ದೇವೇಗೌಡರಿಗೆ ಸಿದ್ದರಾಮಯ್ಯ ದುಷ್ಮನ್: ಶ್ರೀನಿವಾಸ್ ಪ್ರಸಾದ್
ಬೆಂಗಳೂರು, ಜುಲೈ 16: ಮೈತ್ರಿ ಸರ್ಕಾರದ ದುರವಸ್ಥೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರ ಧೋರಣೆಗಳೇ ಕಾರಣ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದರು.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರಿಗೆ ಸಿದ್ದರಾಮಯ್ಯ ದುಷ್ಮನ್. ಸಿದ್ದರಾಮಯ್ಯ ಅವರಿಗೆ ದೇವೇಗೌಡರು ದುಷ್ಮನ್. ಸರ್ಕಾರದಲ್ಲಿನ ಈ ಕಿತ್ತಾಟ, ಅವ್ಯವಸ್ಥೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಲತಾಯಿ ಧೋರಣೆ ಮತ್ತು ಸಚಿವ ರೇವಣ್ಣ ಅವರ ಸರ್ವಾಧಿಕಾರಿ ಧೋರಣೆಗಳೇ ಕಾರಣ ಎಂದು ಆರೋಪಿಸಿದರು.
'ಕಾಂಗ್ರೆಸ್ ಬಿಟ್ಟ ಎಸ್ಸೆಂ ಕೃಷ್ಣ ರಾಜಕೀಯದಿಂದ ನಿವೃತ್ತರಾಗಬೇಕಿತ್ತು'
ಇಂದಿನ ಎಲ್ಲ ಬೆಳವಣಿಗೆಗಳಿಗೆ ದೋಸ್ತಿ ಸರ್ಕಾರದ ನಾಯಕರೇ ಕಾರಣರಾಗಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಕಿತ್ತಾಟದಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.
ಲೋಕಸಭೆ ಚುನಾವಣೆಯಲ್ಲಿ ಮತದಾರರು ಜೆಡಿಎಸ್ಗೆ ತಕ್ಕಪಾಠ ಕಲಿಸಿದ್ದಾರೆ. ಹಾಸನಕ್ಕಿಂತಲೂ ಮಂಡ್ಯದಲ್ಲಿ ಜೆಡಿಎಸ್ ತಳಮಟ್ಟದಿಂದ ಗಟ್ಟಿಯಾಗಿತ್ತು. ಏಳು ಶಾಸಕರು, ವಿಧಾನಪರಿಷತ್ ಸದಸ್ಯರು ಅಲ್ಲದೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಜೆಡಿಎಸ್ ಪ್ರತಿನಿಧಿಗಳೇ ಇದ್ದಾರೆ. ಆ ಪಕ್ಷದ ಮುಖಂಡರೇ ತಮ್ಮ ನಾಲಿಗೆಯನ್ನು ಹರಿಬಿಟ್ಟು ಭದ್ರಕೋಟೆಯನ್ನು ಹಾಳುಮಾಡಿಕೊಂಡಿದ್ದಾರೆ ಎಂದರು.
ಸರ್ಕಾರ ಪತನಕ್ಕೆ ಕಾರಣಗಳು...
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಂದ ಶಾಸಕರು ರಾಜೀನಾಮೆ ನೀಡಿರುವುದು ಕುಮಾರಸ್ವಾಮಿ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ಬಿಜೆಪಿ ಬಹುದೊಡ್ಡ ಪಕ್ಷವಾಗಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಕುತಂತ್ರದಿಂದ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಲು ಕಾಂಗ್ರೆಸ್ ಬೇಷರತ್ ಬೆಂಬಲ ನೀಡಿತ್ತು. ಆದರೆ, ಸಮನ್ವಯ ಸಮಿತಿಯೊಳಗಿನ ಕಿತ್ತಾಟಗಳು, ಹಿರಿಯ ಶಾಸಕ ಎಚ್. ವಿಶ್ವನಾಥ್ ಅವರಿಗೆ ಯಾವುದೇ ಸ್ಥಾನ ನೀಡದೆ ಇರುವುದು ಮುಂತಾದ ನಡೆಗಳು ಸರ್ಕಾರವು ಪತನದತ್ತ ಸಾಗಲು ಕಾರಣವಾಗಿವೆ ಎಂದರು.
ಆಡಳಿತ ಯಂತ್ರ ಕುಸಿದುಹೋಗಿದೆ
ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಇರುವುದು, ಸರ್ವಾಧಿಕಾರಿ ಧೋರಣೆಯುಳ್ಳ ರೇವಣ್ಣ ಅವರು ಎಲ್ಲ ಇಲಾಖೆಗಳಲ್ಲಿಯೂ ಹಸ್ತಕ್ಷೇಪ ಮಾಡಿರುವುದೇ ಈ ಎಲ್ಲ ಬೆಳವಣಿಗೆಗಳಿಗೆ ಕಾರಣ. ಸರ್ಕಾರ ಅಸ್ತಿತ್ವಕ್ಕೆ ಬಂದ ಸಂದರ್ಭದಿಂದಲೂ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದುಹೋಗಿದೆ. ಬರಗಾಲದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಆದರೂ ಸರ್ಕಾರ ಮಾತ್ರ ಜನಸಾಮಾನ್ಯರ ಸ್ಥಿತಿಗತಿಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಅಪ್ಪ ಮಕ್ಕಳ ಜತೆ ಹೋದರೆ ಉಳಿಗಾಲವಿಲ್ಲ ಎಂದಿದ್ದೆ: ಎ.ಮಂಜು
ಶಾಸಕರು ಬಿಜೆಪಿಗೆ ಬರುತ್ತಾರೆ
'ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಸೀಟುಗಳು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರ ಉರುಳಿ ಬೀಳುವುದಕ್ಕೆ ಸಿದ್ದರಾಮಯ್ಯ ಅವರೇ ಕಾರ್ಯತಂತ್ರ ಹೆಣೆದಿದ್ದಾರೆ. ಸಚಿವ ಜಿಟಿ ದೇವೇಗೌಡ ಅವರು ನನ್ನೊಂದಿಗೆ ವಿಶ್ವಾಸದಿಂದ ಇದ್ದಾರೆ. ಆದರೆ, ಅವರು ಬಿಜೆಪಿ ಸೇರುತ್ತಾರೆ ಎಂಬ ವದಂತಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಅವರನ್ನು ಈ ಕಾರಣದಿಂದ ಸಂಪರ್ಕಿಸಿಲ್ಲ. ಆದರೆ ಸದ್ಯದ ಬೆಳವಣಿಗೆ ನೋಡಿದಾಗ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ನಿಂದ ಹೆಚ್ಚಿನ ಶಾಸಕರು ಬಿಜೆಪಿಗೆ ಬರಲಿದ್ದಾರೆ' ಎಂದು ಹೇಳಿದರು.
ಎಸ್ ಎಂ ಕೃಷ್ಣ ಕಾಂಗ್ರೆಸ್ ತೊರೆಯಬಾರದಿತ್ತು
'ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ಬಿಡಬಾರದಿತ್ತು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಹಾಗೊಮ್ಮೆ ಅವರು ಪಕ್ಷ ಬಿಟ್ಟ ಬಳಿಕ ರಾಜಕೀಯ ನಿವೃತ್ತಿ ಪಡೆಯಬೇಕಿತ್ತು. ಈಗ ಅವರ ರಾಜಕೀಯ ಜೀವನ ಮುಗಿದ ಅಧ್ಯಾಯ. ಅವರು ಕಾಂಗ್ರೆಸ್ ಸೇರಿದ ಬಳಿಕ ರಾಜಕೀಯ ಬೆಳವಣಿಗೆಗಳನ್ನು ಕಂಡರು. ಕಾಂಗ್ರೆಸ್ ಪಕ್ಷದಿಂದ ಎಲ್ಲ ಅಧಿಕಾರವನ್ನೂ ಅನುಭವಿಸಿದ್ದಾರೆ' ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ಸಮಸ್ಯೆ ರೇವಣ್ಣನೇ ಆಗಿದ್ದರೆ ರಾಜೀನಾಮೆ ಕೊಡಿಸಲು ಪ್ರಯತ್ನಿಸ್ತೇನೆ: ಎಟಿ ರಾಮಸ್ವಾಮಿ