ಕಾಂಗ್ರೆಸ್ ತೊರೆದಿದ್ದಕ್ಕೆ ಕಾರಣ ಬಿಚ್ಚಿಟ್ಟ ಎಸ್ ಎಂ ಕೃಷ್ಣ
ಮಂಡ್ಯ, ಫೆಬ್ರವರಿ 9: ಯುಪಿಎ ಸರ್ಕಾರದ ಆಡಳಿತದಲ್ಲಿ ಎಲ್ಲಿಯೋ ಕುಳಿತಿರುತ್ತಿದ್ದ ರಾಹುಲ್ ಗಾಂಧಿ ಅವರ ಹಸ್ತಕ್ಷೇಪ ಹೆಚ್ಚಿತ್ತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ತಿಳಿಯದಂತೆ ಅನೇಕ ವಿಚಾರಗಳು ನಡೆಯುತ್ತಿದ್ದವು ಎಂದು ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಆರೋಪಿಸಿದರು.
ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಬೀಳಿಸಲು ಬಿಜೆಪಿಯ ಯಾರೂ ಪ್ರಯತ್ನಿಸುತ್ತಿಲ್ಲ. ಸರ್ಕಾರದ ಆಂತರಿಕ ಭಿನ್ನಮತಗಳಿಂದ ಅವರಲ್ಲಿಯೇ ಗೊಂದಲವಾಗಿವೆ. ಕುಮಾರಸ್ವಾಮಿ ಐದು ವರ್ಷ ಅಧಿಕಾರದಲ್ಲಿ ಇರಲಿ. ಯಡಿಯೂರಪ್ಪ ಅವರೂ ಸರ್ಕಾರ ಇರಲಿ ನಾವು ಪ್ರತಿಪಕ್ಷದಲ್ಲಿ ಇರುತ್ತೇವೆ ಎಂದಿದ್ದಾರೆ ಎಂದು ಕೃಷ್ಣ ಹೇಳಿದರು.
ಬಿಜೆಪಿಗೆ ಬನ್ನಿ: ಕಾಂಗ್ರೆಸ್ನಲ್ಲಿರುವ ಬೆಂಬಲಿಗರನ್ನು ಆಹ್ವಾನಿಸಿದ ಎಸ್ ಎಂ ಕೃಷ್ಣ
ಯುಪಿಎ ಸರ್ಕಾರದ ಅವಧಿಯಲ್ಲಿ ವಿದೇಶಾಂಗ ಸಚಿವನಾಗಿದ್ದೆ. ಆಗ ನಡೆದ ಒಳ್ಳೆಯ ಮತ್ತು ಕೆಟ್ಟ ಬೆಳವಣಿಗೆಗಳಲ್ಲಿ ನಾನೂ ಭಾಗಿಯಾಗಿದ್ದೆ. ಮನಮೋಹನ್ ಸಿಂಗ್ ಅವರಿಗೆ ಮೈತ್ರಿ ಸರ್ಕಾರದ ಮೇಲೆ ಹಿಡಿತ ಇರಲಿಲ್ಲ. ಕೆಲವೊಂದು ವಿಚಾರಗಳು ಅವರಿಗೆ ತಿಳಿಯದೆಯೇ ಆಗುತ್ತಿದ್ದವು. ಹಾಗಾಗಿ ಅವರ ಅವಧಿಯಲ್ಲಿ ದೊಡ್ಡ ಹಗರಣಗಳು ನಡೆದವು.
ರಾಹುಲ್ ತೀರ್ಮಾನ ತೆಗೆದುಕೊಳ್ಳುತ್ತಿದ್ದರು
ಪ್ರಧಾನಿ ಜಾರಿಗೆ ತರಲು ಉದ್ದೇಶಿಸಿದ್ದ ಮಸೂದೆಯನ್ನು ರಾಹುಲ್ ಹರಿದು ಹಾಕಿದ್ದರು. ಸಂಸತ್ಗೆ ಜವಾಬ್ದಾರರಲ್ಲದ ರಾಹುಲ್ ಸರ್ಕಾರದ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು. 80 ವರ್ಷ ಆದವರು ಸಚಿವರಾಗಿ ಇರಬಾರದು ಎಂದು ಫರ್ಮಾನು ಹೊರಡಿಸಿದ್ದರು. ಇದು ತಿಳಿಯುತ್ತಿದ್ದಂತೆಯೇ ರಾಜೀನಾಮೆ ನೀಡಿ ಹೊರಬಂದೆ ಎಂದು ಅವರು ತಿಳಿಸಿದರು.
'ಕೃಷ್ಣ ಸಂಧಾನ': ಮಾಜಿ ಸಿಎಂ ಮಕ್ಕಳಿಗೆ ಟಿಕೆಟ್ ನೀಡಲು ಮುಂದಾದ ಬಿಜೆಪಿ
ರಾಹುಲ್ ತೀರ್ಮಾನಗಳು ಚಲಾವಣೆಗೆ ಬರುತ್ತಿದ್ದವು. ಪ್ರಧಾನ ಕಾರ್ಯದರ್ಶಿಯೂ ಆಗದ ಅವರು ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದರು ಎಂದು ದೂರಿದರು.
ಲೋಕಸಭೆಗೆ ಸ್ಪರ್ಧಿಸುವುದಿಲ್ಲ
ನಾನು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ದೇವೇಗೌಡರ ವಿರುದ್ಧ ನಾನು ಸ್ಪರ್ಧಿಸುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕೆಲವು ಭಾಗಗಳಲ್ಲಿ ಪ್ರಚಾರಕ್ಕೆ ತೆರಳುತ್ತೇನೆ. ನಾನು ಬಿಜೆಪಿಯಿಂದ ಯಾವ ಅಧಿಕಾರವನ್ನೂ ಅಪೇಕ್ಷಿಸಿಲ್ಲ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎನ್ನುವುದು ನನ್ನ ಆಸೆ ಎಂದು ಕೃಷ್ಣ ತಿಳಿಸಿದರು.
ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?
ಮೋದಿ ಸರ್ಕಾರಕ್ಕೆ ಮೆಚ್ಚುಗೆ
2009-2014ರ ಅವಧಿಯ ಯುಪಿಎ ಸರ್ಕಾರದಲ್ಲಿ ನಾನು ಸಚಿವನಾಗಿದ್ದೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು. ಆಗಲೇ ಹಗರಣಗಳು ಹೆಚ್ಚಾಗಿ ನಡೆದವು. ಕಾಮನ್ವೆಲ್ತ್, 2ಜಿ, ಕಲ್ಲಿದ್ದಲು ಹಗರಣಗಳು ನಡೆದವು. ಆದರೆ, ಮೋದಿ ಹಗರಣ ಮುಕ್ತ ಸರ್ಕಾರ ನೀಡಿ ಕ್ರಾಂತಿ ಮಾಡಿದರು. ಮೋದಿ ಅವರು ನೀಡಿದ ಶ್ರೇಷ್ಠ ಕೊಡುಗೆ ಭ್ರಷ್ಟಾಚಾರರಹಿತ ಸರ್ಕಾರ ಎಂದು ಕೃಷ್ಣ ಶ್ಲಾಘಿಸಿದರು.
2014ರಲ್ಲಿ ದೇಶದಲ್ಲಿ ದೊಡ್ಡ ಕ್ರಾಂತಿ ನಡೆಯಿತು. ಆ ಕ್ರಾಂತಿಯೇ ನರೇಂದ್ರ ಮೋದಿ. ಮೋದಿ ಐದು ವರ್ಷದಲ್ಲಿ ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ ನೀಡಿದ್ದಾರೆ. ಭಾರತ ಆಡಳಿತದಲ್ಲಿ ನಿರ್ಣಾಯಕ ಘಟ್ಟಕ್ಕೆ ಮುಟ್ಟುತ್ತಿದ್ದೇವೆ ಎಂದು ಹೇಳಿದರು.
ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಎಸ್ಎಂ ಕೃಷ್ಣಗೆ ಅವಮಾನ
ಮೋದಿ ನಾಯಕತ್ವ ದೇಶಕ್ಕೆ ಅವಶ್ಯಕ
ಮೋದಿ ತಾಕತ್ತು ಪಾಕಿಸ್ತಾನಕ್ಕೆ ಗೊತ್ತು. ಭಾರತ ಆರ್ಥಿಕವಾಗಿ ಬೆಳೆಯುವುದಕ್ಕೆ ಮೋದಿ ಕಾರಣ. ಪಾಕಿಸ್ತಾನ ಅನ್ಯಾಯದ ಹಾದಿ ಹಿಡಿದಿದೆ. ಒಳ್ಳೆಯ ಸರ್ಕಾರ ಮುಂದುವರಿಯಲು ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು. ಮೋದಿ ಗಟ್ಟಿ ಮನುಷ್ಯ ಎಂದು ಕೃಷ್ಣ ಹೇಳಿದರು.
ಮಾಜಿ ಪ್ರಧಾನಿ ವಲ್ಲಭಬಾಯ್ ಪಟೇಲ್ ಅವರಿಗೆ ಕಾಂಗ್ರೆಸ್ ನೀಡದ ಗೌರವವನ್ನು ಮೋದಿ ಕೊಟ್ಟಿದ್ದಾರೆ. ಪಟೇಲರ ಆಡಳಿತವನ್ನು ನಾವು ಮೋದಿ ಅವರಲ್ಲಿ ನೋಡುತ್ತಿದ್ದೇವೆ. ಮೋದಿ ಮತ್ತೆ ಐದು ವರ್ಷ ಮುಂದುವರಿಯುವ ಅಗತ್ಯವಿದೆ. ಕವಲುದಾರಿಯಲ್ಲಿರುವ ಭಾರತವನ್ನು ಮುನ್ನಡೆಸಲು ಮೋದಿ ನಾಯಕತ್ವ ಅವಶ್ಯಕ ಎಂದು ಪ್ರಶಂಸಿಸಿದರು.
ಬಿಜೆಪಿಗೆ ಸೇರಿಕೊಳ್ಳಲು ಆಹ್ವಾನ
ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಎಸ್.ಎಂ. ಕೃಷ್ಣ ಅವರು ತಮ್ಮ ಜತೆಗಾರರು, ಬೆಂಬಲಿಗರನ್ನು ಬಿಜೆಪಿ ಸೇರಿಕೊಳ್ಳುವಂತೆ ಆಹ್ವಾನಿಸಿದರು.
ಬೆಳಿಗ್ಗೆ ಮದ್ದೂರಿನಲ್ಲಿ ಮಾತನಾಡಿದ ಅವರು, ನನ್ನ ಜತೆ ಕಾಂಗ್ರೆಸ್ನಲ್ಲಿದ್ದವರು ಎಲ್ಲರೂ ಬಿಜೆಪಿಗೆ ಬನ್ನಿ. ಈ ಹಿಂದೆ ನಾನು ಕಾಂಗ್ರೆಸ್ನಲ್ಲಿ ಇದ್ದಾಗ ಜತೆಗಿದ್ದವರೆಲ್ಲರೂ ಬಿಜೆಪಿಗೆ ಬರಬೇಕು ಎನ್ನುವುದು ನನ್ನ ಆಸೆ. ಈ ಬಗ್ಗೆ ನಾನು ಬೆಂಬಲಿಗರ ಜತೆ ನಿರಂತರವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
2017ರ ಜನವರಿಯಲ್ಲಿ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವ ತೊರೆದಿದ್ದ ಎಸ್.ಎಂ. ಕೃಷ್ಣ, ಮಾರ್ಚ್ನಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು.