ಕಾಂಗ್ರೆಸ್ನಲ್ಲಿ ಬಿರುಕು ಮೂಡಿಸಲು ಅಶೋಕ್ ಯತ್ನ: ಧ್ರುವನಾರಾಯಣ್
ಮದ್ದೂರು, ಆಗಸ್ಟ್ 10 : "ಚುನಾವಣೆಯಾದ ನಂತರ ಮುಖ್ಯಮಂತ್ರಿ ವಿಚಾರ ಬರುತ್ತದೆ. ಅದಲ್ಲದೆ, ರಾಜ್ಯ ವಿಧಾನ ಸಭೆಗೆ ಚುನಾವಣೆ ಇನ್ನೂ ಬಂದಿಲ್ಲ. ಸೂಕ್ತ ಕಾಲದಲ್ಲಿ ಪಕ್ಷ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತದೆ, ಈಗ ಇದರ ಬಗ್ಗೆ ಚರ್ಚೆ ಅಗತ್ಯವಿಲ್ಲ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.
ಬುಧವಾರ ಮದ್ದೂರು ಪಟ್ಟಣದಲ್ಲಿ ಮಾತನಾಡಿದ ಅವರು, "ಚುನಾವಣೆ ನಂತರ ಶಾಸಕರ ಅಭಿಪ್ರಾಯ ಪಡೆದು ಯಾರು ಸಿಎಂ ಎಂದು ತೀರ್ಮಾನ ಮಾಡಲಾಗುತ್ತದೆ. ಈಗ ಆ ವಿಚಾರದ ಬಗ್ಗೆ ಚರ್ಚೆ ಮಾಡುವುದು ಅಪ್ರಸ್ತುತ. ಈಗ ಯಾಕೆ ಅದರ ಬಗ್ಗೆ ಚರ್ಚೆ. ಚುನಾವಣಾ ಫಲಿತಾಂಶ ಬಂದ ನಂತರ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ನಿರ್ಧರಿಸಲಿದೆ" ಎಂದರು.
ಮದ್ದೂರು ಕೆರೆ ಕೋಡಿ ಒಡೆದು ಪ್ರವಾಹ; ಬೆಂಗಳೂರು-ಮೈಸೂರು ಹೆದ್ದಾರಿ ಬಂದ್
"ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಈ ಜನ್ಮದಲ್ಲಿ ಒಂದಾಗಲ್ಲ" ಎಂಬ ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, "ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯ ಮೂಡಲು ಸಚಿವ ಅಶೋಕ್ ಅಂತಹ ಹೇಳಿಕೆ ನೀಡುತ್ತಿದ್ದಾರೆ. ಆದರೆ ಇಬ್ಬರೂ ನಾಯಕರೂ ಒಟ್ಟಿಗೇ ಸೇರಿ ರಾಜ್ಯಾದ್ಯಂತ ಪಾದಯಾತ್ರೆ, ಪ್ರವಾಸ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಬಣವೂ ಇಲ್ಲ, ಇರುವುದೊಂದೆ, ಅದು ಕಾಂಗ್ರೆಸ್ ಬಣ" ಎಂದು ಧ್ರುವನಾರಾಯಣ್ ಸ್ಪಷ್ಟಪಡಿಸಿದರು.
"ಅಶೋಕ್ಗೆ ನಮ್ಮ ನಾಯಕರ ಬಗ್ಗೆ ಮಾತನಾಡಲು ಏನು ನೈತಿಕತೆಯಿದೆ. ಬಿಜೆಪಿಯಲ್ಲೇ ಬಹಳಷ್ಟು ಗೊಂದಲವಿದೆ. ಬಸನಗೌಡ ಪಾಟೀಲ್ ಯತ್ನಾಳ್ ನೇರವಾಗಿ 2500 ಕೋಟಿಗೆ ಸಿಎಂ ಹುದ್ದೆ ಮಾರಾಟಕ್ಕಿದೆ, ಹಾಲಿ ಸಚಿವರು 100 ಕೋಟಿ ರೂ. ಕೊಟ್ಟು ಸಚಿವರಾಗಿದ್ದಾರೆ" ಎಂದು ಹೇಳಿದ್ದರು.
"ಎಚ್. ವಿಶ್ವನಾಥ್ ಕೂಡ ಭ್ರಷ್ಟಾಚಾರ ಬಗ್ಗೆ ಮಾತನಾಡಿದ್ದಾರೆ. ಅವರ ವಿರುದ್ಧ ಏನು ಕ್ರಮ ಕೈಗೊಂಡಿದ್ದಾರೆ. ಬಿಜೆಪಿಯಲ್ಲಿಯೇ ಕೊಳೆತು ನಾರುತ್ತಿರುವಾಗ ಅವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಏನಿದೆ?" ಎಂದು ಪ್ರಶ್ನಿಸಿದರು.
"ಸಿದ್ದರಾಮೋತ್ಸವ ಐತಿಹಾಸಿಕ ಕಾರ್ಯಕ್ರಮ. ಆ ಕಾರ್ಯಕ್ರಮದ ನಂತರ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ಕರ್ನಾಟಕ ಮಾತ್ರವಲ್ಲ, ಇಡೀ ಭಾರತದಲ್ಲಿ ಅಷ್ಟು ಜನರ ಕಾರ್ಯಕ್ರಮ ನಡೆದಿರಲಿಲ್ಲ, ಇದನ್ನು ನೋಡಿ ಬಿಜೆಪಿಯವರಿಗೆ ಭಯ ಶುರುವಾಗಿದೆ. ಅದಕ್ಕೆ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದರು.
ಭಾನುವಾರ ಮದ್ದೂರಿಗೆ ಭೇಟಿ ನೀಡಿದ್ದ ಕಂದಾಯ ಸಚಿವ ಆರ್ ಅಶೋಕ್ "ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಆಲಿಂಗನ ಧೃತರಾಷ್ಟ್ರನ ಆಲಿಂಗನವಿದ್ದಂತೆ ಎಂದು ಟೀಕಿಸಿದ್ದರು. ಅಲ್ಲದೆ ರಾಹುಲ್ ಗಾಂಧಿ ಸನ್ನೆ ಮಾಡಿದ ನಂತರ ಇಬ್ಬರು ಆಲಿಂಗನ ಮಾಡಿಕೊಂಡಿದ್ದಾರೆ" ಎಂದು ಕಾಂಗ್ರೆಸ್ ಒಗ್ಗಟ್ಟನ್ನು ವ್ಯಂಗ್ಯ ವಾಡಿದ್ದರು.
ಬುಧವಾರವೂ ಕೂಡ ಕಾಂಗ್ರೆಸ್ ಮೇಲೆ ಹರಿಹಾಯ್ದಿರುವ ಅಶೋಕ್ "ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು, ಧೈರ್ಯ ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿ" ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಆರ್. ಅಶೋಕ ಸವಾಲು ಹಾಕಿದ್ದರು.