ಸಡಗರದಿಂದ ನಡೆದ ಸಂತೆಕಸಲಗೆರೆ ಶ್ರೀ ಭೂಮಿಸಿದ್ದೇಶ್ವರ ಜಾತ್ರೆ ವೈಶಿಷ್ಟ್ಯತೆ ಗೊತ್ತೇ?
ಮಂಡ್ಯ, ಏಪ್ರಿಲ್ 09:ಮಂಡ್ಯದಲ್ಲಿ ಚುನಾವಣಾ ಭರಾಟೆ ನಡುವೆ ಹಿಂದಿನಿಂದಲೂ ಆಚರಿಸುತ್ತಾ ಬಂದಿರುವ ತಾಲೂಕಿನ ಸಂತೆಕಸಲಗೆರೆ ಗ್ರಾಮದ ಶ್ರೀ ಭೂಮಿಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.
ಸೋಮವಾರ ನಡೆದ ಜಾತ್ರೆಗೆ ಸುತ್ತಲ ಏಳು ಊರಿನ ಗ್ರಾಮಸ್ಥರು ಭೂಮಿ ಸಿದ್ದೇಶ್ವರನ ದೇವಸ್ಥಾನದ ಅಂಗಳದಲ್ಲಿ ನೆರೆದು ಸ್ಥಳದಲ್ಲೇ ಅಡುಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಿ ಪುನೀತರಾದರು.
ಪ್ರವಾಸಿಗರನ್ನು ಅಚ್ಚರಿಗೊಳಿಸುವ ಶಿವನ ತಾಣಗಳು, ವ್ರತದ ಸಂಪೂರ್ಣ ಮಾಹಿತಿ
ಯುಗಾದಿ ಹಬ್ಬವಾದ ಎರಡು ದಿನಕ್ಕೆ ನಡೆಯುವ ಈ ಜಾತ್ರೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಹೆಸರುವಾಸಿಯಾಗಿದ್ದು, ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.
ಇನ್ನು ಈ ಜಾತ್ರೆಯನ್ನು ಏಕೆ ನಡೆಸಲಾಗುತ್ತದೆ ಎಂಬುದರ ಬಗ್ಗೆ ನೋಡುವುದಾದರೆ ಜಾತ್ರೆ ನಡೆಯುವ ಶ್ರೀ ಭೂಮಿಸಿದ್ದೇಶ್ವರ ಸ್ವಾಮಿಯ ಕ್ಷೇತ್ರದಲ್ಲಿ ಹಿಂದೆ ಮೈಸೂರಿನ ಒಡೆಯರ್ ಮತ್ತು ಮರಾಠರ ಸೇನೆಯ ನಡುವೆ ಯುದ್ಧ ನಡೆದಿತ್ತಲ್ಲದೆ, ಈ ಸಂದರ್ಭದಲ್ಲಿ ಮಡಿದ ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಲು ಶ್ರೀ ಭೂಮಿಸಿದ್ದೇಶ್ವರನ ದೇವರ ಹೆಸರಿನಲ್ಲಿ ಈ ಜಾತ್ರೆಯನ್ನು ಒಡೆಯರ್ ಕಾಲದಿಂದಲೂ ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗುತ್ತಿದೆ. ಮುಂದೆ ಓದಿ...
ದೇವರಿಗೆ ನೈವೇದ್ಯ ನೀಡುವುದು
ಜಾತ್ರೆಯಲ್ಲಿ ಬಾಯಿ ಬೀಗ ಮತ್ತು ಈ ಹಟ್ಟುಣ್ಣುವ ಜಾತ್ರೆ ಯನ್ನು ನಡೆಸಲಾಗುತ್ತದೆ ಈ ವೇಳೆ ಸಂತೆ ಕಸಲಗೆರೆ, ಕಾರಸವಾಡಿ, ಹನಿಯಂಬಾಡಿ, ಮಂಗಲ, ಮೊತ್ತಹಳ್ಳಿ, ಕೊತ್ತತ್ತಿ, ಬೇವಿನಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರು ದೇವರ ಅಂಗಳದಲ್ಲಿ ಮಾಂಸ ಭೋಜನವನ್ನು ತಯಾರಿಸಿ, ವೀರ ಯೋಧರು ಮತ್ತು ದೇವರಿಗೆ ನೈವೇದ್ಯ ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.
ರಾತ್ರಿ ವೇಳೆ ಸುಳಿಯುವುದಿಲ್ಲ
ಹಬ್ಬದಲ್ಲಿ ಪ್ರತಿ ಗ್ರಾಮದ ಕುಟುಂಬದವರು ದಾಸಯ್ಯನನ್ನು ಕರೆದು ಗೋವಿಂದನ ಹೆಸರೇಳಿ ನೈವೇದ್ಯ ನೀಡುವುದು ಕೂಡ ಕಂಡು ಬರುತ್ತದೆ. ಜಾತ್ರೆಯ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ದೇವಾಲಯ ಸುತ್ತ ನೆರೆಯುವ ಜನ ಆ ನಂತರ ಆ ಸ್ಥಳದತ್ತ ರಾತ್ರಿ ವೇಳೆ ಸುಳಿಯುವುದಿಲ್ಲ. ಕಾರಣ ಭಕ್ತರು ನೀಡಿರುವ ನೈವೇದ್ಯವನ್ನು ಸ್ವೀಕರಿಸಲು ಸ್ವತಃ ಭೂಮಿಸಿದ್ದೇಶ್ವರನೇ ಬರುತ್ತಾನೆ ಎಂಬ ನಂಬಿಕೆಯಿದೆ.
ಭಕ್ತರ ಪಾಲಿನ ಭೂ ಕೈಲಾಸ ಶ್ರೀ ಕ್ಷೇತ್ರ ಗೋಕರ್ಣದ ಇತಿಹಾಸ, ಮಹಿಮೆ
ಪ್ರಚಲಿತದಲ್ಲಿರುವ ದಂತಕಥೆ
ಹಿಂದೊಮ್ಮೆ ಜಾತ್ರೆ ಬಳಿಕ ತಾನು ಜಾತ್ರಾ ಸ್ಥಳದಲ್ಲಿ ಬಿಟ್ಟು ಹೋದ ತಂಬಿಗೆಯನ್ನು ತರಲು ವ್ಯಕ್ತಿಯೊಬ್ಬ ರಾತ್ರಿ ವೇಳೆ ಅಲ್ಲಿಗೆ ಹೋದನಂತೆ ಆಗ ಅಲ್ಲಿ ಭೂಮಿಸಿದ್ದೇಶ್ವರನು ತನ್ನ ಪರಿವಾರದೊಂದಿಗೆ ಇರುವುದನ್ನು ಕಂಡು ಭಯಭೀತನಾದನು. ಈ ವೇಳೆ ಭೂಮಿಸಿದ್ದೇಶ್ವರ ಇಲ್ಲಿ ಕಂಡ ವಿಚಾರವನ್ನು ಯಾರಿಗೂ ಹೇಳದಂತೆ ಸೂಚಿಸಿದಲ್ಲದೆ, ಸಕಲ ಐಶ್ವರ್ಯವನ್ನು ಆತನಿಗೆ ನೀಡಿ ಕಳುಹಿಸಿದನಂತೆ. ಆದರೆ ಗ್ರಾಮಕ್ಕೆ ಮರಳಿದ ಆತ ತಾನು ಕಂಡ ದೃಶ್ಯ ಮತ್ತು ತನಗೆ ಐಶ್ವರ್ಯ ಲಭಿಸಿದ ಬಗ್ಗೆ ಗ್ರಾಮದಲ್ಲಿ ಹೇಳಿಕೊಂಡನಂತೆ. ದೇವರ ಮಾತು ತಪ್ಪಿದ ಆತ ರಕ್ತಕಾರಿ ಸಾವನ್ನಪ್ಪಿದ ಎಂಬ ದಂತ ಕಥೆಯೂ ಜನವಲಯದಲ್ಲಿ ಪ್ರಚಲಿತದಲ್ಲಿದೆ.
ಗಮನಸೆಳೆಯುತ್ತಿದೆ ವೈಶಿಷ್ಟ್ಯತೆ
ಹೀಗಾಗಿಯೇ ಜಾತ್ರೆ ಕಳೆದ ಬಳಿಕ ದೇವಾಲಯದ ಅಂಗಳದತ್ತ ಯಾರೂ ಸುಳಿಯಲ್ಲ ಎನ್ನಲಾಗಿದೆ. ಅದು ಏನೇ ಇರಲಿ. ಒಟ್ಟಾರೆ ಹೇಳಬೇಕೆಂದರೆ ಶ್ರೀ ಭೂಮಿಸಿದ್ದೇಶ್ವರ ಜಾತ್ರೆಯು ತನ್ನದೇ ಪ್ರಸಿದ್ಧಿಯನ್ನು ಪಡೆದಿದ್ದು, ಸುತ್ತಮುತ್ತ ನಡೆಯುವ ಜಾತ್ರೆ ಪೈಕಿ ಇದು ವಿಭಿನ್ನ ಮತ್ತು ವಿಶಿಷ್ಠವಾಗಿ ಗಮನಸೆಳೆಯುತ್ತಿದೆ.