ಮಂಡ್ಯದಲ್ಲಿ ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಎಸ್ಪಿ ಶಿವಪ್ರಕಾಶ್
ಮಂಡ್ಯ, ಫೆಬ್ರವರಿ 10: ಮಂಡ್ಯ ಜಿಲ್ಲೆಯಲ್ಲಿ ರೌಡಿಸಂ ಹೆಚ್ಚುತ್ತಲೇ ಇದೆ. ಈಗಾಗಲೇ ರೌಡಿ ಅಶೋಕ್ ಪೈಯನ್ನು ಆರು ತಿಂಗಳ ಕಾಲ ಗಡಿಪಾರು ಮಾಡಲಾಗಿದ್ದು, ಈ ಬೆನ್ನಲ್ಲೇ ರೌಡಿಗಳಿಗೆ ಪೆರೇಡ್ ನಡೆಸಿರುವ ಎಸ್ಪಿ ಶಿವಪ್ರಕಾಶ್ ಖಡಕ್ ಎಚ್ಚರಿಕೆ ನೀಡುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಸೂಚಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ರೌಡಿಶೀಟರ್ ಗಳ ಪರೇಡ್ ನಡೆಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಸಿನಿಮಾ ನೋಡಿ ಪ್ರೇರಣೆಗೊಂಡು ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗುವುದು. ನಮ್ಮಲ್ಲಿ ಹಣ ಇದೆ ಅಥವಾ ಯಾರಿಂದಲೋ ಹೇಳಿಸಿ ಏನಾದರೂ ಮಾಡುತ್ತೇವೆ. ನಮ್ಮನ್ನು ತಡೆಯೋರು ಯಾರೂ ಇಲ್ಲ. ಎಷ್ಟೇ ಪ್ರಕರಣಗಳಾದರೂ ಆರಾಮಾಗಿ ಇರುತ್ತೇವೆಂಬ ಮನೋಭಾವನೆ ಇದ್ದರೆ, ಕೂಡಲೇ ಬದಲಿಸಿಕೊಳ್ಳಿ ಎಂದ ಎಸ್ಪಿ ತಪ್ಪು ಮಾಡುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಎಚ್ಚರಿಕೆ ನೀಡಿದರು.
ರವಿ ಡಿ. ಚನ್ನಣ್ಣನವರ್ ರವರ ಜೀವನದಲ್ಲಿ ನಡೆದ ರೋಚಕ ಘಟನೆ
ಈಗ ಮಾಡಿರುವ ತಮ್ಮ ತಪ್ಪನ್ನು ತಿದ್ದಿಕೊಂಡು ಸರಿಯಾದ ಮಾರ್ಗದಲ್ಲಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೀವು ಸುಧಾರಣೆ ಆಗುವುದು ಕಷ್ಟ. ಬದಲಾಗುತ್ತೇನೆ ಎನ್ನುವವರಿಗೆ ಅವಕಾಶ ಕೊಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಲರಾಮೇಗೌಡ ಅವರು ಕೌಟುಂಬಿಕ ಕಲಹ ಸೇರಿದಂತೆ ಕೆಲ ಪ್ರಕರಣದಿಂದಾಗಿ ರೌಡಿಶೀಟರ್ ಪಟ್ಟಿಯಲ್ಲಿರುವವರೂ ಬದಲಾಗಬೇಕು. ಕನಿಷ್ಠ 10 ರಿಂದ 15 ವರ್ಷ ಯಾವುದೇ ಗಲಾಟೆ, ಪ್ರಕರಣದಲ್ಲಿ ಭಾಗಿಯಾಗಬಾರದು. ತಪ್ಪನ್ನು ತಿದ್ದುಕೊಂಡಿರುವವರು ರೌಡಿಶೀಟರ್ ಪಟ್ಟಿಯಿಂದ ತೆಗೆಯುವಂತೆ ಸ್ಥಳೀಯ ಪೊಲೀಸ್ ಠಾಣೆ ಎಸ್ಐಗೆ ಅರ್ಜಿ ಸಲ್ಲಿಸಬೇಕು. ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಎಸ್ ಪಿ ಅಣ್ಣಾಮಲೈ ಸಿಂಗಂ ಬೆಂಗಳೂರಿಗೆ ವರ್ಗಾವಣೆ
ಮಂಡ್ಯ ನಗರ, ಕೆಆರ್ಎಸ್, ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ನಡೆಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಪ್ರತಿ ವಾರ ರೌಡಿ ಪರೇಡ್ ಮಾಡಲಾಗುವುದು. ಆದ್ದರಿಂದ, ರೌಡಿಶೀಟರ್ ಪಟ್ಟಿಯಲ್ಲಿರುವವರು ಠಾಣೆಗೆ ಹಾಜರಾಗಬೇಕೆಂದು ಸೂಚನೆ ನೀಡಿದರು.
ಮಂಡ್ಯದಲ್ಲಿ ರೌಡಿಸಂ ಹೆಚ್ಚುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಜತೆಗೆ ಲೋಕಸಭಾ ಚುನಾವಣೆ ಬರುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ರೌಡಿಗಳತ್ತ ಕಣ್ಣಿಟ್ಟಿದ್ದಾರೆ.