ರಾಜೀನಾಮೆ ಹಿಂದೆ ಇದ್ದದ್ದು ಯಾರು?; ಅನರ್ಹ ಶಾಸಕನ ಸ್ಫೋಟಕ ಹೇಳಿಕೆ
Recommended Video
ಮಂಡ್ಯ, ನವೆಂಬರ್ 5: ಸಮ್ಮಿಶ್ರ ಸರ್ಕಾರ ಉರುಳಲು ಕಾರಣವಾದ ರಾಜೀನಾಮೆ ಮತ್ತು ಅನರ್ಹ ಪ್ರಕರಣದಲ್ಲಿ ಶಾಸಕರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಶಾಸಕರ ರಾಜೀನಾಮೆ ಹಿಂದೆ ಬಿಜೆಪಿಯ ಆಪರೇಷನ್ ಕಮಲದ ಕೈವಾಡವಿದೆ ಎಂಬ ಆರೋಪ ದಟ್ಟವಾಗಿದೆ. ಅದಕ್ಕೆ ಪೂರಕವೆಂಬಂತೆ ಕೆಆರ್ ಪೇಟೆಯ ಜೆಡಿಎಸ್ನಿಂದ ಅನರ್ಹಗೊಂಡ ಶಾಸಕ ಕೆ.ಸಿ. ನಾರಾಯಣ ಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಲಹೆ ಮತ್ತು ಭರವಸೆಯಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ನಾರಾಯಣಗೌಡ ಹೇಳಿದ್ದಾರೆ.
ಕೆಆರ್ ಪೇಟೆ ತಾಲ್ಲೂಕಿನ ಬೂಕನಕೆರೆಯಲ್ಲಿ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಜನ್ಮದಿನಾಚರಣೆಯಲ್ಲಿ ಮಂಗಳವಾರ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ ಈ ಹೇಳಿಕೆ ನೀಡಿದರು.
ಜೆಡಿಎಸ್ನ ಇನ್ನೂ 20 ಶಾಸಕರು ರಾಜೀನಾಮೆ: ಅನರ್ಹ ಶಾಸಕ ಬಾಂಬ್
'ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಮುನ್ನ ಬಿಎಸ್ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ್ದೆ. ಒಂದು ಸಂಜೆ ಕೆಲವರು ನನ್ನನ್ನು ಯಡಿಯೂರಪ್ಪ ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಆಗ ಬಿಎಸ್ ಯಡಿಯೂರಪ್ಪ ನಾನು ಮುಖ್ಯಮಂತ್ರಿಯಾಗುವ ಅವಕಾಶವಿದೆ. ಬೆಂಬಲ ಕೊಡ್ತೀಯಾ ಎಂದು ಕೇಳಿದ್ದರು. ನೀನು ಕೈಜೋಡಿಸಿದರೆ ತಾಲ್ಲೂಕಿನ ಅಭಿವೃದ್ಧಿ ಮಾಡೋಣ ಎಂದು ಹೇಳಿದ್ದರು. ಅವರ ಮಾತಿನಂತೆಯೇ ನಾನು ರಾಜೀನಾಮೆ ನೀಡಿದೆ' ಎಂದು ತಿಳಿಸಿದರು.
ತಂದೆ ಕನಸಿನಲ್ಲಿ ಬಂದು ಕಾಡುತ್ತಾರೆ
'ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನನ್ನ ಕ್ಷೇತ್ರಕ್ಕೆ ಹಣ ಬಿಡುಗಡೆಯಾದರೆ ಅದನ್ನು ಹಾಸನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು. ಇದರಿಂದ ನನಗೂ ಬಹಳ ಬೇಸರವಾಗಿತ್ತು. ನನ್ನ ತಂದೆ ಬೂಕನಕೆರೆಯಲ್ಲಿ ವೀರಭದ್ರಸ್ವಾಮಿಯ ಪೂಜೆ ಮಾಡಿಕೊಂಡು ನನ್ನನ್ನು ಬೆಳೆಸಿದ್ದಾರೆ. ಆದರೆ ಕೆಆರ್ ಪೇಟೆ ಅಭಿವೃದ್ಧಿಯಾಗಿಲ್ಲ ಎಂದು ಅವರು ನನ್ನ ಕನಸಿನಲ್ಲಿ ಬಂದು ಕಾಡುತ್ತಿದ್ದಾರೆ. ನೀನು ನನ್ನ ಜತೆ ಬಂದರೆ ಅಭಿವೃದ್ಧಿ ಮಾಡಬಹುದು ಎಂದು ಯಡಿಯೂರಪ್ಪ ಹೇಳಿದ್ದರು' ಎಂದರು.
ಅಭಿವೃದ್ಧಿಗಾಗಿ ಶಾಸಕ ಸ್ಥಾನ ತ್ಯಾಗ
'ತಾಲ್ಲೂಕಿನ ಅಭಿವೃದ್ಧಿಗೆ 700 ಕೋಟಿ ರೂ. ನೀಡುವಂತೆ ಕೇಳಿದ್ದೆ. ಆದರೆ ಯಡಿಯೂರಪ್ಪನವರೇ ಒಂದು ಸಾವಿರ ಕೋಟಿ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಕೇಳಿದ್ದಕ್ಕಿಂತ ಮುನ್ನೂರು ಕೋಟಿ ಹೆಚ್ಚು ನೀಡಿದ್ದಾರೆ. ನೀಡಿದ ಭರವಸೆಯಂತೆಯೇ ತಾಲ್ಲೂಕಿನ ಅಭಿವೃದ್ಧಿಗೆ ಸಾವಿರ ಕೋಟಿ ರೂ ಅನುದಾನ ಮಂಜೂರು ಮಾಡಿದ್ದಾರೆ. ಮೊದಲ ಕಂತಿನ ಅನುದಾನವಾಗಿ 212 ಕೋಟಿ ರೂ ಬಂದಿದೆ. ಉಳಿದ ಅನುದಾನ ಹಂತಹಂತವಾಗಿ ಬಿಡುಗಡೆಯಾಗುತ್ತದೆ. ತಾಲ್ಲೂಕಿನ ಅಭಿವೃದ್ಧಿಗಾಗಿ ನಾನು ತ್ಯಾಗ ಮಾಡಿ ಯಡಿಯೂರಪ್ಪ ಅವರೊಂದಿಗೆ ಕೈಜೋಡಿಸಿದ್ದೇನೆ' ಎಂದು ಹೇಳಿದರು.
ದೇವೇಗೌಡರ ಮನೆ ಹೆಣ್ಣುಮಕ್ಕಳ ಕಾರಣದಿಂದ ರಾಜೀನಾಮೆ ನೀಡಿದೆ: ಜೆಡಿಎಸ್ ಶಾಸಕ
ಚಪ್ಪಲಿ ಬಿಡುವ ಜಾಗಕ್ಕಿಂತ ಕಡೆ
ಸ್ಥಳೀಯ ಜೆಡಿಎಸ್ ಮುಖಂಡರು ನನಗೆ ಆರೂವರೆ ವರ್ಷದಿಂದ ಸತತ ಕಿರುಕುಳ ನೀಡಿದ್ದಾರೆ. ಪಕ್ಷದ ನಾಯಕರ ಬಗ್ಗೆ ನನ್ನ ಬಗ್ಗೆ ಚಾಡಿ ಹೇಳುವುದೇ ಅವರ ಕೆಲಸವಾಗಿತ್ತು. ನಾನು ದೇವೇಗೌಡರ ಮನೆಗೆ ಹೋದಾಗ ಚಪ್ಪಲಿ ಬಿಡುವ ಜಾಗಕ್ಕಿಂತ ಕಡೆಯಾಗಿ ನೋಡಿದ್ದಾರೆ. ನಾನು ಎಂಜಲು ಲೋಟ ತೊಳೆಯೋನು ಎಂದು ರೇವಣ್ಣ ಸಾಹೇಬರು ಹೇಳುತ್ತಾರೆ. ನನಗೆ ಅದೇ ಆಶೀರ್ವಾದ ಮಾಡಿರುವುದು. ಎಂಜಲು ತೊಳೆಯುವುದಕ್ಕಿಂತ ಪುಣ್ಯದ ಕೆಲಸ ಇನ್ನೊಂದಿಲ್ಲ. ಎಂಜಲು ಎತ್ತೋಕೆ ಸುಲಭವಾಗಿ ಆಗುವುದಿಲ್ಲ. ನನಗೆ ಇದೇ ಶಕ್ತಿ ಕೊಡಲಿ. ಲಕ್ಷಾಂತರ ಜನರಿಗೆ ಅನ್ನದಾನ ಮಾಡಿ ಎಂಜಲು ಎತ್ತುತ್ತೇನೆ ಎಂದರು.
ಕೆಆರ್ ಪೇಟೆ: ಗೌಡ್ರ ಕುಟುಂಬದ ಸ್ಪರ್ಧೆ 'ವಿರುದ್ದ' ಆಗಲೇ ಮಾಸ್ಟರ್ ಪ್ಲ್ಯಾನ್
ಅರ್ಧ ಆಸ್ತಿ ಮೀಸಲಿಡುತ್ತೇನೆ
ಕೆಆರ್ ಪೇಟೆ ತಾಲ್ಲೂಕಿನ ಅಭಿವೃದ್ಧಿಗೆ ನನ್ನ ಸ್ವಯಾರ್ಜಿತ ಆಸ್ತಿಯಲ್ಲಿ ಶೇ 50ರಷ್ಟನ್ನು ಮೀಸಲಿಡುತ್ತೇನೆ. ಇಲ್ಲಿನ ಮುಖಂಡರು ತಮ್ಮ ಆಸ್ತಿಯನ್ನು ಮೀಸಲಿಡಲಿ. ಅವರು ಯಾವ ವೇದಿಕೆಯಲ್ಲಾದರೂ ಬರಲಿ. ನಾನು ಸಿದ್ಧ. ಅವರು ಬಾಂಡ್ ಪೇಪರ್ ತರಲಿ, ನಾನು ತರುತ್ತೇನೆ. ತಾಲ್ಲೂಕಿನ ಅಭಿವೃದ್ಧಿಗಾಗಿ ಬರೆದುಕೊಡಲಿ ನೋಡೋಣ ಎಂದು ಸವಾಕು ಹಾಕಿದರು.
ಉಲ್ಟಾ ಹೊಡೆದ ನಾರಾಯಣಗೌಡ
ಯಡಿಯೂರಪ್ಪ ಸಲಹೆಯಂತೆ ರಾಜೀನಾಮೆ ನೀಡಿದೆ ಎಂಬ ಹೇಳಿಕೆ ವಿವಾದ ಉಂಟುಮಾಡಲಿದೆ ಎಂಬುದು ಅರಿವಾಗುತ್ತಿದ್ದಂತೆಯೇ ನಾರಾಯಣಗೌಡ ತಮ್ಮ ಹೇಳಿಕೆಯನ್ನು ಬದಲಿಸಿದರು. ಯಡಿಯೂರಪ್ಪ ಮತ್ತು ತಮ್ಮ ನಡುವೆ ನಡೆದ ಅನುದಾನದ ಕುರಿತಾದ ಮಾತುಕತೆ ತಮ್ಮ ರಾಜೀನಾಮೆ ಬಳಿಕ ನಡೆದಿರುವುದೇ ಹೊರತು ಮೊದಲು ಅಲ್ಲ ಎಂದು ಸ್ಪಷ್ಟನೆ ನೀಡಿದರು.