ಪುಟ್ಟಣ್ಣಯ್ಯ ಸಾವು : ಚುರುಕುಗೊಂಡ ರಹಸ್ಯ ತನಿಖೆ!
ಮಂಡ್ಯ, ಫೆಬ್ರವರಿ 20 : ಮೇಲುಕೋಟೆ ಕ್ಷೇತ್ರದ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ (1949-2018) ಅವರ ಸಾವಿನ ನಂತರ ಹಲವು ಗೊಂದಲದ ಮತ್ತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ರಹಸ್ಯ ತನಿಖೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿದುಬಂದಿದೆ.
ರೈತ ನಾಯಕ ಕೆ.ಎಸ್. ಪುಟ್ಟಣ್ಣಯ್ಯ (69) ಅವರು ಫೆಬ್ರವರಿ 18ರ ಭಾನುವಾರ ರಾತ್ರಿ ಸರ್ ಎಂ.ವಿ. ಕ್ರೀಡಾಂಗಣದಲ್ಲಿ ಪ್ರೊ ಕಬಡ್ಡಿ ವೀಕ್ಷಿಸುತ್ತಿದ್ದ ಸಂದರ್ಭ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟರು ಎಂಬ ಮಾಹಿತಿ ಒಂದೆಡೆಯಾದರೆ, ವಾಹನದಲ್ಲಿ ಚಲಿಸುತ್ತಿದ್ದಾಗ ಹೃದಯಾಘಾತ ಉಂಟಾಗಿದೆ ಎಂಬ ವದಂತಿಗಳು ಕೂಡ ಹರಡುತ್ತಿವೆ.
In Pics : ಅಗಲಿದ ರೈತ ನಾಯಕನಿಗೆ ಗಣ್ಯರ ಅಶ್ರುತರ್ಪಣ
ಇದೇ ರೀತಿ ಹಲವು ದ್ವಂದ್ವ ಮಾಹಿತಿಗಳು ವ್ಯಕ್ತವಾಗುತ್ತಿರುವುದರಿಂದ ಪುಟ್ಟಣ್ಣಯ್ಯ ಅವರ ಸಾವಿನ ತನಿಖೆಯನ್ನು ರಹಸ್ಯವಾಗಿ ಮತ್ತು ಚುರುಕಾಗಿ ನಡೆಸಲಾಗುತ್ತಿದ್ದು, ಅಂದಿನ ದಿನ ಅವರು ಬೆಳಗ್ಗಿನಿಂದ ಸಂಜೆಯವರೆಗೆ ಕೈಗೊಂಡ ಕಾರ್ಯಕ್ರಮಗಳು ಮತ್ತು ಅವರ ಜೊತೆ ಇದ್ದವರ ವಿವರ, ಅಂದಿನ ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನ ಊಟದ ವಿವರ ಸೇರಿದಂತೆ ದಿನಚರಿಯ ಕುರಿತು ಸಮಗ್ರ ಮಾಹಿತಿಯನ್ನು ಕಲೆಹಾಕುವ ಪ್ರಕ್ರಿಯೆಯನ್ನು ನಡೆಸಲಾಗುತ್ತಿದೆ.
ಪುಟ್ಟಣ್ಣಯ್ಯ ಅವರಿಗೆ ಎದೆನೋವು ಕಾಣಿಸಿಕೊಂಡ ನಂತರ ಮೊದಲಿಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಜಿಲ್ಲಾಸ್ಪತ್ರೆಗೆ ಕರೆದೊಯ್ದಾಗ, ಪುಟ್ಟಣ್ಣಯ್ಯ ಅವರು ಆಸ್ಪತ್ರೆಗೆ ತರುವ ಮೊದಲೇ ಮೃತಪಟ್ಟಿದ್ದರು ಎಂದು ಅಲ್ಲಿನ ವೈದ್ಯರು ಖಚಿತಪಡಿಸಿದ್ದರು.
ಅಲ್ಲದೆ, ಕುಟುಂಬದವರು ಜಿಲ್ಲಾಸ್ಪತ್ರೆಗೆ ಬರುವ ಮುನ್ನವೇ, ಪುಟ್ಟಣ್ಣಯ್ಯ ಅವರ ಜೊತೆಯಲ್ಲಿದ್ದವರು ಶವವನ್ನು ಸ್ವಗ್ರಾಮ ಕ್ಯಾತನಹಳ್ಳಿಗೆ ತೆಗೆದುಕೊಂಡು ಹೋದದ್ದೂ ಕೂಡ ಚರ್ಚೆಗೆ ಕಾರಣವಾಗಿದೆ. ಈ ನಡೆ ಹಲವಾರು ಅನುಮಾನಗಳಿಗೂ ಕಾರಣವಾಗಿದೆ. ಸತ್ಯಾಂಶವೇನೆಂದು ತನಿಖೆ ನಡೆದ ನಂತರ ತಿಳಿದುಬರಬೇಕಿದೆ.
ಇನ್ನೂ ನಡೆದಿಲ್ಲ ಕೆ.ಎಸ್.ಪುಟ್ಟಣ್ಣಯ್ಯ ಅಂತ್ಯ ಸಂಸ್ಕಾರ
ಪುಟ್ಟಣ್ಣಯ್ಯ ಅವರ ಪುತ್ರಿಯರಾದ ಸ್ಮಿತಾ ಮತ್ತು ಅಕ್ಷತಾ ಅವರು ಕೆನಡಾದಿಂದ ಮತ್ತು ಸಹೋದರಿ ರೇಣುಕಾ ಅವರು ಅಮೆರಿಕಾದಿಂದ ಬರುತ್ತಿದ್ದು, ಅವರು ಆಗಮಿಸಿದ ನಂತರ ಗುರುವಾರ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ.