ಮಂಡ್ಯದ ದೊಡ್ಡರಸಿನಕೆರೆಯಲ್ಲೀಗ ಸಿಡಿ ಮಹೋತ್ಸವದ ರಂಗು
ಮಂಡ್ಯ, ಫೆಬ್ರವರಿ 08: ಮಂಡ್ಯ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಮತ್ತು ಇಷ್ಟಾರ್ಥ ನೆರವೇರಿಸುವ, ವ್ಯಾಜ್ಯ ಪರಿಹರಿಸುವ ಬಸವನ ಮೂಲಕ ಗಮನಸೆಳೆದಿರುವ ದೊಡ್ಡರಸಿನಕೆರೆ ವರ್ಷಕ್ಕೊಮ್ಮೆ ನಡೆಯುವ ಸಿಡಿ ಕೊಂಡೋತ್ಸವದಿಂದಲೂ ಪ್ರಖ್ಯಾತಿ ಪಡೆದಿದೆ. ಅಲ್ಲದೆ, ಸುತ್ತಮುತ್ತಲ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಈ ಬಾರಿ ದೊಡ್ಡರಸಿನಕೆರೆ ಗ್ರಾಮದಲ್ಲಿ ಏಳೂರಮ್ಮ ದೇವತೆಯ ಸಿಡಿ ಹಬ್ಬವು ನಿನ್ನೆಯಿಂದ ಆರಂಭಗೊಂಡಿದ್ದು, ಇಂದೂ ಮುಂದುವರೆಯಲಿದೆ. ಸಂಭ್ರಮದ ಜಾತ್ರೆಗೆ ಊರಿಗೆ ಊರೇ ಸಿಂಗಾರಗೊಂಡಿದೆ. ಗ್ರಾಮದ ಜನ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳ ಜನರು ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದಾರೆ.
ಸಿಡಿ ಹಬ್ಬದ ಬಗ್ಗೆ ಗೊತ್ತಾ?
ಇಷ್ಟಕ್ಕೂ ಸಿಡಿ ಹಬ್ಬ ಎಂದರೇನು ಎಂಬ ಪ್ರಶ್ನೆ ಮೂಡುವುದು ಸಹಜ. ವರ್ಷಕ್ಕೊಮ್ಮೆ ನಡೆಯುವ ಸಿಡಿಹಬ್ಬದಲ್ಲಿ ಹರಕೆ ಹೊತ್ತ ಭಕ್ತರನ್ನು ಸಿಡಿ ಮರಕ್ಕೆ ತೂಗು ಹಾಕಿ ಸಿಡಿ ರಥವನ್ನು ಎಳೆಯುವುದೇ ಈ ಹಬ್ಬದ ವಿಶೇಷ. ಸುಮಾರು 75 ಅಡಿಯುಳ್ಳ ಮರಕ್ಕೆ ದೊಡ್ಡರಸಿನಕೆರೆ ಗ್ರಾಮದ ಎಲ್ಲೆಯಲ್ಲಿ ಗಂಗಮತಸ್ಥ ಜನಾಂಗದ ಮನೆಯ ಹಿರಿಯ ಮಕ್ಕಳು ಹಾಗೂ ಮುಟ್ಟನಹಳ್ಳಿ ಗ್ರಾಮದ ಎಲ್ಲೆಯಲ್ಲಿ ಒಕ್ಕಲಿಗ ಜಾತಿಯಲ್ಲಿ ಮದುವೆಯಾದ ಮನೆಯ ಹಿರಿಯ ಮಕ್ಕಳನ್ನು ಮೊದಲ ವರ್ಷ ತೇರಿನ ಕಂಬಕ್ಕೆ ನೇತು ಹಾಕಿ ಅದನ್ನು ರಥಕ್ಕೆ ಕಟ್ಟಿ ಎಳೆಯಲಾಗುತ್ತದೆ. ಈ ವೇಳೆ ರಥಕ್ಕೆ ನೆರೆದ ಸಾವಿರಾರು ಭಕ್ತರು ಮತ್ತು ನವ ದಂಪತಿ ಹಣ್ಣು ಜವನ ಎಸೆದು ಹರಕೆ ತೀರಿಸುತ್ತಾರೆ.
ದಾವಣಗೆರೆ : ವಿವಾದ ಹುಟ್ಟು ಹಾಕಿದ ಸಿಡಿ ಉತ್ಸವ
ದೊಡ್ಡರಸಿನಕೆರೆಯಲ್ಲಿ ನೆಲೆನಿಂತ ಏಳೂರಮ್ಮ
ಗ್ರಾಮದಲ್ಲಿ ಸಿಡಿ ಹಬ್ಬದ ಆಚರಣೆ ಹೇಗೆ ಬಂತು ಎಂಬುದನ್ನು ನೋಡುವುದಾದರೆ, ಹಿಂದಿನ ಕಾಲದಲ್ಲಿ ದೊಡ್ಡರಸಿನಕೆರೆ ಗ್ರಾಮವನ್ನು ದೊಡ್ಡರಸ ಹಾಗೂ ಚಿಕ್ಕರಸ ಎಂಬುವವರು ಆಳುತ್ತಿದ್ದರಂತೆ. ಈ ವೇಳೆ ಅಲ್ಲಿಗೆ ರಥರೂಢಳಾಗಿ ಬಂದ ಏಳೂರಮ್ಮ ದೇವಿ ತಾನು ನೆಲೆಸಲು ಗ್ರಾಮದಲ್ಲಿ ಸ್ಥಳ ನೀಡುವಂತೆಯೂ ಹಾಗೂ ರಥವನ್ನು ಎಳೆಯುವ ಮುನ್ನ ಕೋಣವನ್ನು ಬಲಿ ನೀಡಬೇಕೆಂದು ಕೇಳಿಕೊಂಡಳಂತೆ. ಅದು ನಡೆಯುತ್ತಾ ಬಂದಿತ್ತಾದರೂ ಕಾಲ ಕ್ರಮೇಣ ಕೋಣವನ್ನು ಬಲಿಕೊಡುವ ಬದಲು ಕುರಿ ಮೇಕೆಗಳನ್ನು ಬಲಿಕೊಡುವ ಪ್ರತೀತಿ ಮುಂದುವರೆಯುತ್ತಾ ಬಂತೆಂದು ಹೇಳಲಾಗುತ್ತಿದೆ. ದೊಡ್ಡರಸಿನಕೆರೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿಗೆ ಸೇರಿದ್ದು, ಭಾರತೀನಗರದಿಂದ 3 ಕಿ.ಮೀ, ಮಂಡ್ಯದಿಂದ 16 ಕಿ.ಮೀ ಮತ್ತು ಮದ್ದೂರಿನಿಂದ 11 ಕಿ.ಮೀ ದೂರಲ್ಲಿದೆ.
ಸಿಡಿಹಬ್ಬದಂದು ಏನೇನು ನಡೆಯುತ್ತದೆ...
ಫೆ.7ರ ಶುಕ್ರವಾರ ರಾತ್ರಿ 10ಗಂಟೆ ಬಳಿಕ ಹರಕೆ ಭಕ್ತರನ್ನು ಸಿಡಿ ಮರಕ್ಕೆ ತೂಗು ಹಾಕಿ ಸಿಡಿರಥವನ್ನು ಎಳೆಯಲಾಗಿದೆ. ಇದೇ ವೇಳೆ ಶ್ರೀ ಏಳೂರಮ್ಮ, ಕಾಳಮ್ಮ, ಹಿರಿಸತ್ಗೆ, ಚಿಕ್ಕಮ್ಮ ತಾಯಿ, ಶ್ರೀ ಕಾಲ ಬೈರವೇಶ್ವರ ಬಸಪ್ಪಗಳ ಮೆರವಣಿಗೆಯೂ ನಡೆದಿದೆ. ಹಬ್ಬದಲ್ಲಿ ಸುತ್ತಮುತ್ತಲಿನ ಚಿಕ್ಕರಸಿನಕೆರೆ, ದೊಡ್ಡರಸಿನಕೆರೆ, ಮುಟ್ಟನಹಳ್ಳಿ, ದೇವರಹಳ್ಳಿ, ಕುರಿಕೆಂಪನದೊಡ್ಡಿ, ಗುರುದೇವರಹಳ್ಳಿ, ಗೌಡಯ್ಯನದೊಡ್ಡಿ ಸೇರಿದಂತೆ ಏಳು ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಲಿದ್ದಾರೆ.
ಬೆಳಿಗ್ಗೆಯಿಂದಲೇ ಗ್ರಾಮದಲ್ಲಿರುವ ದೇವತೆಗಳಿಗೆ ಹೋಮ ಮತ್ತು ಮಹಾಮಂಗಳಾರತಿ ನಡೆದು, ಸಂಜೆ 5 ಗಂಟೆಗೆ ಒಕ್ಕಲಿಗರ ಮಡೆ ಆಚರಣೆ ನಡೆಯಲ್ಲಿದೆ. ಸಂಜೆ 6 ರಿಂದ 8 ಗಂಟೆಯವರೆಗೆ ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ದೇವರಹಳ್ಳಿ ಗ್ರಾಮದವರಿಂದ ಕೊಂಡ ಬಂಡಿ ಉತ್ಸವ ನಡೆಯಲಿದೆ. ತೇರಿನ (ಸಿಡಿಯ) ಜೊತೆಯಲ್ಲಿ ಚಿಕ್ಕತಾಯಮ್ಮ, ಹಿರಿಸತ್ಕೆ, ಉಪಾಸನೆಗಳು, ಹೂ-ಹೊಂಬಾಳೆ ಉತ್ಸವ, ಬಂಡಿಉತ್ಸವ, ಕೋಲಾಟ, ಬೈಲಾಟ, ಪೂಜಾಕುಣಿತ, ವೀರಗಾಸೆ ನಡೆಯಲಿದೆ. ರಾತ್ರಿ 11 ರಿಂದ 12ರವರೆಗೆ ಮುಟ್ಟನಹಳ್ಳಿ ಗ್ರಾಮದಿಂದ ಅಮ್ಮನವರಿಗೆ ಮಡೆ, ಬಾಯಿಬೀಗ, ರಾತ್ರಿ 1 ಗಂಟೆಗೆ ಮೇಲೆ ದೇವರಹಳ್ಳಿ ಗ್ರಾಮದಿಂದ ಮಡೆ ಉತ್ಸವ ನಡೆಯಲಿದೆ.
ಉಳವಿ ಚೆನ್ನಬಸವೇಶ್ವರ ಮಹಾರಥೋತ್ಸವ ಫೆ. 10 ಕ್ಕೆ
ಏಳೂರಮ್ಮ ದೇಗುಲದಲ್ಲಿ ಕೊಂಡೋತ್ಸವ
ಇಂದು ಬೆಳಿಗ್ಗೆ ಏಳೂರಮ್ಮ, ಕಾಳಮ್ಮ, ಚಿಕ್ಕಮ್ಮ, ಹಿರಿಯಮ್ಮ, ಕಾಲ ಭೈರವೇಶ್ವರಸ್ವಾಮಿ ಹಾಗೂ ಬಸಪ್ಪಗಳ ಉತ್ಸವದ ಜೊತೆಗೆ ಏಳೂರಮ್ಮ ದೇವಸ್ಥಾನದಲ್ಲಿ ಕೊಂಡೋತ್ಸವ ನಡೆಯಲಿದೆ. ಮಧ್ಯಾಹ್ನ 3 ಗಂಟೆಗೆ ಚಿಕ್ಕಮ್ಮ ಮತ್ತು ಹಿರಿಯಮ್ಮನವರ ಧೂಳುಮರಿ ನೀಡುವ ಕಾರ್ಯಕ್ರಮ ನಡೆಯಲಿದೆ. ಫೆ.9ರ ಭಾನುವಾರ ಬೆಳಿಗ್ಗೆ 8 ಗಂಟೆಗೆ ಗಂಗಮತಸ್ಥರ ಮಡೆ ಉತ್ಸವ ನಡೆಯಲಿದ್ದು, ಕಳ್ಳಕಾಕರಿಗೆ ಸಿಂಹಸ್ವಪ್ನವಾಗಿರುವ ಗ್ರಾಮದ ಸಣ್ಣಕ್ಕರಾಯ ಹಾಗೂ ಕಾಲಭೈರವೇಶ್ವರ ಉತ್ಸವ ನಡೆಯಲಿದೆ.