ಮಂಡ್ಯ;ಸುಮಲತಾ ನಿರ್ದೇಶನದಲ್ಲಿ ಸೋಂಕು ನಿವಾರಣಾ ಟನಲ್ ಸ್ಥಾಪನೆ
ಮಂಡ್ಯ, ಏಪ್ರಿಲ್ 11: ಜಾತ್ಯತೀತ ಜನತಾದಳದ ವತಿಯಿಂದ ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಡಿಯಂ ಹೈಪೋಕ್ಲೋರೈಡ್ ಟನಲ್ ಸ್ಥಾಪನೆ ಮಾಡಿದ ಬೆನ್ನಲ್ಲೇ ಸಂಸದೆ ಸುಮಲತಾ ಅಂಬರೀಶ್ರವರ ಮಾರ್ಗದರ್ಶನದಲ್ಲಿ ಮಂಡ್ಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಸ್ವಾಭಿಮಾನಿ ಪಡೆಯ ವತಿಯಿಂದ ನೂತನ ತಂತ್ರಜ್ಞಾನದ ಸೋಂಕು ನಿವಾರಣಾ ಟನಲ್ ಘಟಕ ನಿರ್ಮಿಸಲಾಗಿದೆ.
ಮಂಡ್ಯದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಪ್ರಕರಣಗಳಿಂದ ನಗರದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಜತೆಗೆ ಕೊರೊನಾವನ್ನು ನಿಯಂತ್ರಿಸುವ ಸಲುವಾಗಿ ಜಿಲ್ಲಾಡಳಿತ ಸೀಲ್ ಡೌನ್ ಮಾಡಿ ಸಾಮಾಜಿಕ ಅಂತರವನ್ನು ಕಾಪಾಡುವ ಕಾರ್ಯವನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದೆ. ಇದೀಗ ಸೋಂಕು ನಿವಾರಣಾ ಟನಲ್ ನಿರ್ಮಿಸಿರುವುದು ಸಾರ್ವಜನಿಕರಿಗೆ ಅನುಕೂಲ ಮಾಡಿದಂತಾಗಿದೆ.
ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ 1 ಕೋಟಿ ಕೊಟ್ಟ ಸುಮಲತಾ ಅಂಬರೀಶ್
ಈ ಸೋಂಕು ನಿವಾರಣಾ ಟನಲ್ ಅನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯಾಲಕ್ಕಿಗೌಡ ಉದ್ಘಾಟಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೊರೊನಾ ಸೋಂಕು ನಿವಾರಣಾ ದ್ರಾವಣ ಸಿಂಪಡಣಾ ಟನಲ್ ಅನ್ನು ಮಂಡ್ಯ ಜಿಲ್ಲೆಯಲ್ಲಿ ಹೊಸ ತಂತ್ರಜ್ಞಾನದಲ್ಲಿ ಅಳವಡಿಸಿರುವುದು ಶ್ಲಾಘನೀಯ. ಜಿಲ್ಲೆಯಲ್ಲಿ 800 ಮಂದಿ ಸಿಬ್ಬಂದಿ ಇದ್ದಾರೆ. 2 ಸಾವಿರ ರೋಗಿಗಳು ಪ್ರತಿನಿತ್ಯ ಬಂದು ಹೋಗುತ್ತಾರೆ. ಬರುವವರಿಗೆ ಆತಂಕ ಇರುತ್ತದೆ. ಇಂತಹ ಸಂದರ್ಭದಲ್ಲಿ ದ್ರಾವಣ ಸಿಂಪಡಣೆಯನ್ನು ಆಸ್ಪತ್ರೆಯಲ್ಲಿ ಅಳವಡಿಸಿರುವುದು ಶ್ಲಾಘನೀಯ ಎಂದಿದ್ದಾರೆ.
ಈ ವೇಳೆ ಅಪರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ವಿ.ಜೆ. ಶೋಭಾರಾಣಿ, ಸ್ವಾಭಿಮಾನಿ ಪಡೆಯ ಮುಖಂಡರಾದ ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್, ಎಚ್.ಬಿ. ಅರವಿಂದ್ಕುಮಾರ್, ವಿಜಯಕುಮಾರ್ ಸೇರಿದಂತೆ ಹಲವರಿದ್ದರು.