ಮಂಡ್ಯದಲ್ಲಿ ದಲಿತ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ
ಮಂಡ್ಯ, ಮೇ 15: ಚರಂಡಿ ನೀರಿನ ವಿಚಾರಕ್ಕೆ ದಲಿತ ಕುಟುಂಬವೊಂದಕ್ಕೆ ಸವರ್ಣಿಯರು ಜಾತಿನಿಂದನೆ ಮಾಡಿ ಕೊಲೆ ಬೆದರಿಕೆ ಹಾಕಿರುವುದಲ್ಲದೆ, ಗ್ರಾಮದಲ್ಲಿ ಅಂಗಡಿಯಲ್ಲಿ ಸಾಮಾನು ನೀಡದೆ, ಕುಡಿಯಲು ನೀರು ಬಿಡದೆ ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಾಗಮಂಗಲದ ಬುರುಡುಗುಂಟೆ ಗ್ರಾಮದಲ್ಲಿ ನಡೆದಿದೆ.
ಈ ಸಂಬಂಧವಾಗಿ ಹತ್ತು ಮಂದಿ ಮೇಲೆ ಎಸ್ಸಿ ಎಸ್ಟಿ ಕಾಯ್ದೆಯಡಿ ಜಾತಿನಿಂದನೆ ಪ್ರಕರಣ ದಾಖಲಾಗಿದೆ. ತಾಲೂಕಿನ ಹೊಣಕೆರೆ ಹೋಬಳಿ ಮಣ್ಣಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬುರುಡುಗುಂಟೆ ಗ್ರಾಮದ ಪುಟ್ಟಸ್ವಾಮಿ ಎಂಬ ದಲಿತ ಕುಟುಂಬ ಸವರ್ಣಿಯರಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿದ್ದು, ಗ್ರಾಮದಲ್ಲಿ ಸರಗೂರೇಗೌಡ ಮತ್ತು ಸಾಕಮ್ಮ ಎಂಬುವರು ದನದ ಕೊಟ್ಟಿಗೆಯ ಗಂಜಲ ಮತ್ತು ಗಲೀಜು ನೀರನ್ನು ಪೈಪ್ ಮೂಲಕ ಚರಂಡಿಗೆ ಹರಿಯಬಿಟ್ಟಿದ್ದರು. ಇದರಿಂದ ಮತ್ತೊಂದು ಕುಟುಂಬಕ್ಕೆ ಸೊಳ್ಳೆ ಹೆಚ್ಚಾಗಿದ್ದವು.
ಮಾಜಿ ಸಿಎಂ ಪುತ್ರನ ಕ್ಷೇತ್ರದಲ್ಲಿ ಅನಿಷ್ಠ ಪದ್ಧತಿ ಇಂದಿಗೂ ಜೀವಂತ
ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮೇ.9ರಂದು ಗಲಾಟೆಯಾಗಿ ಪ್ರಕರಣ ಪೊಲೀಸ್ ಠಾಣೆಗೆ ಬಂದ ಕಾರಣ ಇಬ್ಬರಿಗೂ ತಿಳಿವಳಿಕೆ ಹೇಳಿ ಕಳುಹಿಸಲಾಗಿತ್ತು. ಇದರಿಂದ ಕೆರಳಿದ ಗ್ರಾಮದ ಸವರ್ಣಿಯರು ಮೇ.11ರ ಸೋಮವಾರ ರಾತ್ರಿ ಪಂಚಾಯಿತಿ ಕಟ್ಟೆ ಸೇರಿ ದಲಿತ ಕುಟುಂಬಕ್ಕೆ ಗ್ರಾಮಗಳಲ್ಲಿನ ಅಂಗಡಿಯಲ್ಲಿ ಯಾವುದೇ ಸಾಮಾನು ಕೊಡಕೂಡದು, ಅವರೊಂದಿಗೆ ಮಾತನಾಡುವುದಾಗಲಿ, ಜಮೀನು ಮತ್ತು ಇತರೆ ಕೆಲಸಕ್ಕೆ ಕರೆದು ಸಹಾಯ ಮಾಡುವವರಿಗೆ 25 ಸಾವಿರ ದಂಡ ಹಾಕುವುದಾಗಿ ಗ್ರಾಮಸ್ಥರು ತೀರ್ಮಾನಿಸಿದ್ದು, ನಿಮಗೆ ಯಾವುದೇ ವಸ್ತುಗಳನ್ನು ಕೊಡಲ್ಲ ಎಂದು ಅಂಗಡಿಯವರು ಪುಟ್ಟಸ್ವಾಮಿ ಕುಟುಂಬದವರನ್ನ ವಾಪಸ್ ಕಳಿಸಿದ್ದಾರೆ.
ಗ್ರಾಮದಲ್ಲಿ ಸಾಮಾಜಿಕ ಬಹಿಷ್ಕಾರ ಹಾಕಿರುವ ಕಾರಣಕ್ಕೆ ಮಣ್ಣಹಳ್ಳಿ ಗ್ರಾಮಪಂಚಾಯಿತಿ ವಾಟರ್ ಮ್ಯಾನ್ ಕೂಡ ದಲಿತ ಕುಟುಂಬಕ್ಕೆ ಕುಡಿಯುವ ನೀರು ಕೂಡ ಬಿಟ್ಟಿರಲಿಲ್ಲ ಎನ್ನಲಾಗಿದೆ. ಪ್ರಕರಣದ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಸರಗೂರೇಗೌಡ ಮತ್ತು ಸಾಕಮ್ಮ, ಶಿವರಾಜು ಸೇರಿದಂತೆ 10 ಮಂದಿ ಮೇಲೆ ಜಾತಿನಿಂದನೆ ಪ್ರಕರಣ ದಾಖಲಾಗಿದ್ದು, ಗ್ರಾಮಕ್ಕೆ ಮಂಡ್ಯ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ಮಾಡಿ ದಲಿತ ಕುಟುಂಬಕ್ಕೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿದ್ದಾರೆ.