ಮಂಡ್ಯದಲ್ಲಿ ಮಳೆಗೆ ಗೋಡೆ ಕುಸಿದು ಆರು ಮೇಕೆ ಸಾವು
ಮಂಡ್ಯ, ಅಕ್ಟೋಬರ್ 6: ಗುರುವಾರ ಸುರಿದ ಭಾರೀ ಮಳೆಯಿಂದ ಮನೆಯೊಂದರ ಗೋಡೆ ಕುಸಿದು ಆರು ಮೇಕೆಗಳು ಸಾವನ್ನಪ್ಪಿ ಹತ್ತು ಮೇಕೆಗಳು ಗಂಭೀರ ಗಾಯಗೊಂಡಿರುವ ಘಟನೆ ಮಳವಳ್ಳಿ ತಾಲೂಕಿನ ಅಪ್ಪಾಜಯ್ಯನದೊಡ್ಡಿ ಗ್ರಾಮದಲ್ಲಿ ನಡೆದಿದೆ.
ರಾಮಣ್ಣ ಅವರು ಮನೆಯಲ್ಲಿ 16 ಮೇಕೆಗಳಿದ್ದು, ಗೋಡೆ ಕುಸಿದು ಬಿದ್ದ ಪರಿಣಾಮ ಆ ಪೈಕಿ 6 ಮೇಕೆಗಳು ಮೃತಪಟ್ಟಿದ್ದು, 5 ಮೇಕೆಗಳ ಕಾಲು ಮುರಿದಿದೆ. 5 ಮೇಕೆಗಳು ಗಾಯಗೊಂಡಿವೆ. ಘಟನೆಯಿಂದ ಸುಮಾರು 1.50 ಲಕ್ಷ ರೂ. ನಷ್ಟವಾಗಿದೆ.
ಶ್ರೀರಂಗಪಟ್ಟಣ ಬಳಿ ಮೊಸಳೆ ಮರಿ ಪ್ರತ್ಯಕ್ಷ
ಇನ್ನು ಮಳೆ ಸುರಿದ ಹಿನ್ನಲೆಯಲ್ಲಿ ಕೆರೆಕಟ್ಟೆಗಳು ತುಂಬಿದ್ದು ನದಿಯಲ್ಲಿದ್ದ ಮೊಸಳೆಗಳು ಇದೀಗ ಆಹಾರ ಹುಡುಕಿಕೊಂಡು ಬಂದು ಕೆರೆ ಕಟ್ಟೆಗಳಲ್ಲಿ ಆಶ್ರಯ ಪಡೆಯ ತೊಡಗಿವೆ. ಇದಕ್ಕೆ ಸಾಕ್ಷಿ ಎಂಬಂತೆ ಶ್ರೀರಂಗಪಟ್ಟಣ ತಾಲೂಕಿನ ಕಾರೇಕುರ ಗ್ರಾಮದ ಮೀನಿನ ಹೊಂಡವೊಂದರಲ್ಲಿ ಮೊಸಳೆ ಮರಿ ಪ್ರತ್ಯಕ್ಷವಾಗಿದೆ.
ಕಾರೇಕುರ ಗ್ರಾಮದ ಬಸವನಗುಡಿಯ ಪಕ್ಕದಲ್ಲಿ ಸುರೇಶ್ ಎಂಬುವವರು ಮೀನಿನ ಹೊಂಡ ನಿರ್ಮಾಣ ಮಾಡಿ ಈ ಹೊಂಡಕ್ಕೆ ಹಳ್ಳದಿಂದ ಹರಿಯುವ ನೀರಿನ ಸಂಪರ್ಕದ ವ್ಯವಸ್ಥೆ ಮಾಡಿದ್ದರು. ಹಳ್ಳದ ಹರಿವು ನೇರವಾಗಿ ಮೀನಿನ ಹೊಂಡವನ್ನು ಸೇರುತ್ತಿತ್ತು. ಈ ಹಳ್ಳದ ನೀರಿನಲ್ಲಿ ಆಹಾರ ಹುಡುಕಿಕೊಂಡು ಬಂದ ಮೊಸಳೆ ಮರಿ ಮೀನಿನ ಹೊಂಡವನ್ನು ಸೇರಿತ್ತು.
ಇಲ್ಲಿಯೇ ಸಿಕ್ಕ ಮೀನುಗಳನ್ನು ತಿನ್ನುತ್ತಾ ನೀರಿನಲ್ಲಿ ಅಡ್ಡಾಡಿಕೊಂಡಿತ್ತು. ಸುಮಾರು 2 ಅಡಿ ಉದ್ದದ ಒಂದೂವರೆ ಕೆಜಿ ತೂಕದ ಈ ಮೊಸಳೆ ಮರಿ ಇಲ್ಲಿಯವರೆಗೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಗುರುವಾರ ಬೆಳಗ್ಗೆ ಮೀನಿನ ಹೊಂಡದ ಬಳಿ ತೆರಳಿದ್ದ ಸುರೇಶ್ ಹಾಗೂ ಅವರ ಬಾವಮೈದ ಮಹದೇವ ಪ್ರಸಾದ್ ಅವರಿಗೆ ನೀರಿನಲ್ಲಿ ಏನೋ ಅಡ್ಡಾಡಿದಂತೆ ಕಂಡಿದೆ. ಇಷ್ಟು ದೊಡ್ಡ ಮೀನು ಇಲ್ಲಿಗೆ ಹೇಗೆ ಬಂತು ಎಂಬ ಕುತೂಹಲದಿಂದ ನೋಡಲು ಹೋಗಿದ್ದು ಹತ್ತಿರದಿಂದ ನೋಡಿದಾಗ ಅದು ಮೊಸಳೆ ಮರಿ ಎಂಬುದು ಖಚಿತವಾಗಿತ್ತು.
ಕೂಡಲೇ ಇಬ್ಬರೂ ಸೇರಿ ಆ ಮರಿಯನ್ನು ಜಾಗ್ರತೆಯಿಂದ ಹಿಡಿದು ಹೊಂಡದಿಂದ ಹೊರಕ್ಕೆ ತೆಗೆದಿದ್ದು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.