ವ್ಯರ್ಥ ನೀರಿನಿಂದ ಮನೆಬೆಳಗಿದ ರೋಬೋ ಮಂಜೇಗೌಡ್ರು
ಮಂಡ್ಯ, ಡಿಸೆಂಬರ್ 24: ಈಗಾಗಲೇ ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚುವ ಅನ್ವೇಷಕ, ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಸಂರಕ್ಷಿಸುವ ರೋಬೋಟ್, ರೈಲ್ವೆ ಲೆವೆಲ್ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ವಾಹನಗಳ ಅಪಘಾತ ತಪ್ಪಿಸುವ ಆಟೋಮೆಟಿಕ್ ಗೇಟ್ ಸಿಸ್ಟಂ ಹೀಗೆ ಹಲವು ರೀತಿಯ ವೈಜ್ಞಾನಿಕ ಉಪಕರಣಗಳನ್ನು ರೋಬೋ ಮಂಜೇಗೌಡ ಅನ್ವೇಷಣೆ ಮಾಡಿದ್ದಾರೆ.
ಅವರು ಇದೀಗ ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಹಳ್ಳದ ನೀರಿನಿಂದ ವಿದ್ಯುತ್ ತಯಾರಿಸಿ ಅದನ್ನು ಗ್ರಾಮದ ಶಾಲೆ, ದೇವಾಲಯ ಹಾಗೂ ಬಡ ಜನರ ಮನೆಗಳಿಗೆ ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
ನಿರ್ವಹಣೆಯ ಕೊರತೆ; ಸೋರುತ್ತಿದೆ ವರುಣಾ ನಾಲೆ
ಕೆ.ಆರ್.ಪೇಟೆ ತಾಲ್ಲೂಕಿನ ಹಿರಿಕಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಮನಹಳ್ಳಿ ಗ್ರಾಮದ ರೈತ ಹಾಗೂ ವಿಜ್ಞಾನಿಯೂ ಆಗಿರುವ ರೋಬೋ ಮಂಜೇಗೌಡ ಅವರು, ತಮ್ಮಲ್ಲಿನ ವೈಜ್ಞಾನಿಕ ಮನೋಭಾವನೆಯ ವೃತಿ ಕೌಶಲ್ಯವನ್ನು ಸದ್ಬಳಕೆ ಮಾಡಿಕೊಂಡು ವ್ಯರ್ಥವಾಗಿ ಹರಿದು ಹಳ್ಳವನ್ನು ಸೇರುತ್ತಿದ್ದ ನೀರಿನಿಂದ ವಿದ್ಯುತ್ತನ್ನು ಉತ್ಪಾದಿಸಿ ತನ್ನ ಹುಟ್ಟೂರಿನ ಮನೆಗಳು, ದೇವಸ್ಥಾನ ಹಾಗೂ ಶಾಲೆಗೆ ಸಂಪರ್ಕ ಕಲ್ಪಿಸುವ ಮೂಲಕ ಇಡೀ ಗ್ರಾಮಕ್ಕೆ ಬೆಳಕು ನೀಡುವ ಸೇವಾ ಕೈಂಕರ್ಯವನ್ನು ಮಾಡಲು ಹೊರಟಿರುವುದಕ್ಕೆ ಗ್ರಾಮಸ್ಥರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ವ್ಯಾಸಂಗ ಮಾಡದಿದ್ದರೂ ರೋಬೋ ಮಂಜೇಗೌಡರು ತನ್ನಲ್ಲಿನ ಜ್ಞಾನದ ಶಕ್ತಿಯಿಂದ ಗುಜರಿಯಲ್ಲಿ ದೊರೆಯುವ ಅನುಪಯುಕ್ತ ವಸ್ತುಗಳನ್ನೇ ಬಳಸಿಕೊಂಡು ಈಗಾಗಲೇ ಗಡಿ ಸಂರಕ್ಷಣೆ ಮಾಡುವ ರೋಬೋಟ್, ನೀರಿನಲ್ಲಿ ಮುಳುಗಿರುವ ವಸ್ತುಗಳನ್ನು ಪತ್ತೆ ಹಚ್ಚುವ ಅನ್ವೇಷಕ, ಕೊಳವೆ ಬಾವಿಯಲ್ಲಿ ಬಿದ್ದ ಮಗುವನ್ನು ಸಂರಕ್ಷಣೆ ಮಾಡುವ ರೋಬೋ, ರೈಲ್ವೆ ಲೆವೆಲ್ ಕ್ರಾಸಿಂಗ್ ಮಾಡುವ ಸಂದರ್ಭದಲ್ಲಿ ವಾಹನಗಳ ಅಪಘಾತ ತಪ್ಪಿಸುವ ಆಟೋಮೆಟಿಕ್ ಗೇಟ್ ಸಿಸ್ಟಂ ಸೇರಿದಂತೆ ರೈತರ ಕೃಷಿ ಪದ್ಧತಿಗೆ ಸಹಾಯವಾಗುವ ಹಲವಾರು ಕೃಷಿ ಉಪಕರಣಗಳನ್ನು ಸಂಶೋಧನೆ ಮಾಡಿ ತಯಾರಿಸಿದ್ದಾರೆ.
ಇದೀಗ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ತಮ್ಮ ಜಮೀನಿನ ಕೃಷಿಗೆ ಬಳಸಿಕೊಂಡು ಬಳಿಕವೂ ಹರಿದು ಹೋಗುತ್ತಿದ್ದ ನೀರಿನಿಂದ ಸುಮಾರು ಮೂರು ಕಿಲೋ ವ್ಯಾಟ್ ವಿದ್ಯುತ್ ತಯಾರು ಮಾಡಿರುವುದು ಗಮನಾರ್ಹವಾಗಿದೆ.
ಹೀಗೆ ಉತ್ಪಾದಿಸಿರುವ ವಿದ್ಯುತ್ ನ್ನು ಗ್ರಾಮದ ಶಾಲೆ, ದೇವಸ್ಥಾನ ಮತ್ತು ಮನೆಗಳಿಗೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಇವರ ಈ ಕಾರ್ಯ ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸಂಬಂಧ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಸ್ವಿಚ್ ಆನ್ ಮಾಡುವ ಮೂಲಕ ವಿದ್ಯುತ್ ವಿತರಣಾ ಜಾಲಕ್ಕೆ ಚಾಲನೆ ನೀಡಿದ್ದಾರೆ.
ಒಟ್ಟಾರೆ ಸದಾ ಒಂದಲ್ಲ ಒಂದು ಅನ್ವೇಷಣೆ ಮಾಡುತ್ತಲೇ ಇರುವ ಮಂಜೇಗೌಡ್ರು ಈ ಹಿಂದೆ ಕೋರೋನಾ ಸಮಯದಲ್ಲಿ ರೋಬೋಟ್ ಮೂಲಕ ಸ್ಯಾನಿಟೈಸ್ ಮಾಡೋದನ್ನು ಕಂಡು ಹಿಡಿದು ಗ್ರಾಮಗಳಲ್ಲಿ ಸ್ಯಾನಿಟೈಸ್ ಮಾಡುವ ಮೂಲಕ ಗಮನ ಸೆಳೆದಿದ್ದರು.