ಗುರು ಕುಟುಂಬಕ್ಕೆ ಸಾಂತ್ವನ ಹೇಳಲು ಬಂದ ಪ್ರಕಾಶ್ ರೈ ವಿರುದ್ಧವೇ ಘೋಷಣೆ
ಮಂಡ್ಯ, ಫೆಬ್ರವರಿ 16 : ಪುಲ್ವಾಮಾದಲ್ಲಿ ಹತರಾಗಿರುವ ಸಿಆರ್ಪಿಎಫ್ ಜವಾನ ಮಂಡ್ಯದ ಗುರು ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬಂದಾಗ, ನಟ ಪ್ರಕಾಶ್ ರೈ ಅವರ ವಿರುದ್ಧವೇ ಘೋಷಣೆಗಳನ್ನು ಕೂಗಿದ ಘಟನೆ ಶನಿವಾರ ನಡೆದಿದೆ.
"ಶತ್ರುಗಳು ನಮ್ಮ ಮೇಲೆ ದಂಡೆತ್ತಿ ಬಂದಾಗ, ಎಲ್ಲ ಭಾರತೀಯರ ಜವಾಬ್ದಾರಿ ಮತ್ತು ಹೊಣೆಗಾರಿಕೆ, ನಾವೆಲ್ಲ ಒಂದಾಗಿ ನಿಂತುಕೊಂಡು, ಒಂದಾಗಿ ಯೋಚನೆ ಮಾಡುವುದು, ಒಂದಾಗಿ ನಮ್ಮ ನಾಯಕರಿಗೆ ಬೆಂಬಲ ಸೂಚಿಸುವುದು..." ಅವರು ಹೇಳುತ್ತಿದ್ದಂತೆ ಸುತ್ತಲಿದ್ದವರು ಅವರ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು.
ರೈ ಅವರೇ, ಇಂಥ ಘಟನೆ ನಡೆದಾಗ ಮಾತ್ರ ಸೈನಿಕರ ಬಗ್ಗೆ ಮಾತಾಡುವುದಲ್ಲ, ದಿನಾಲೂ ಸೈನಿಕರ ಬಗ್ಗೆ ಮಾತಾಡಿ, ನಿಮಗೆ ನಾಚಿಕೆಯಾಗಬೇಕು ಎಂದು ಸುತ್ತಲಿದ್ದರು ಹೇಳುತ್ತಿದ್ದಂತೆ, ದಿನಾಲೂ ಅಲ್ಲಾರೀ, ದಿನಾಲೂ ಪ್ರತಿದಿನವೂ ರೈತರ ಬಗ್ಗೆ ಮಾತಾಡಬೇಕು. ಸ್ವಾರ್ಥ ರಾಜಕೀಯಕ್ಕೆ ಬಳಸುವ ಈ ದೇಶದ್ರೋಹಿಗಳಿಗೆ ಧಿಕ್ಕಾರ... ಎಂದು ಪ್ರಕಾಶ್ ರೈ ಹೇಳುತ್ತಿದ್ದಂತೆ, ಮೋದಿ ಮೋದಿ ಎಂಬ ಘೋಷಣೆ ಅವರ ಮಾತಿಗೆ ತಡೆಗೋಡೆ ಹಾಕಿತು.
ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವ ಅವರಿಗೆ ಕಡೆಗೆ ಮಾತಾಡಲು ಕೂಡ ಅವಕಾಶ ಕೊಡಲಿಲ್ಲ. ಮೋದಿ ಮೋದಿ, ಭಾರತ್ ಮಾತಾಕಿ ಜೈ ಎಂಬ ಕೂಗು ಮುಗಿಲು ಮುಟ್ಟಿತು. ಪ್ರಕಾಶ್ ರೈ ಅವರು ಭಾರತ ಎಂದು ಕೂಗುತ್ತಿದ್ದರೆ, ಸುತ್ತಲಿರುವವರು ಮೋದಿ ಮೋದಿ ಎಂದು ಪ್ರಧಾನಿಗೆ ಜೈಜೈಕಾರ ಹಾಕಲು ಶುರುವಿಟ್ಟುಕೊಂಡರು. ಚಿತ್ರನಟ ಪ್ರಥಮ್ ಕೂಡ ಈ ಘಟನೆಗೆ ಸಾಕ್ಷಿಯಾದರು.
When a Nation mourns n talks the need to be united ..SHAME on these who are politicising a tragedy .. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುತ್ತ...ನಾವು ಭಾರತಿಯರೆಲ್ಲ ಒಂದಾಗಿರಬೇಕೆಂದು ಮಾತನಾಡುತ್ತಿದ್ದ ಸಂತಾಪ ಸಭೆಯನ್ನು .. ಸ್ವಾರ್ಥ ರಾಜಕೀಯಕ್ಕೆ ಬಳಸುವ ಈ ದೇಶದ್ರೋಹಿಗಳಿಗೆ ಧಿಕ್ಕಾರ .. JAI HIND pic.twitter.com/4xSgP987i5
— Prakash Raj (@prakashraaj) February 16, 2019
ಯೋಧನ ಕುಟುಂಬಕ್ಕೆ ಪ್ರಕಾಶ್ ರೈ ಸಾಂತ್ವನ : ವೀರ ಯೋಧ ಮಂಡ್ಯದ ಎಚ್ ಗುರು ಅವರ ನಿವಾಸಕ್ಕೆ ನಟ ಪ್ರಕಾಶ್ ರೈ ಅವರು ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಲ್ವಾಮಾ ದಾಳಿಯೊಂದು ನಡೆಯಬಾರದ ಘಟನೆ. ಪ್ರತೀಕಾರದ ಬಗ್ಗೆ ಅನೇಕ ಮಾತುಗಳು ಕೇಳಿ ಬರುತ್ತಿವೆ. ನಾವು ಹುತಾತ್ಮ ಯೋಧರ ಬಗ್ಗೆ ಯೋಚಿಸುವ ಜೊತೆಗೆ ಗಾಯಗೊಂಡವರ ಬಗ್ಗೆ ಕೂಡಾ ಯೋಚಿಸಬೇಕಿದೆ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರಕ್ಕೆ ಯಾವುದೇ ಆಗ್ರಹ ಆಗಲಿ, ಸಲಹೆ ಆಗಲಿ ನೀಡುವುದಿಲ್ಲ, ನೀಡಲೂಬಾರದು ಎಂದು ತಿಳಿಸಿದರು.
ಹುತಾತ್ಮ ಯೋಧ ಗುರು ಕುಟುಂಬದವರ ನೋವನ್ನು ನಾವು ಹಂಚಿಕೊಳ್ಳಲು ಸಾಧ್ಯವಿಲ್ಲ. ಸರ್ಕಾರ ಕೂಡಾ ಕೊಂಚ ಮಟ್ಟಿಗೆ ಪರಿಹಾರ ಘೋಷಣೆ ಮಾಡಿದೆ. ನಮ್ಮ ಸ್ನೇಹಿತರು ದತ್ತು ತೆಗೆದುಕೊಂಡ ಶಾಲೆ ಇದೇ ಭಾಗದಲ್ಲಿದೆ. ಮತ್ತೆ ಮತ್ತೆ ಈ ಭಾಗಕ್ಕೆ ಬರುತ್ತಿರುತ್ತೇನೆ. ಅವರ ಜೀವನ ಎಷ್ಟರ ಮಟ್ಟಿಗೆ ಕಟ್ಟಿಕೊಡೋಕೆ ಸಾಧ್ಯವಾಗುತ್ತದೆ ನೋಡೋಣ. ತಕ್ಷಣಕ್ಕೆ ಪರಿಹಾರ ಘೋಷಣೆ ಮಾಡಲ್ಲ, ಸುಮ್ಮನೇ ಘೋಷಣೆ ಮಾಡಿ ಪರಿಹಾರ ನೀಡದಿದ್ದರೆ ಅದು ತಪ್ಪಾಗಿ ಕಾಣುತ್ತದೆ ಎಂದರು.