ಕುಮಾರಸ್ವಾಮಿ, ಅನರ್ಹ ಶಾಸಕ ನಾರಾಯಣಗೌಡ ಪ್ರಮಾಣಕ್ಕೆ ರೆಡಿ
ಮಂಡ್ಯ, ಅಕ್ಟೋಬರ್ 25: ಎಚ್ಡಿ ಕುಮಾರಸ್ವಾಮಿ ಹಾಗೂ ಅನರ್ಹ ಶಾಸಕ ನಾರಾಯಣಗೌಡ ಆಣೆ ಪ್ರಮಾಣ ಪ್ರಮಾಣಕ್ಕೆ ರೆಡಿಯಾಗಿದ್ದಾರೆ.
ಕಳೆದ ಒಂದು ವಾರದ ಹಿಂದಷ್ಟೇ ಮಾಜಿ ಸಚಿವರಾದ ಸಾ.ರಾ ಮಹೇಶ್ ಹಾಗೂ ಎಚ್ ವಿಶ್ವನಾಥ್ ಆಣೆ ಪ್ರಮಾಣವನ್ನು ಮಾಡಿದ್ದರು. ಇದೀಗ ಮತ್ತೊಂದು ಆಣೆ ಪ್ರಮಾಣಕ್ಕೆ ಸಿದ್ಧತೆ ನಡೆದಿದೆ.
ವಿಶ್ವನಾಥ್-ಸಾರಾ ಮಹೇಶ್ ಮಧ್ಯೆ ಮತ್ತೆ ಶುರುವಾಯ್ತ ಮಾತಿನ ಸಮರ?
ಅನುದಾನದ ವಿಚಾರವಾಗಿ ಆಣೆ ಪ್ರಮಾಣ ನಡೆಯಲಿದೆ. ಕಳೆದ ಜೂನ್ ತಿಂಗಳಲ್ಲಿ ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡೆದಿದ್ದ ಹುಣಸೂರು ಶಾಸಕ ಎಚ್. ವಿಶ್ವನಾಥ್ ಒಳಗೊಂಡ 17 ಜನ ಕಾಂಗ್ರೆಸ್-ಜೆಡಿಎಸ್ ಶಾಸಕರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ಪರಿಣಾಮ ಸಮ್ಮಿಶ್ರ ಸರ್ಕಾರವೇ ಉರುಳಿತ್ತು.
ಈ ವೇಳೆ ಅಂದಿನ ಸಿಎಂ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುವ ಚರ್ಚೆಯ ವೇಳೆ ಮಾತನಾಡಿದ್ದ ಮಾಜಿ ಸಚಿವ ಸಾ.ರಾ. ಮಹೇಶ್ "ಹೆಚ್. ವಿಶ್ವನಾಥ್ 25 ಕೋಟಿ ಹಣಕ್ಕೆ ತಮ್ಮನ್ನು ಮಾರಿಕೊಂಡಿದ್ದಾರೆ" ಎಂದು ಆರೋಪ ಹೊರಿಸಿದ್ದರು.
ಸಾ.ರಾ. ಮಹೇಶ್ ಅವರ ಈ ಆರೋಪ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಲ್ಲದೆ ಕಳೆದ ಮೂರು ತಿಂಗಳಿನಿಂದ ಈ ಇಬ್ಬರೂ ನಾಯಕರು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರು.
ಆದರೆ, ಮೊನ್ನೆ ಪತ್ರಿಕಾಗೋಷ್ಠಿ ನಡೆಸಿ ಸಾ.ರಾ. ಮಹೇಶ್ ಗೆ ಸವಾಲೆಸೆದಿದ್ದ ವಿಶ್ವನಾಥ್, "ನಾನು ಮಾರಿಕೊಂಡಿದ್ದು ಸತ್ಯವೇ ಆಗಿದ್ದರೆ, ತಾಯಿ ಚಾಮುಂಡಿ ಪಾದದಲ್ಲಿ ಬಂದು ಆಣೆ ಪ್ರಮಾಣ ಮಾಡಿ" ಎಂದಿದ್ದರು.
ಅನುದಾನದ ವಿಚಾರದಲ್ಲಿ ಎಚ್ಡಿಕೆಗೆ ಪ್ರಮಾಣಕ್ಕೆ ಆಹ್ವಾನ
ಅನುದಾನದ ವಿಚಾರದಲ್ಲಿ ಕೆ.ಆರ್ ಪೇಟೆ ಶಾಸಕ ಅನರ್ಹ ಶಾಸಕ ನಾರಾಯಣಗೌಡ ಅವರು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿಯನ್ನು ಆಣೆ ಪ್ರಮಾಣಕ್ಕೆ ಆಹ್ವಾನ ನೀಡಿದ್ದಾರೆ.
ಅನುದಾನದ ಲೆಕ್ಕಾಚಾರವೇನು?
ಕೆ.ಆರ್.ಪೇಟೆ ಕ್ಷೇತ್ರಕ್ಕೆ 700 ಕೋಟಿ ಅನುದಾನ ಕೊಟ್ಟಿದ್ದಾರೆ ಅನ್ನೋ ವಿಚಾರಕ್ಕೆ ಆಣೆ ಪ್ರಮಾಣಕ್ಕೆ ಕರೆದಿದ್ದಾರೆ. ಧರ್ಮಸ್ಥಳಕ್ಕೆ ಬಂದು ನನ್ನ ಕ್ಷೇತ್ರಕ್ಕೆ 700 ಕೋಟಿ ರೂ. ಅನುದಾನ ಕೊಟ್ಟಿದ್ದರೆ ಆಣೆ ಮಾಡಲಿ ಎಂದು ಅನರ್ಹ ಶಾಸಕ ಹೇಳಿದ್ದಾರೆ.
ಮೈಸೂರು ಬಳಿಕ ಮಂಡ್ಯದ ಕ್ಷೇತ್ರಕ್ಕೂ ಆಣೆ ಪ್ರಮಾಣ ಆವರಿಸಿದೆ
ಒಟ್ಟಿನಲ್ಲಿ ಮೈಸೂರು ಕ್ಷೇತ್ರದ ನಂತರ ಇದೀಗ ಮಂಡ್ಯ ಕ್ಷೇತ್ರಕ್ಕೂ ಆಣೆ ಪ್ರಮಾಣ ಆವರಿಸಿದ್ದು, ಇವರ ರಾಜಕೀಯ ಲಾಭಕ್ಕೆಲ್ಲ ದೇವರನ್ನ ಎಳೆದು ತರೋದು ಯಾಕೆ ಎಂದು ಭಕ್ತರು ಕಿಡಿಕಾರುತ್ತಿದ್ದಾರೆ.
ವಿಶ್ವನಾಥ್ ಪ್ರಮಾಣ ಮಾಡದೆ ವಾಪಸಾಗಿದ್ದರು
ಕೆಲ ದಿನಗಳ ಹಿಂದೆಯಷ್ಟೇ ಆಣೆ ಸವಾಲು ಹಾಕಿದ್ದ ಹುಣಸೂರಿನ ಅನರ್ಹ ಶಾಸಕ ವಿಶ್ವನಾಥ್ ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡದೇ ವಾಪಸ್ಸಾಗಿದ್ದರು. ಆದರೆ ವಿಶ್ವನಾಥ್ ಸವಾಲು ಸ್ವೀಕರಿಸಿದ್ದ ಮಾಜಿ ಸಚಿವ ಸಾ ರಾ ಮಹೇಶ್ ಚಾಮುಂಡಿ ಎದುರು ಪ್ರಮಾಣ ಮಾಡಿದ್ದರು.