ನವ ಕೆಆರ್ ಪೇಟೆ ನಿರ್ಮಾಣ: ಬಿಜೆಪಿಯಿಂದ ಪ್ರತ್ಯೇಕ ಪ್ರಣಾಳಿಕೆ
ಕೆಆರ್ ಪೇಟೆ, ಡಿಸೆಂಬರ್ 2: ಕೆಆರ್ ಪೇಟೆಯಲ್ಲಿ ಬಿಜೆಪಿಯ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಉಪ ಚುನಾವಣೆಯ ಬಿರುಸಿನ ಪ್ರಚಾರ ನಡೆಯುತ್ತಿದೆ. ಕಳೆದ ಬಾರಿ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದಿದ್ದ ಅನರ್ಹ ಶಾಸಕ ನಾರಾಯಣ ಗೌಡ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಬಿಜೆಪಿ, ಕೆಆರ್ ಪೇಟೆ ಕ್ಷೇತ್ರಕ್ಕಾಗಿಯೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಕೆಆರ್ ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆ 'ನವ ಕೃಷ್ಣರಾಜಪೇಟೆ ನಿರ್ಮಾಣ, ಭಾರತೀಯ ಜನತಾ ಪಾರ್ಟಿ ವಾಗ್ದಾನ' ಶೀರ್ಷಿಕೆಯ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಕ್ಷೇತ್ರದಲ್ಲಿನ ಪ್ರಮುಖ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದು, ಅವುಗಳ ಪರಿಹಾರಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಮದ್ಯದ ಹೊಳೆ
ಡಿಸಿಎಂ ಅಶ್ವತ್ಥನಾರಾಯಣ್ ಪ್ರಣಾಳಿಕೆ ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ವಿಜಯೇಂದ್ರ, ಕೆಆರ್ ಪೇಟೆ ತಾಲ್ಲೂಕಿಗೆ ಪ್ರಮುಖವಾಗಿ ಕಾಡುತ್ತಿರುವ ಸಮಸ್ಯೆಯೆಂದರೆ ಕೆರೆ ಕೋಡಿ. ಹಾಗಾಗಿ ಇದನ್ನು ಕೋಡಿ ಮುಕ್ತ ತಾಲ್ಲೂಕು ಮಾಡಲು ಮುಖ್ಯವಾಗಿ ಉದ್ದೇಶಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಗೆದ್ದರೆ ಸರ್ಕಾರದ ಮೊದಲ ಆದ್ಯತೆ ಇದಾಗಲಿದೆ. ಈ ಮೂಲಕ ಕೆರೆಗಳ ಸಂರಕ್ಷಣೆ ಮತ್ತು ಅನಾಹುತ ತಡೆಯುವುದರತ್ತ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಅಭಿವೃದ್ಧಿ ಹೊಂದಿದ ತಾಲ್ಲೂಕಾಗಿ ಮಾಡುವುದು
ಮಂಡ್ಯ ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದಿರುವ ಕೆಆರ್ ಪೇಟೆಯನ್ನು ಅತ್ಯಂತ ಅಭಿವೃದ್ಧಿ ಹೊಂದಿದ ತಾಲ್ಲೂಕನ್ನಾಗಿ ಮಾಡುವುದು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ. 18 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹೊಸಹೊಳಲು ಮೇಲ್ಗಾಲುವೆ ಯೋಜನೆ, ಗೂಡೆಹೊಸಳ್ಳಿ ಏತನೀರಾವರಿ ಯೋಜನೆ ಜಾರಿ. ಶೀಳನೆರೆ ಹೋಬಳಿಯ ಏತ ನೀರಾವರಿ ಯೋಜನೆ ಶೀಘ್ರ ಜಾರಿ. ಕೆಆರ್ ಪೇಟೆಯಲ್ಲಿ ದಲಿತ ಭವನ ನಿರ್ಮಾಣ. ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ.
ಹೆಚ್ಚುವರಿ ನೀರು ಶುದ್ಧೀಕರಣ ಘಟಕ
ನೀರಾವರಿ ಕೊರತೆ ನೀಗಿಸಲು ಶಾಶ್ವತ ನೀರಾವರಿ ಯೋಜನೆ: ಹೇಮಾವತಿ ನಾಲೆಗಳ ಸಮರ್ಪಕ ದುರಸ್ತಿ. ಲಭ್ಯ ನೀರಿನ ಪರಿಪೂರ್ಣ ಉಪಯೋಗದ ನಿಟ್ಟಿನಲ್ಲಿ ಅಗತ್ಯ ಕಾಮಗಾರಿಗಳು. ಸಾದುಗೋಪನಹಳ್ಳಿ ನೀರು ಶುದ್ಧೀಕರಣ ಘಟಕ ದುರಸ್ತಿ. ಹೇಮಾವತಿ ಜಲಾಶಯದ ನೀರನ್ನು ಶುದ್ಧೀಕರಣಕ್ಕೆ ಹೆಚ್ಚಿನ ಘಟಕಗಳ ಸ್ಥಾಪನೆ. ಯುವಜನರು ತಾಲ್ಲೂಕಿನಲ್ಲಿಯೇ ಉದ್ಯೋಗ ಮಾಡುವಂತಾಗಲು ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಆದ್ಯತೆ. ಮಹಿಳಾ ಪ್ರಥಮದರ್ಜೆ ಕಾಲೇಜಿಗೆ ಸ್ವಂತ ಕಟ್ಟಡ.
ನನಗೆ ಕೊಡಬಾರದ ಹಿಂಸೆ ಕೊಟ್ಟಿದ್ದಾರೆ, ಬಿಜೆಪಿ ಗೆಲ್ಲಿಸಬೇಡಿ: ಡಿಕೆಶಿ
ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಶ್ಚೇತನ
ಬೂಕನಕೆರೆಯಲ್ಲಿ ವಿತರಣಾ ನಾಲೆ ಪುನರಾರಂಭ. ಪಾಂಡವಪುರ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಕ್ರಮ. ರೈತರ ಪಂಪ್ಸೆಟ್ಗಳಿಗೆ ನಿರಂತರ ವಿದ್ಯುತ್. ಕೆಆರ್ಎಸ್ ಜಲಾಶಯಕ್ಕೆ ಭೂಮಿ ನೀಡಿದ ರೈತರಿಗೆ ಪರಿಹಾರ. ಪಾಂಡವಪುರ-ಗಂಜಿಗೆರೆ-ಸೋಮನಹಳ್ಳಿ ಮಾರ್ಗವಾಗಿ ಮಂಡ್ಯಕ್ಕೆ ರಸ್ತೆ. ಸರ್ಕಾರಿ ಶಾಲಾ ಕಟ್ಟಡಗಳ ನವೀಕರಣ.
ಒಕ್ಕಲಿಗ ಮುಖಂಡರಿಂದ ಪ್ರಚಾರ
ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ನಾರಾಯಣಗೌಡ ಸ್ಪರ್ಧಿಸುತ್ತಿದ್ದಾರೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಹುಟ್ಟೂರು ಇದಾಗಿರುವುದರಿಂದ ಅವರು ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದಕ್ಕಾಗಿ ವಿಜಯೇಂದ್ರ ಕೆಆರ್ ಪೇಟೆಯಲ್ಲಿಯೇ ಮೊಕ್ಕಾಂ ಹೂಡಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಒಕ್ಕಲಿಗ ಮತಗಳು ಹೆಚ್ಚಾಗಿರುವುದರಿಂದ ಆ ಮತಗಳನ್ನು ಸೆಳೆಯಲು ಪ್ರಚಾರಕ್ಕೆ ಒಕ್ಕಲಿಗ ಮುಖಂಡರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ.
ಕುಮಾರಸ್ವಾಮಿ ಎಲೆಕ್ಷನ್ ಟೈಮಲ್ಲಿ ಮಾತ್ರ ಕಣ್ಣೀರ್ ಹಾಕ್ತಾರಂತೆ...
ಬಿಜೆಪಿ ಒಮ್ಮೆಯೂ ಗೆದ್ದಿಲ್ಲ
ಇಲ್ಲಿ ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಇದೆ. ಆದರೆ ರಾಜ್ಯ ಚುನಾವಣೆ ಇತಿಹಾಸದಲ್ಲಿ ಕೆಆರ್ ಪೇಟೆಯಿಂದ ಬಿಜೆಪಿ ಅಭ್ಯರ್ಥಿ ಒಮ್ಮೆಯೂ ಜಯಗಳಿಸಿಲ್ಲ. 1994ರಲ್ಲಿ ಕೆಂಗೇಗೌಡ ಎರಡನೆಯ ಸ್ಥಾನ ಪಡೆದಿದ್ದೇ ಇಲ್ಲಿ ಬಿಜೆಪಿಯ ಇದುವರೆಗಿನ ದೊಡ್ಡ ಸಾಧನೆಯಾಗಿದೆ.