ಮಂಡ್ಯದ ಕೆ.ಆರ್.ಪೇಟೆ ಪಟ್ಟಣದಲ್ಲಿ ಹಾವು ಕಾಟ!
ಕೆ.ಆರ್. ಪೇಟೆಯ ಕೆಲವಾರು ಬಡಾವಣೆಗಳಲ್ಲಿ ಪೊದೆಗಳು ಹೆಚ್ಚಾಗಿ ಬೆಳೆದಿರುವುದರಿಂದ ಅಲ್ಲಿ ಹಾವು, ಚೇಳುಗಳು ಹೆಚ್ಚಾಗಿ ಅವು ಸುತ್ತಲಿನ ಮನೆಗಳಿಗೆ ನುಗ್ಗುತ್ತಿರುವ ಪ್ರಕರಣಗಳು ಹೆಚ್ಚಾಗಿವೆ.
ಮಂಡ್ಯ, ಜೂನ್ 3: ಕೆ.ಆರ್.ಪೇಟೆ ಪಟ್ಟಣದಲ್ಲಿ ಹಾವು ಕಾಟ ಹೆಚ್ಚಾಗಿರುವುದರಿಂದ ಜನತೆ ಭಯಭೀತರಾಗಿದ್ದಾರೆ. ಇಲ್ಲಿನ ಹಲವು ಬಡಾವಣೆಗಳಲ್ಲಿ ಖಾಲಿ ನಿವೇಶನಗಳಿದ್ದು, ಇಲ್ಲಿರುವ ಕುರುಚಲು ಕಾಡುಗಳಿಂದಾಗಿ ಹಾವು, ಹಲ್ಲಿ, ಚೇಳುಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿರುವುದರಿಂದ ಸುತ್ತಲಿನ ಮನೆಗಳಿಗೆ ಅವು ನಿತ್ಯ ಭೇಟಿ ಕೊಡುವಂತಾಗಿದೆ.
ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರ ನಗರದ ಬಿ.ಎಲ್.ಅರವಿಂದ್ ಎಂಬುವರ ಮನೆಯ ಬಳಿ ನಾಗರಹಾವು ಮತ್ತು 12 ಹಾವಿನ ಮರಿಗಳನ್ನು ಹಿಡಿಯಲಾಗಿದ್ದು, ಇದನ್ನು ಕಂಡ ಬಳಿಕ ಇಲ್ಲಿನ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.
ಪಟ್ಟಣದ ಪುರಸಭಾ ವ್ಯಾಪ್ತಿಯ ಎಲ್ಲಾ 23 ವಾರ್ಡುಗಳಲ್ಲಿ ಬಹುತೇಕ ಬಡಾವಣೆಯಲ್ಲಿ ಕೆಲವರು ನಿವೇಶನವನ್ನು ಖರೀದಿಸಿ ಮನೆಕಟ್ಟದೆ ಖಾಲಿ ಬಿಟ್ಟಿದ್ದಾರೆ. ಈ ನಿವೇಶನಗಳಲ್ಲಿ ಬೆಳೆದಿರುವ ಕಾಡನ್ನು ಕಡಿಯದ ಕಾರಣದಿಂದ ಸುತ್ತಮುತ್ತಲಿನ ವಿಷ ಜಂತುಗಳು ಈ ಸ್ಥಳದಲ್ಲಿ ಬೀಡು ಬಿಟ್ಟಿವೆ. ಕೆಲವೊಮ್ಮೆ ದಾರಿ ತಪ್ಪಿ ಪೊದೆಗಳಿಂದ ಹೊರಕ್ಕೆ ಬಂದು ಮನೆಗಳಿಗೂ ಬರುತ್ತಿವೆ.
ಖಾಲಿ ನಿವೇಶನಗಳಲ್ಲಿ ಹಾವುಗಳು ನೆಲೆ ಕಂಡು ಕಂಡಿವೆ ಎಂಬುದು ಗೊತ್ತಾಗಿದ್ದೇ ಅರವಿಂದ ಅವರ ಮನೆ ಬಳಿ ಸಿಕ್ಕಿದ ಹಾವುಗಳಿಂದ ಎಂದರೆ ತಪ್ಪಾಗಲಾರದು. ಆಗಾಗ್ಗೆ ಪಟ್ಟಣದಲ್ಲಿ ಹಾವು ಕಾಣಿಸಿಕೊಳ್ಳುತ್ತಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾವುಗಳು ಇವೆ ಎಂಬುದಕ್ಕೆ ಸ್ಥಳೀಯ ನಿವಾಸಿ ಸ್ನೇಕ್ ಮುನ್ನಾ ಅವರು ಇದುವರೆಗೆ ಹಿಡಿದ ಹದಿನೈದು ಸಾವಿರ ಹಾವುಗಳೇ ಸಾಕ್ಷಿಯಾಗಿದೆ. ಸ್ನೇಕ್ ಮುನ್ನಾ ಅವರು ಪಟ್ಟಣದಲ್ಲಿ ಕಾಣಸಿಗುವ ಹಾವನ್ನು ಹಿಡಿದು ಅರಣ್ಯದಲ್ಲಿ ಬಿಡುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಈ ನಡುವೆ ಬಡಾವಣೆಯಲ್ಲಿ ಹೆಚ್ಚಾಗಿರುವ ಹಾವುಗಳ ಕಾಟವನ್ನು ತಪ್ಪಿಸುವ ಸಲುವಾಗಿ ಖಾಲಿ ನಿವೇಶನ ಹೊಂದಿರುವ ಮಾಲಿಕರು ಅದರಲ್ಲಿ ಬೆಳೆದಿರುವ ಕಾಡುಗಳನ್ನು ತೆರವುಗೊಳಿಸುವಂತೆ ಪುರಸಭಾ ಮುಖ್ಯಾಧಿಕಾರಿ ಯತೀಶ್ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಇನ್ನಾದರೂ ಖಾಲಿ ನಿವೇಶನದಲ್ಲಿ ಬೆಳೆದಿರುವ ಕಾಡನ್ನು ಮಾಲಿಕರು ತೆರವುಗೊಳಿಸಿ ವಿಷ ಜಂತುಗಳ ಆವಾಸ ಸ್ಥಾನವಾಗುವುದನ್ನು ತಪ್ಪಿಸುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.
ಒಂದು ವೇಳೆ ಪಟ್ಟಣದಲ್ಲಿ ಹಾವು ಕಂಡರೆ ಅದನ್ನು ಕೊಲ್ಲದೆ ಸ್ನೇಕ್ ಮುನ್ನಾ ಅವರ 7349452734 ಮೊಬೈಲ್ಗ ನಂಬರಿಗೆ ಕರೆ ಮಾಡಿ ತಿಳಿಸಬಹುದಾಗಿದೆ.