ಹುಟ್ಟೂರಿನ ಆಸ್ತಿಯನ್ನು ಪುತ್ರನ ಹೆಸರಿಗೆ ಬರೆದ ಅಂಬರೀಶ್
ಮಂಡ್ಯ, ಜು.27: ನಟ, ಮಾಜಿ ಸಚಿವ ಅಂಬರೀಶ್ ಅವರು ತನ್ನ ಹೆಸರಿನಲ್ಲಿದ್ದ ಏಳೂವರೆ ಎಕರೆ ಜಮೀನನ್ನು ಪುತ್ರನ ಹೆಸರಿಗೆ ವಿಲ್ ಮಾಡುವ ಮೂಲಕ ಪುತ್ರನಿಗೆ ಆಸ್ತಿಯ ಜವಾಬ್ದಾರಿಯನ್ನು ವಹಿಸಿದ್ದಾರೆ.
ನಟನಾಗಿ, ರಾಜಕಾರಣಿಯಾಗಿ ಅಂಬರೀಶ್ ಅವರು ಒಂದಷ್ಟು ಆಸ್ತಿಯನ್ನು ಮಾಡಿಟ್ಟಿದ್ದಾರೆ. ಬೆಂಗಳೂರಲ್ಲ್ಲಿ ಮನೆಯಿದ್ದರೂ ತನ್ನ ಹುಟ್ಟೂರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡ ಅರಸಿನಕೆರೆಯಲ್ಲಿ ಏಳೂವರೆ ಎಕರೆ ಜಮೀನು ಇವರ ಹೆಸರಿನಲ್ಲಿತ್ತು. ಅದನ್ನು ಇದೀಗ ಪುತ್ರ ಅಭಿಷೇಕ್ ಗೌಡರ ಹೆಸರಿಗೆ ಮಾಡುವ ಮೂಲಕ ನಿರಾಳರಾಗಿದ್ದಾರೆ.
ಬಿಬಿಎಂಪಿಗೆ ಆಸ್ತಿ ತೆರಿಗೆಯಲ್ಲಿ ಮೋಸ ಮಾಡಿದ್ದು ಯಾರು ನೋಡಿ
ವಿಲ್ಗೆ ಸಂಬಂಧಿಸಿದಂತೆ ಅಂಬರೀಶ್ ಹಾಗೂ ಪುತ್ರ ಅಭಿಷೇಕ್ ಗೌಡ ಅವರು ಮದ್ದೂರು ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಪ್ರಕ್ರಿಯೆಗಳನ್ನು ಮುಗಿಸಿ ಸಂಜೆ ಬೆಂಗಳೂರಿಗೆ ಹಿಂತಿರುಗಿದರು. ವಿಷಯ ತಿಳಿದ ಒಂದಷ್ಟು ಅಭಿಮಾನಿಗಳು ಆಗಮಿಸಿ ಒಂದಷ್ಟು ಸೆಲ್ಫಿ ತೆಗೆದುಕೊಂಡಿದ್ದು ನಡೆಯಿತು.
ಕೆಲವರು ದೂರದಿಂದಲೇ ಕುತೂಹಲದಿಂದ ನೋಡುತ್ತಾ ನಿಂತರೆ ಇನ್ನು ಕೆಲವರು ಹತ್ತಿರ ತೆರಳಿ ಮಾತನಾಡಿಸಿ ಅಂಬರೀಶ್ ಹಾಗೂ ಅಭಿಷೇಕ್ ಗೌಡ ಅವರ ಜತೆಗೆ ಕೂತು, ನಿಂತು ಫೋಟೋ ತೆಗೆಸಿಕೊಂಡು ಬೀಗಿದರು.
ಈಗಾಗಲೇ ಸಿನಿಮಾದಲ್ಲಿ ಬಿಜಿಯಾಗಿರುವ ಅಭಿಷೇಕ್ ಗೌಡ ಅವರಿಗೆ ಆಸ್ತಿ ಸೇರಿದಂತೆ ಇನ್ನಿತರ ಜವಾಬ್ದಾರಿಗಳನ್ನು ವಹಿಸುವ ಮೂಲಕ ಅಂಬರೀಶ್ ಅವರು ಜಂಜಾಟಗಳಿಂದ ಮುಕ್ತವಾಗುವ ನಿರ್ಧಾರಕ್ಕೆ ಬಂದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.