟ ನಡೆಯುತ್ತಿತ್ತು ಎನ್ನುವುದೇ ಅಚ್ಚರಿಯ ವಿಷಯ.
ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ತಾಂಡವ !
ಶಿವಮೊಗ್ಗದಲ್ಲಿ ನಡೆದ ಸ್ಫೋಟ ಪ್ರಕರಣದ ಬಳಿಕ ಮಂಡ್ಯ ಜಿಲ್ಲಾ ಪೊಲೀಸರು ಏಕಕಾಲದಲ್ಲಿ ಕಲ್ಲು ಕ್ವಾರಿ, ಕ್ರಷರ್ಗಳ ಮೇಲೆ ದಾಳಿ ನಡೆಸಿ ಅಕ್ರಮ ಸ್ಫೋಟಕ ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಕೆಆರ್ಎಸ್ ಅಣೆಕಟ್ಟೆ ಸುತ್ತ ಕಲ್ಲು ಗಣಿಗಾರಿಕೆ ನಿಷೇಧ
ದಾಖಲೆ ಒದಗಿಸಲು ಮಾಲೀಕರಿಗೆ ನೋಟೀಸ್
ಇದೀಗ ಶಿವಮೊಗ್ಗದ ಘಟನೆಯ ಬಳಿಕ ಜಿಲ್ಲಾಡಳಿತ ಮತ್ತೆ ಇತ್ತ ದೌಡಾಯಿಸಿದೆ. ಪಾಂಡವಪುರ ತಾಲೂಕಿನ ಬೇಬಿ ಬೆಟ್ಟ ಪ್ರದೇಶದ ಕಲ್ಲುಗಣಿಗಾರಿಕೆ ನಡೆಯುತ್ತಿದ್ದ ಸ್ಥಳಗಳಾದ ಅಮೃತ್ ಕಾವಲ್ ಪ್ರದೇಶ, ಹೊನಗಾನಹಳ್ಳಿ ಗ್ರಾಪಂ ವ್ಯಾಪ್ತಿಯ ಸುತ್ತ ಮುತ್ತಲಿನ ಗಣಿಗಾರಿಕೆ ಪ್ರದೇಶಗಳಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಲೀಕರಿಗೆ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ನೋಟೀಸ್ ಜಾರಿ ಮಾಡಿದ್ದಾರೆ.
ಗಣಿಗಾರಿಕೆಯಿಂದ ಕೆಆರ್ಎಸ್ಗೆ ಅಪಾಯ
ಬೇಬಿ ಬೆಟ್ಟ ಸುತ್ತಲಿನ ಕಲ್ಲು ಗಣಿಗಾರಿಕೆಯಿಂದ ಕೆ. ಆರ್. ಎಸ್ ಅಣೆಕಟ್ಟೆಗೆ ಅಪಾಯವಿರುವ ಬಗ್ಗೆ ಕೇಂದ್ರ ನೈಸರ್ಗಿಕ ವಿಕೋಪ ತಂಡ ನೀಡಿದ ವರದಿ ಮೇರೆಗೆ ಜಿಲ್ಲಾಧಿಕಾರಿಗಳು ಈ ಹಿಂದೆಯೇ ಗಣಿಗಾರಿಕೆ ನಿಷೇಧಿಸಿ ಆದೇಶಿದ್ದರು. ಅದರಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇಲಾಖೆಯ ಉಪ ನಿರ್ದೇಶಕಿ ಟಿ. ವಿ. ಪುಷ್ಪಾ ನೇತೃತ್ವದಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಸುಮಾರು 70ಕ್ಕೂ ಕಲ್ಲು ಕ್ವಾರಿಗಳ ಸುತ್ತ ಕಂದಕಗಳನ್ನು ನಿರ್ಮಾಣ ಮಾಡಿ ಗಣಿಗಾರಿಕೆಗೆ ಅವಕಾಶವಾಗದಂತೆ ಕ್ರಮಗೊಳ್ಳಲಾಗಿತ್ತು. ಆದರೂ, ಗಣಿ ಮಾಲೀಕರು ಕಂದಕಗಳಿಗೆ ಮಣ್ಣು ತುಂಬಿ ಕದ್ದು ಮುಚ್ಚಿ ಗಣಿಗಾರಿಕೆ ನಡೆಸುತ್ತಿದ್ದರು.
ಗಣಿಗಾರಿಕೆ ತಡೆಗೆ ಕಂದಕ ನಿರ್ಮಾಣ
ಇದೀಗ ದಿಢೀರ್ ಭೇಟಿ ನೀಡಿದ ವೇಳೆ ಅಧಿಕಾರಿಗಳಿಗೆ ಈ ಹಿಂದೆ ತೋಡಿದ್ದ ಕಂದಕಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಮೂಲಕ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಹೀಗಾಗಿ ಮತ್ತೆ ಅಧಿಕಾರಿಗಳು ಹಿಟಾಚಿಗಳ ಮೂಲಕ ಲಾರಿ, ಟಿಪ್ಪರ್, ಟ್ರ್ಯಾಕ್ಟರ್ ಯಾವುದೇ ವಾಹನ ಸಂಚರಿಸಿದಂತೆ ಆಳೆತ್ತರದ ಬೃಹತ್ ಕಂದಕಗಳನ್ನು ತೋಡುತ್ತಿದ್ದು, ರಸ್ತೆಗಳಿಗೆ ಅಡ್ಡಲಾಗಿ ಕಂದಕಗಳ ಮಣ್ಣನ್ನು ಗುಡ್ಡದಂತೆ ರಾಶಿ ಹಾಕಿ ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ್ದಾರೆ. ಆದರೆ ಇದನ್ನು ಮುಚ್ಚಿ ಮತ್ತೆ ಗಣಿಗಾರಿಕೆ ಮಾಡಲು ಪ್ರಭಾವಿಗಳು ಮುಂದಾದರೂ ಅಚ್ಚರಿಪಡಬೇಕಾಗಿಲ್ಲ.
2018ರಲ್ಲಿ ಕೇಳಿ ಬಂದಿದ್ದ ನಿಗೂಢ ಶಬ್ಧ
ಕೆ. ಆರ್. ಎಸ್ ಜಲಾಶಯದ ಸುರಕ್ಷತೆಯ ದೃಷ್ಠಿಯಿಂದ ಬೇಬಿಬೆಟ್ಟದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುವುದು ಒಳ್ಳೆಯದಲ್ಲ ಎಂಬುದು ಎಲ್ಲರ ಒತ್ತಾಯವೂ ಹೌದು. 2018ರಲ್ಲಿ ಈ ವ್ಯಾಪ್ತಿಯಲ್ಲಿ ನಿಗೂಢ ಶಬ್ಧಗಳು ಕೇಳಿಬಂದಿದ್ದವು. ಅದು ಗಣಿ ಸ್ಪೋಟದಿಂದ ಉಂಟಾಗಿರುವ ಶಬ್ಧಗಳೆಂದು ಹೇಳಲಾಗಿತ್ತು. ಇದೇ ರೀತಿ ಮುಂದುವರೆದರೆ ಅಪಾಯ ತಪ್ಪಿದ್ದಲ್ಲ ಎಂದು ಪ್ರಜ್ಞಾವಂತರು ಹೋರಾಟ ಮಾಡಿ ಗಣಿಗಾರಿಕೆ ತಡೆಗೆ ಒತ್ತಾಯಿಸಿದ್ದರು. ಆದರೆ ಇಂದಿಗೂ ಅಕ್ರಮವಾಗಿ ಅಲ್ಲಲ್ಲಿ ಗಣಿಗಾರಿಕೆ ನಡೆಯುತ್ತಲೇ ಇದೆ. ಪ್ರಭಾವಿಗಳ ಕೈನಲ್ಲಿ ಗಣಿಗಾರಿಕೆಗಳು ಇರುವುದರಿಂದ ಅಷ್ಟು ಸುಲಭವಾಗಿ ತಡೆಯೊಡ್ಡಲು ಸಾಧ್ಯವಿಲ್ಲ. ಹೀಗಾಗಿ ಕೆ. ಆರ್. ಎಸ್ ಜಲಾಶಯದ ವ್ಯಾಪ್ತಿಯಲ್ಲಿ ಎಷ್ಟು ಕಿ. ಮೀ. ದೂರದಲ್ಲಿ ಗಣಿಗಾರಿಕೆ ನಡೆಸಬಹುದು ಎಂಬುದರ ಬಗ್ಗೆ ತಜ್ಞರ ತಂಡ ಮಾಹಿತಿ ಕಲೆ ಹಾಕಲು ಮುಂದಾಗಿದೆ.
ಸುರಕ್ಷತೆ ಅರಿಯಲು ಪ್ರಾಯೋಗಿಕ ಸ್ಫೋಟ
ಈ ಕುರಿತಂತೆ ಮಾಹಿತಿ ನೀಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಪುಷ್ಪಾ ಅವರು "ಅಣೆಕಟ್ಟೆಯ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಒಂದೆರಡು ತಿಂಗಳಲ್ಲಿ ಬೇಬಿಬೆಟ್ಟವನ್ನು ಒಳಗೊಂಡಂತೆ ಕೆ. ಆರ್. ಎಸ್ ಜಲಾಶಯದ ಸುತ್ತಲಿನ ಪ್ರದೇಶಗಳಲ್ಲಿ ತಜ್ಞರ ತಂಡದಿಂದ ಪ್ರಾಯೋಗಿಕ ಸ್ಫೋಟ ನಡೆಸಿ ಆ ಮೂಲಕ ಅಣೆಕಟ್ಟೆಯಿಂದ ಎಷ್ಟು ಕಿ. ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಅಥವಾ ಗಣಿಸ್ಪೋಟ ನಡೆಸಬಾರದು ಎನ್ನುವುದನ್ನು ಖಚಿತಪಡಿಸಲಾಗುವುದು" ಎಂದಿದ್ದಾರೆ.
ಇನ್ನೊಂದೆಡೆ ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕೆ ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ, ಶಾಖಾ ಕಚೇರಿಗಳಿಲ್ಲದಿರುವುದು ಜೊತೆಗೆ ಪೊಲೀಸ್, ಕಂದಾಯ, ಆರ್ಟಿಓ, ಸ್ಥಳೀಯ ಪಂಚಾಯಿತಿ ಅಧಿಕಾರಿಗಳ ಸಹಕಾರದ ಕೊರತೆಯೂ ಕಾರಣ ಎಂದು ಹೇಳಲಾಗುತ್ತಿದೆ.
Recommended Video
ಅವತ್ತಿನ ಘಟನೆ ಮೆಲುಕು ಹಾಕುತ್ತಿರುವ ಜನ
ಶಿವಮೊಗ್ಗದಲ್ಲಿ ನಡೆದ ಸ್ಪೋಟದ ನಂತರ ಜಿಲ್ಲೆಯಲ್ಲಿ ಭಯ ಶುರುವಾಗಿದೆ. ಸ್ಥಳೀಯ ಜನರದಲ್ಲಿ ಆತಂಕವೂ ಮನೆ ಮಾಡಿದೆ. ಅವರೆಲ್ಲದರೂ ಇದೀಗ ಹಿಂದಿನ ಘಟನೆಗಳನ್ನು ಮೆಲುಕು ಹಾಕತೊಡಗಿದ್ದಾರೆ. ಅದೇನೆಂದರೆ 2018ರ ಸೆ.25ರಂದು ಬೇಬಿ ಬೆಟ್ಟದಲ್ಲಿ ಭೀಕರ ಸ್ಫೋಟದ ಶಬ್ಧ ಕೇಳಿಬಂದಿತ್ತು. ಕೆ. ಆರ್. ಎಸ್ ಅಣೆಕಟ್ಟೆಯಿಂದ ರೇಡಿಯಲ್ ಡಿಸ್ಟೆನ್ಸ್ ಪ್ರಕಾರ ಕೇವಲ 8 ಕಿ.ಮೀ. ದೂರದಲ್ಲಿರುವ ಬೇಬಿ ಬೆಟ್ಟದಲ್ಲಿ ಸ್ಪೋಟದ ಶಬ್ಧ ಕೇಳಿಬಂದಿತ್ತು. ಆಗ ಜನಕ್ಕೆ ಭೂಕಂಪನದ ಅನುಭವವಾಗಿತ್ತು. ಕೆಲವರು ಭೂಕಂಪನವಾಗಿದೆ ಎಂದುಕೊಂಡು ನಡುಗಿದ್ದರು. ಭೂಕಂಪನದ ಅಲೆಗಳು ಹಾದುಹೋಗಿದ್ದ ಮಾರ್ಗ, ಸ್ಪೋಟ ಸಂಭವಿಸಿದ ಸ್ಥಳ, ಅಣೆಕಟ್ಟೆಗೂ ಸ್ಪೋಟ ಸಂಭವಿಸಿದ ಸ್ಥಳಕ್ಕೂ ಇರುವ ದೂರ, 6 ಸೆಕೆಂಡ್ಗಳ ಅಂತರದಲ್ಲಿ ಎರಡು ಬಾರಿ ಗಣಿ ಸ್ಪೋಟ ಸಂಭವಿಸಿದ್ದನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿಖರವಾಗಿ ಗುರುತಿಸಿ ಸ್ಯಾಟಲೈಟ್ ಚಿತ್ರಗಳೊಂದಿಗೆ ವರದಿ ನೀಡಿತ್ತು.
ಅವತ್ತೇ ಗಣಿಗಾರಿಕೆಯಿಂದ ಕೆ. ಆರ್. ಎಸ್ಗೆ ಕಂಟಕವಿರುವುದನ್ನು ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕವಾಗಿ ಸಾಬೀತುಪಡಿಸುವ ಮೂಲಕ ಎಚ್ಚರಿಕೆಯನ್ನು ರವಾನಿಸಿದ್ದನ್ನು ಸ್ಮರಿಸಬಹುದು. ಇನ್ನು ಮುಂದೆಯೂ ಈ ಬಗ್ಗೆ ಎಚ್ಚೆತ್ತುಕೊಳ್ಳದೆ, ಗಣಿಧಣಿಗಳ ಪ್ರಭಾವಕ್ಕೆ ಹೆದರಿ ಕೈಕಟ್ಟಿ ಕುಳಿತರೆ ಅದರಿಂದಾಗುವ ಭೀಕರ ಪರಿಣಾಮವನ್ನು ಊಹಿಸಲಾಗದು.