ಐಪಿಎಸ್ ಅಧಿಕಾರಿಗಳ ವಿರುದ್ಧ ಪೊಲೀಸರಿಂದಲೇ ಬಹಿರಂಗ ಪತ್ರ!
ಮಂಡ್ಯ, ಮಾರ್ಚ್ 15: ಸರ್ಕಾರದ ವಿರುದ್ಧ ಐಪಿಎಸ್ ಅಧಿಕಾರಿ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಹಸಿರಾಗಿರುವಾಗಲೇ ಐಪಿಎಸ್ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿರುವ ರಾಜ್ಯ ಸಶಸ್ತ್ರ ಮೀಸಲು ಪಡೆಯ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವುದು ಬಹಿರಂಗಗೊಂಡಿದೆ.
ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಗಳ ಪೊಲೀಸ್ ಸಿಬ್ಬಂದಿ ಸಂಘದ ಹೆಸರಿನಲ್ಲಿ ಸುಧಾಕರ್ ಮತ್ತು ರಾಜು ಎಂಬ ಪೇದೆಗಳು ಐಪಿಎಸ್ ಅಧಿಕಾರಿಗಳ ಕಾರ್ಯವೈಖರಿ ಕುರಿತು ಸುಮಾರು 5 ಪುಟಗಳ ಪತ್ರವನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಕಳುಹಿಸಿದ್ದಾರೆ ಎನ್ನಲಾಗಿದೆ.
ಸರ್ಕಾರದ ವಿರುದ್ಧ ಪತ್ರ ಬರೆದ ಐಪಿಎಸ್ ಅಧಿಕಾರಿಗೆ ನೊಟೀಸ್
ಬ್ರಿಟೀಷರ ಕಾಲದ ಕಾನೂನಿನ ನಿರ್ಬಂಧದಿಂದಾಗಿ ನೋಂದಣಿಯಾಗಿಲ್ಲದ ಹಾಗೂ ಮಾನ್ಯತೆ ಪಡೆಯದ ಸಂಘ ನಮ್ಮದಾಗಿದೆ. ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರು ಚುನಾಯಿತ ಪ್ರತಿನಿಧಿಗಳ ಬಗ್ಗೆ ಸಾರ್ವಜನಿಕವಾಗಿ ಅಗೌರವ ಮೂಡಿಸಲು ಮುಂದಾಗಿದ್ದಾರೆ. ಆದರೆ, ರಾಜ್ಯದ ಐಪಿಎಸ್ ಅಧಿಕಾರಿಗಳ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಕರ್ತವ್ಯದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ ಕಾಣುತ್ತಿಲ್ಲ. ಅಧಿಕಾರ ದುರುಪಯೋಗದ ಆರೋಪಗಳು ಹೆಚ್ಚೆಚ್ಚು ಕೇಳಿಬರುತ್ತಿರುವ ಶೋಚನೀಯ ಸಂಗತಿ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿಗಳ ಅಧಿಕಾರ, ದುರುಪಯೋಗ, ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಚಾರಗಳನ್ನು ಸಾಕ್ಷಿ ಸಮೇತ ಲೋಪದೋಷಗಳ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿರುವುದು ಕಂಡು ಬಂದಿದೆ.
ಐಪಿಎಸ್ ಅಧಿಕಾರಿಗಳ ಪತ್ರ: ಸಿಎಂ ಹೇಳಿದ್ದು ಹೀಗೆ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು 2-3 ಸರ್ಕಾರಿ ಕಾರು, ಜೀಪನ್ನು ಸ್ವಂತ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮನೆಯ ಊಟದ ಬಿಲ್, ಕರೆಂಟ್ ಬಿಲ್, ನ್ಯೂಸ್ ಪೇಪರ್ ಬಿಲ್, ಮನೆಯ ದವಸ-ಧಾನ್ಯಕ್ಕೆಲ್ಲ ಸರ್ಕಾರಿ ಕಚೇರಿ ಸ್ಟೋರ್ ಹಣ ಬಳಕೆ ಮಾಡುತ್ತಿದೆ. ಕಚೇರಿ ಸ್ಟೇಷನರಿ ಇತ್ಯಾದಿ ಖರೀದಿಗಳಲ್ಲಿ ಲೋಪಮಾಡಿ, ಆ ಹಣದಿಂದ ಎಸ್ಪಿ ಮನೆಗೆ ದಿನಸಿ ಸರಬರಾಜಾಗುತ್ತದೆ. ಪೊಲೀಸ್ ಕ್ವಾಟ್ರಸ್ ದುರಸ್ತಿಯಲ್ಲಿ ಕಮಿಷನ್ ಪಡೆದಿದ್ದಾರೆ. ಪೆಟ್ರೋಲ್, ಡೀಸೆಲ್, ದುರಸ್ತಿ ಹೆಸರಲ್ಲಿ ಕಮಿಷನ್ ಪಡೆಯುವುದು ವಾಡಿಕೆಯಾಗಿದೆ. ಎಸ್ಪಿ ವಸತಿ ಗೃಹಕ್ಕೆ ಪ್ರತಿವರ್ಷ ರಿಪೇರಿ ಬಣ್ಣ, ಸುಣ್ಣ ಬಳಿಯುವುದು. ಉದ್ಯಾನ ಕಾಂಪೌಂಡ್ ನಿರ್ಮಾಣ ಇತ್ಯಾದಿ ಬದಲಾವಣೆಗಾಗಿ ವರ್ಷಕ್ಕೆ ಕೋಟ್ಯಂತರ ಹೊರೆ ಹಾಗೂ ಎಸ್.ಎಸ್.ಫಂಡ್ ದುರ್ಬಳಕೆ ಆಗುತ್ತಿದೆ.
ಪೊಲೀಸ್ ಮ್ಯಾನ್ಯೂಯಲ್ ಪ್ರಕಾರ ಆರ್ಡರ್ಲಿ ಸೇವೆಗೆ ಎಸ್ಪಿಗೆ 3 ಮಂದಿ ಇರಬೇಕು. ಅದರಲ್ಲಿ ಒಬ್ಬ ಕಾರು ಚಾಲಕ, ಒಬ್ಬ ಕಚೇರಿ ಸಹಾಯಕ, ಮತ್ತೊಬ್ಬ ಸಹಾಯಕ. ಇತ್ತೀಚೆಗೆ ಸರ್ಕಾರ ಆರ್ಡರ್ಲಿ ಪದ್ಧತಿ ರದ್ಧುಗೊಳಿಸಿ ಆರ್ಡರ್ಲಿ ಭತ್ಯೆ ಜಾರಿಗೊಳಿಸಿದೆ. ಆದರೆ, ಸರ್ಕಾರದ ಈ ಆದೇಶವನ್ನು ಇದುವರೆಗೂ ಜಾರಿಯಾಗಿಲ್ಲ. 20ಕ್ಕೂ ಹೆಚ್ಚು ಸಿಬ್ಬಂದಿ ಆರ್ಡರ್ಲಿಯಾಗಿ ಕೆಲಸ ಮಾಡುತ್ತಿದ್ದು, ಅದಕ್ಕೆ ಸರ್ಕಾರದ ಕಡೆಯಿಂದ 5 ಲಕ್ಷ ವೇತನದ ಜತೆಗೆ ವಾರ ಭತ್ಯೆ, ಟಿಎ ಕೊಡಲಾಗುತ್ತಿದೆ ಎಂದು ದೂರಿದ್ದಾರೆ.