ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಳ್ಳಿ: ಎಸ್ಎಂ ಕೃಷ್ಣ ಕರೆ
ಮದ್ದೂರು, ಜನವರಿ 19: ಬಿಜೆಪಿ ಸೇರ್ಪಡೆಗೊಂಡ ಬಳಿಕ ರಾಜಕೀಯವಾಗಿ ಅಜ್ಞಾತವಾಸದಲ್ಲಿದ್ದ ಎಸ್.ಎಂ.ಕೃಷ್ಣ ಅವರು ಮೊದಲ ಬಾರಿಗೆ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸುವ ಮೂಲಕ ತಾವಿನ್ನೂ ಸಕ್ರಿಯ ರಾಜಕಾರಣದಲ್ಲಿರುವುದಾಗಿ ತೋರ್ಪಡಿಸಿದರು.
ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಎಸ್.ಎಂ.ಕೃಷ್ಣ ಅವರು ಈ ಹಿಂದೆ ತಾವಿದ್ದ ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದರು.
ಮಂಡ್ಯದಲ್ಲಿ ಪಾಂಚಜನ್ಯ ಊದಲಿರುವ ಎಸ್ಸೆಂ ಕೃಷ್ಣ
ಕೇಂದ್ರದಲ್ಲಿ ಈ ಹಿಂದೆ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಕೆಟ್ಟ ಬದಲಾವಣೆ ನೋಡಿದ್ದೆವು ಇದರಿಂದ ಜನರಿಗೆ ಮುಕ್ತ ಬೇಕಾಗಿದೆ ಅದಕ್ಕಾಗಿ ಜನರೇ ಮೋದಿಯನ್ನು ಸೃಷ್ಠಿ ಮಾಡಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ನಿಷ್ಕಳಂಕ, ಪಾರದರ್ಶಕ ಹಾಗೂ ಅಭಿವೃದ್ಧಿ ಪೂರಕ ಆಡಳಿತ ಕೊಟ್ಟಿದ್ದಾರೆ, 2014 ರಲ್ಲಿ ಭಾರತ ದೊಡ್ಡ ಪರಿವರ್ತನೆ ಕಂಡಿದೆ, ಆ ಪರಿವರ್ತನೆಯ ಹರಿಕಾರ ಮೋದಿ ಎಂದರು.
ನಾನು ವಿದೇಶಾಂಗ ಮಂತ್ರಿಯಾಗಿ ಸಾಕಷ್ಟು ದೇಶಗಳನ್ನು ಸುತ್ತಿದ್ದೇನೆ ಆದರೆ ಪ್ರಧಾನಿ ಮೋದಿ ಅವರಿಗೆ ಸಿಕ್ಕ ಜನಮಣ್ಣನೆ ಎಲ್ಲರಿಗೂ ಸಿಗುವಂತದ್ದಲ್ಲ, ಮೋದಿ ಅವರು ಭಾರತಕ್ಕೆ ಹೊಸ ಹೊಳಪು ತಂದು ಕೊಟ್ಟಿದ್ದಾರೆ ಎಂದರು.
ಹಲವರು ಕಾಂಗ್ರೆಸ್ ಪಕ್ಷದ ಅರಾಜಕತೆಯಿಂದ ಬೇಸತ್ತಿದ್ದೀರ, ಆದರೆ ಬೇರೆ ಬೇರೆ ಕಾರಣಗಳಿಗಾಗಿ ಕಾಂಗ್ರೆಸ್ ಬಿಟ್ಟು ಬರಲು ಕಷ್ಟಪಡುತ್ತಿದ್ದೀರ, ಅವರೆಲ್ಲರೂ ಧೈರ್ಯವಾಗಿ ಬಿಜೆಪಿಗೆ ಸೇರ್ಪಡೆ ಹೊಂದಿ ಎಂದು ಅವರು ಕರೆ ನೀಡಿದರು.
ಯಾತ್ರೆಯಲ್ಲಿ ಭಾಗವಹಿಸುವುದಕ್ಕೂ ಮುನ್ನಾ ಯಡಿಯೂರಪ್ಪ ಮತ್ತು ಎಸ್ಎಂ ಕೃಷ್ಣ ಅವರು ಮದ್ದೂರು ಕಾಫಿ ಡೇನಲ್ಲಿ ಗುಪ್ತ ಮಾತುಕತೆ ಮಾಡಿದ್ದು ಕುತೂಹಲ ಕೆರಳಿಸಿತು.