ಪುಲ್ವಾಮ ಹುತಾತ್ಮ ಯೋಧ ಗುರು ಸಮಾಧಿಗೆ ಪತ್ನಿ ಕಲಾವತಿಯಿಂದ ಪೂಜೆ
ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಯೋಧ ಎಚ್. ಗುರು ಅವರ ಪುಣ್ಯ ಸ್ಮರಣೆಯನ್ನು ಪತ್ನಿ ಕಲಾವತಿ ಇಂದು ಏರ್ಪಡಿಸಿದ್ದು, ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಲಿದ್ದಾರೆ.
ಮಂಡ್ಯ, ಫೆಬ್ರವರಿ 16: ಪುಲ್ವಾಮ ದಾಳಿಯಲ್ಲಿ ಹುತಾತ್ಮನಾದ ಯೋಧ ಎಚ್. ಗುರು ಅವರ ಪುಣ್ಯ ಸ್ಮರಣೆಯನ್ನು ಪತ್ನಿ ಕಲಾವತಿ ಇಂದು ಏರ್ಪಡಿಸಿದ್ದು, ಪೂಜೆ ಸಲ್ಲಿಸಿ ಅನ್ನಸಂತರ್ಪಣೆ ನಡೆಸಲಿದ್ದಾರೆ.
ಪ್ರತಿ ರಾಷ್ಟ್ರೀಯ ಹಬ್ಬಗಳಲ್ಲೂ ಬಂದು ಪೂಜೆ ಸಲ್ಲಿಸುತ್ತಿರುವ ಯೋಧ ಗುರು ಅವರ ಪತ್ನಿ ಕಲಾವತಿ, ಕೌಟುಂಬಿಕ ಕಲಹಗಳಿಂದ ದೂರ ಉಳಿದಿದ್ದು, ಇದೀಗ ಭಾನುವಾರ ಪ್ರತ್ಯೇಕವಾಗಿ ಪೂಜೆ ಸಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ ಪುಲ್ವಾಮಾ ಹುತಾತ್ಮ ಯೋಧನ ತಂದೆ ತಾಯಿ
ಫೆ.14 ರಂದು ಗುರು ತಂದೆ ಹೊನ್ನಯ್ಯ ಮತ್ತು ತಾಯಿ ಚಿಕ್ಕೋಳಮ್ಮ ಪುಣ್ಯ ಸ್ಮರಣೆ ಕಾರ್ಯಕ್ರಮ ಏರ್ಪಡಿಸಿ, ಸಮಾಧಿಗೆ ಪೂಜೆ ಸಲ್ಲಿಸಿದ್ದರು. ಈ ವೇಳೆ ಗುರು ಪತ್ನಿ ಕಾಣದೇ ಇದ್ದಿದ್ದು ಹಲವು ಚರ್ಚೆಗಳಿಗೆ ಕಾರಣವಾಗಿತ್ತು.
ಪುಲ್ವಾಮ ದಾಳಿ ಆದ ನಂತರ ಗುರು ಅವರ ಮೃತ ದೇಹ ದೊರೆತ ದಿನವನ್ನು ಪರಿಗಣಿಸಿ ಫೆ.16 ರಂದು ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ನಡೆಸಲಾಗುವುದೆಂದು ಹೇಳಿದ್ದಾರೆ.
ಫೆ.16 ರಂದು ಒಟ್ಟಿಗೆ ಪುಣ್ಯ ಸ್ಮರಣೆ ಕಾರ್ಯಕ್ರಮ ಮಾಡುವಂತೆ ಅತ್ತೆ, ಮಾವನ ಜೊತೆ ಚರ್ಚೆ ಮಾಡಿದ್ದೆ. ಆದರೂ ಅವರು ನನಗೆ ಅವಮಾನ ಮಾಡಬೇಕೆಂಬ ಉದ್ದೇಶದಿಂದಲೇ ಪ್ರತ್ಯೇಕವಾಗಿ ಪೂಜೆ ಮಾಡಿದ್ದಾರೆ. ನಾನು ನನ್ನ ಸ್ವಂತ ಖರ್ಚಿನಲ್ಲೆ ಸ್ಮಾರಕವನ್ನು ನಿರ್ಮಿಸಲು ಮುಂದಾಗಿದ್ದೇನೆ ಎಂದು ಹೇಳಿದ್ದಾರೆ.
ಈ ನಡುವೆ ಹುತಾತ್ಮ ಗುರುವಿನ ಪತ್ನಿ ಕಲಾವತಿ ಮತ್ತು ತಾಯಿ ಚಿಕ್ಕೋಳಮ್ಮನ ನಡುವೆ ಹಣಕಾಸಿನ ವಿಚಾರದಲ್ಲಿ ಮುನಿಸಿಕೊಂಡು ಪ್ರತ್ಯೇಕವಾಗಿರುವ ಹಿನ್ನೆಲೆಯಲ್ಲಿ, ಗುರು ಪತ್ನಿ ಕಲಾವತಿ ಪೊಲೀಸ್ ಠಾಣೆಗೆ ತೆರಳಿ, ಭಾನುವಾರ ಸಮಾಧಿಗೆ ಪೂಜೆ ಸಲ್ಲಿಸುತ್ತೇನೆ. ನನಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಕೆಎಂ ದೊಡ್ಡಿಯಲ್ಲಿ ನಿರ್ಮಾಣಗೊಂಡಿಲ್ಲ ಹುತಾತ್ಮ ಯೋಧ ಗುರು ಸ್ಮಾರಕ
ಈ ಸಂಬಂಧ ಪೊಲೀಸರು ಗುಡಿಗೆರೆ ಕಾಲೋನಿಯಲ್ಲಿರುವ ಚಿಕ್ಕೋಳಮ್ಮನ ಮನೆಗೆ ತೆರಳಿ ಸೊಸೆ ಕಲಾವತಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಅತ್ತ ಗುರು ತಾಯಿ ಚಿಕ್ಕೋಳಮ್ಮ ಭಾನುವಾರ ಚಿಕ್ಕರಸಿನಕೆರೆ ಶ್ರೀಕಾಲಭೈರವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡು ಅನ್ನಸಂತರ್ಪಣೆ ಏರ್ಪಡಿಸಿದ್ದಾರೆ. ಒಟ್ಟಾರೆ ಅತ್ತೆ ಸೊಸೆ ನಡುವಿನ ಮನಸ್ತಾಪ ಕುಟುಂಬದಲ್ಲಿ ಬಿರುಕಿಗೆ ಕಾರಣವಾಗಿ ಪ್ರತ್ಯೇಕ ಪೂಜೆ ಮಾಡುವ ಮಟ್ಟಕ್ಕೆ ಬಂದು ನಿಂತಿದೆ.