ಶಿಂಷಾ ನದಿ ತಟ ಸಂಪೂರ್ಣ ಮಲೀನ, ಎದುರಾಗಿವೆ ಸಾಲು ಸಾಲು ಸಮಸ್ಯೆ
ಮಂಡ್ಯ, ಡಿಸೆಂಬರ್ 03: ಮಂಡ್ಯ ಜಿಲ್ಲೆಯಲ್ಲಿ ಹರಿಯುವ ನದಿಗಳ ಪೈಕಿ ಶಿಂಷಾ ನದಿಯೂ ಒಂದಾಗಿದೆ. ಈ ನದಿ ಕಳೆದ ಕೆಲ ವರ್ಷಗಳಿಂದ ಸಮರ್ಪಕವಾಗಿ ಮಳೆ ಸುರಿಯದ ಕಾರಣ ಬತ್ತಿ ಹೋಗಿತ್ತು. ಆದರೆ ಈ ಬಾರಿ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸುತ್ತಿದೆಯಾದರೂ ನದಿ ಸಂಪೂರ್ಣ ಮಲೀನಗೊಳ್ಳುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿರುವ ದೃಶ್ಯವಾಗಿದೆ.
ಇಷ್ಟಕ್ಕೂ ಶಿಂಷಾ ನದಿ ಮಲೀನಗೊಳ್ಳಲು ಕಾರಣವೇನು ಎಂಬುದನ್ನು ಹುಡುಕುತ್ತಾ ಹೋದರೆ ನದಿ ತಟದಲ್ಲಿ ನಡೆಯುತ್ತಿರುವ ಒಂದಷ್ಟು ಚಟುವಟಿಕೆಗಳು ಅವು ನದಿಯನ್ನು ಮಲೀನಗೊಳಿಸುವಲ್ಲಿ ಮುಖ್ಯಪಾತ್ರ ವಹಿಸುತ್ತಿವೆ ಎಂಬುದನ್ನು ತೋರಿಸುತ್ತಿವೆ.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಸೋಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಹೋಟೆಲ್ಗಳಿಂದ ತ್ಯಾಜ್ಯ ನೀರು ನೇರವಾಗಿ ನದಿಗೆ ಸೇರುತ್ತಿವೆ ಎಂಬ ಆರೋಪ ಸ್ಥಳೀಯ ಗ್ರಾಮಸ್ಥರದ್ದಾಗಿದೆ. ಇನ್ನು ನದಿ ತಟದಲ್ಲಿ ಕೆಲವರು ಮದ್ಯ ಸೇವಿಸಿ ಬಾಟಲಿಗಳನ್ನು ನದಿಗೆ ಎಸೆಯುತ್ತಾರೆ.
ಸ್ನಾನಕ್ಕೂ ಅಯೋಗ್ಯ ಕರ್ನಾಟಕದ 17 ನದಿಗಳು : ಸ್ವಚ್ಛಗೊಳಿಸಲು ಸಮಿತಿ
ಜತೆಗೆ ಪ್ಲಾಸ್ಟಿಕ್ ವಸ್ತುಗಳು, ನೀರಿನ ಬಾಟಲಿಗಳನ್ನು ನದಿಗೆ ಎಸೆದು ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಯಾರಿಗೂ ಸಾಧ್ಯವಾಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಕೆಲವು ಯುವಕರು ಮೋಜು ಮಸ್ತಿಗಾಗಿ ಇತ್ತ ಬರುತ್ತಿದ್ದು, ಒಂದಷ್ಟು ಹೊತ್ತು ಇಲ್ಲಿ ಕಳೆದು ತಾವು ತಂದ ಬಾಟಲಿ, ಇನ್ನಿತರೆ ಪ್ಲಾಸ್ಟಿಕ್ ವಸ್ತುಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಇದರಿಂದ ಅಶುಚಿತ್ವದ ವಾತಾವರಣ ನಿರ್ಮಾಣವಾಗುವುದರೊಂದಿಗೆ ತ್ಯಾಜ್ಯಗಳು ನೇರವಾಗಿ ನದಿಯನ್ನು ಸೇರುತ್ತಿದೆ.
ಆರೋಗ್ಯದ ಮೇಲೆ ಪರಿಣಾಮ
ತ್ಯಾಜ್ಯಗಳಿಂದ ನದಿ ದುರ್ವಾಸನೆ ಬೀರುತ್ತಿದ್ದು, ನೀರನ್ನು ಬಳಸಲಾಗದ ಸ್ಥಿತಿಗೆ ಬಂದು ತಲುಪಿದೆ. ಇನ್ನೊಂದು ಮುಖ್ಯ ಕಾರಣವೂ ಇದೆ. ಅದೇನೆಂದರೆ ಇಲ್ಲಿ ಕೆಲವರು ಜೀವನೋಪಾಯಕ್ಕಾಗಿ ಹಂದಿ ಸಾಕಾಣೆ ಮಾಡುತ್ತಿದ್ದಾರೆ. ಈ ಹಂದಿ ಗೂಡಿನಿಂದ ಹೊರ ಬರುವ ತ್ಯಾಜ್ಯವನ್ನು ನದಿಗೆ ಬಿಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಸೆಪ್ಟಿಕ್ ಟ್ಯಾಂಕ್ನಂತೆ ಬೆಳ್ಳಂದೂರು ಕೆರೆ ಬಳಕೆ: ಆಯೋಗ ವರದಿ
ಕೆಲವು ಹೋಟೆಲ್ಗಳು ಇನ್ನಿತರ ಅಂಗಡಿಗಳವರು ಪ್ಲಾಸ್ಟಿಕ್ ತ್ಯಾಜ್ಯಗಳನ್ನು ತಂದು ಸುಡುತ್ತಾರೆ ಇದರಿಂದ ಬರುವ ದಟ್ಟ ಹೊಗೆಯೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಸ್ಥಳೀಯರ ಆರೋಪ
ಬೆಂಕಿ ಹಾಕಿ ಹಾಕಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸುಡುತ್ತಿರುವುದರಿಂದ ಸುತ್ತಮುತ್ತಲಿನ ಜಮೀನಿನಲ್ಲಿ ಕೆಲಸ ಮಾಡುವವರಿಗೆ ತೊಂದರೆಯಾಗುತ್ತಿದೆ. ಉಸಿರಾಟಕ್ಕೆ ಸಮಸ್ಯೆಯಾಗುತ್ತಿದೆ. ಇದು ಒಂದು ಎರಡು ದಿನದ ಸಮಸ್ಯೆಯಲ್ಲ. ಪ್ರತಿದಿನವೂ ಇಂತಹದ್ದೇ ತೊಂದರೆಗಳು ಎದುರಾಗುತ್ತವೆ.
ಈ ಬಗ್ಗೆ ಸಂಬಂಧಿಸಿದ ಗ್ರಾಮಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಅಲ್ಲದೆ ಈ ಬಗ್ಗೆ ಪ್ರತಿಭಟನೆ ನಡೆಸಿದರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ ಎಂಬುದಾಗಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಏನಾಗುತ್ತಿದೆ?:ದಕ್ಷಿಣ ಕನ್ನಡ ಮಾತ್ರವಲ್ಲ, ಮಲೆನಾಡಿನ ಪಂಚ ನದಿಗಳು ಬತ್ತುತ್ತಿವೆ!
ಸಾಯುವ ಸ್ಥಿತಿಗೆ ಬಂದು ತಲುಪಿವೆ
ಶಿಂಷಾ ನದಿಯು ಹೊಳೆ ಆಂಜನೇಯ ದೇವಸ್ಥಾನ, ವೈದ್ಯನಾಥೇಶ್ವರ ದೇವಾಲಯವನ್ನು ದಡದಲ್ಲಿ ಹೊಂದಿದ್ದರೆ, ಕೊಕ್ಕರೆ ಬೆಳ್ಳೂರು, ಮುತ್ತತ್ತಿ ಅರಣ್ಯ ಪ್ರದೇಶವೂ ನದಿ ತಟದಲ್ಲಿದೆ. ಈ ನೀರನ್ನು ಜನರಲ್ಲದೆ, ಪ್ರಾಣಿ ಪಕ್ಷಿಗಳು ಬಳಸುತ್ತವೆ. ಇದು ಕಲುಷಿತವಾಗಿರುವ ಕಾರಣ ಇತ್ತೀಚೆಗೆ ಪ್ರಾಣಿ ಪಕ್ಷಿಗಳು ಈ ನೀರನ್ನು ಸೇವಿಸಿ ಸಾಯುವ ಸ್ಥಿತಿಗೆ ಬಂದು ತಲುಪಿವೆ.
ಮುಂದಿನ ದಿನಗಳಲ್ಲಿ ತೊಂದರೆ
ಇನ್ನೂ ಮುಂದೆಯಾದರೂ ಶಿಂಷಾ ನದಿ ದಡದಲ್ಲಿ ನದಿ ನೀರು ಮಲೀನಗೊಳ್ಳಲು ಕಾರಣವಾಗುವ ಚಟುವಟಿಕೆಗಳಿಗೆ ತಡೆಯೊಡ್ಡಬೇಕಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಇದರಿಂದ ಇನ್ನಷ್ಟು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.