ಕೆ.ಆರ್. ಪೇಟೆಯಲ್ಲಿ ಬಿಜೆಪಿ ಗೆಲುವಿಗೆ ನಿಜವಾಗಿಯೂ ಕಾರಣವಾಗಿದ್ದೇನು?
ಮಂಡ್ಯ, ಡಿಸೆಂಬರ್ 11: ಉಪ ಚುನಾವಣೆಯಲ್ಲಿ ಜೆಡಿಎಸ್ ಭದ್ರಕೋಟೆಯನ್ನು ಬೇಧಿಸಿ ಕಮಲ ಅರಳುವಂತೆ ಮಾಡುವಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರ ವರ್ಚಸ್ಸಿನ ಜತೆಗೆ ಪಕ್ಷದ ನಾಯಕರ ಬೆಂಬಲ, ಕಾರ್ಯಕರ್ತರ ಶ್ರಮ ಮಾತ್ರವಲ್ಲದೆ, ಹಿಂದುಳಿದ ವರ್ಗಗಳ ಮತದಾರರು ಕೈಹಿಡಿದಿದ್ದಾರೆ ಎನ್ನುವುದನ್ನು ತಳ್ಳಿಹಾಕುವಂತಿಲ್ಲ.
ಸಾಮಾನ್ಯವಾಗಿ ಪ್ರಬಲ ಸಮುದಾಯಗಳನ್ನೇ ಗುರಿಯಾಗಿಸಿಕೊಂಡು ರಾಜಕೀಯ ನಾಯಕರು ಲೆಕ್ಕಾಚಾರ ಹಾಕುತ್ತಾರೆ. ಆದರೆ ಕೆ.ಆರ್.ಪೇಟೆಯಲ್ಲಿ ಈ ಬಾರಿ ನಡೆದಿದ್ದೇ ಬೇರೆ.
ಸಣ್ಣ ಸಮುದಾಯಗಳ ಮನವೊಲಿಕೆ
ಮುಖ್ಯಮಂತ್ರಿ ಬಿ.ಎಸ್.ಡಿ.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರವರ ನಾಯಕತ್ವದಲ್ಲಿ ರಾಜ್ಯ ಬಿಜೆಪಿ ಸಹ ವಕ್ತಾರ ಹಿಂದುಳಿದ ವರ್ಗಗಳ ಮುಖಂಡರಾದ ರಘು ಕೌಟಿಲ್ಯ ಅವರು ತಾಲೂಕಿನಾದ್ಯಂತ ಇರುವ ಸಣ್ಣ ಸಣ್ಣ ಸಮುದಾಯಗಳಾದ ಮಡಿವಾಳ, ವಿಶ್ವಕರ್ಮ, ಗಾಣಿಗ, ಕುಂಬಾರ, ನಯನಕ್ಷತ್ರಿಯ, ನೇಕಾರ, ಉಪ್ಪಾರ, ಈಡಿಗ ಮತ್ತಿತರರ ಸಮುದಾಯಗಳ ಮುಖಂಡರನ್ನು ಭೇಟಿ ಮಾಡಿ ಪ್ರತ್ಯೇಕ ಸಭೆ ನಡೆಸಿ ಅವರನ್ನು ತಮ್ಮತ್ತ ಒಲಿಸುವ ಪ್ರಯತ್ನ ಮಾಡಿದರು. ಜತೆಗೆ ಬಿಜೆಪಿಯನ್ನು ಬೆಂಬಲಿಸಿ ನಿಮ್ಮ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವ ಭರವಸೆ ನೀಡಿದರು. ನಮ್ಮ ಯೋಜನೆಗಳನ್ನು ವಿವರಿಸಿ ಅದರಿಂದ ಕಾಯಕ ಸಮುದಾಯಗಳಿಗೆ ಆಗುವ ಅನುಕೂಲತೆಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಅವರನ್ನು ಬಿಜೆಪಿಯತ್ತ ಒಲಿಯುವಂತೆ ಮಾಡಿದರು.
ಕೆಆರ್ ಪೇಟೆ: ಜೆಡಿಎಸ್ ಭದ್ರಕೋಟೆಯಲ್ಲಿ ಬಿಜೆಪಿ ಪತಾಕೆ!
ಹಂಚಿಹೋಗಿದ್ದ ಸಣ್ಣ ಸಮುದಾಯಗಳು
ಇದರ ಪರಿಣಾಮವಾಗಿ ಒಕ್ಕಲಿಗರ ಪ್ರಾಬಲ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿಯು ಸುಲಭವಾಗಿ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಇದುವರೆಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಕಾಯಕ ಸಮುದಾಯಗಳನ್ನು ಕಡಿಮೆ ಮತಗಳಿವೆ ಎಂಬ ಕಾರಣಕ್ಕೆ ಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಹೀಗಾಗಿಯೇ ಆ ಸಮುದಾಯಗಳು ತಮಗಿಷ್ಟ ಬಂದವರಿಗೆ ಮತ ನೀಡುತ್ತಾ ಹಂಚಿ ಹೋಗಿದ್ದವು.
ಸಮುದಾಯದ ಮನಗೆಲ್ಲುವಲ್ಲಿ ಯಶಸ್ವಿಯಾದ ಬಿಜೆಪಿ
ಈ ಬಾರಿ ಬಿಜೆಪಿ ತಾಲೂಕಿನಾದ್ಯಂತ ಇರುವ ಸಣ್ಣ ಸಣ್ಣ ಸಮುದಾಯಗಳ ಮುಖಂಡರನ್ನು ಪ್ರತ್ಯೇಕವಾಗಿ ಸಭೆ ನಡೆಸಿ, ಬಿಜೆಪಿ ಸರ್ಕಾರದಿಂದ ತಮ್ಮ ಸಮುದಾಯಗಳಿಗೆ ಆಗಬಹುದಾದ ಹಾಗೂ ಈಗಾಗಲೇ ಸಣ್ಣ ಸಮುದಾಯಗಳಿಗೆ ಆಗಿರುವ ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡುವಲ್ಲಿ ಹಾಗೂ ಆಯಾ ಸಮುದಾಯದ ರಾಜ್ಯ ಮಟ್ಟದ ನಾಯಕರನ್ನು ಕರೆ ತಂದು ಸಮಾವೇಶಗಳನ್ನು ನಡೆಸುವುದರೊಂದಿಗೆ ಸಮುದಾಯಗಳ ಮನಗೆಲ್ಲುವಲ್ಲಿ ಕ್ಷೇತ್ರದ ಚುನಾವಣಾ ಉಸ್ತುವಾರಿಗಳಾಗಿದ್ದ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ವಕ್ತಾರ ರಘು ಕೌಟಿಲ್ಯ ಅವರು ಯಶಸ್ವಿಯಾಗಿದ್ದಾರೆ ಎಂಬುದು ಇದೀಗ ಗೊತ್ತಾಗಿದೆ.
ಕೆಆರ್ ಪೇಟೆ: ಕಳೆದ ಬಾರಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಕೊಟ್ಟ ಶಾಕ್
ಪ್ರಬಲ ನಾಯಕರೆಡೆಗೇ ಇದ್ದ ದೃಷ್ಟಿ ಬದಲಾಯಿತು
ಇದುವರೆಗೆ ಪ್ರಬಲ ಸಮುದಾಯದ ಕಡೆಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ದೃಷ್ಟಿ ನೆಟ್ಟಿದ್ದರಲ್ಲದೆ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ಜತೆಗೆ ಪ್ರಬಲ ಸಮುದಾಯದ ಮತದ ಮೇಲೆಯೇ ತಮ್ಮ ಲೆಕ್ಕಾಚಾರಗಳನ್ನು ಮಾಡುತ್ತಿದ್ದರು. ಆದರೆ ಈ ಬಾರಿಯ ಉಪಚುನಾವಣೆಗಳಲ್ಲಿ ಬೇರೆ ಬೇರೆ ಪಕ್ಷಗಳಿಗೆ ಹರಿದು ಹಂಚಿ ಹೋಗುತ್ತಿದ್ದ ಸಣ್ಣ ಸಣ್ಣ ಕಾಯಕ ಸಮುದಾಯಗಳ ಮತದ ಮೌಲ್ಯ ಏನು ಎಂಬುದು ತಿಳಿಯುವಂತಾಗಿದೆ. ಸಣ್ಣ ಸಮುದಾಯಗಳನ್ನು ಮನವೊಲಿಸಿ ಬಿಜೆಪಿ ಕಡೆಗೆ ಒಲಿಯುವಂತೆ ಮಾಡಿದ್ದರಿಂದ ಇವತ್ತು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರಿಗೆ ಗೆಲುವು ಸುಲಭವಾಗಿ ಒಲಿದು ಬಂದಿದೆ ಎನ್ನುವುದಂತು ನಿಜ.