ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲ: ಶಿವರಾಮೇಗೌಡ
ಮಂಡ್ಯ, ಸೆಪ್ಟೆಂಬರ್ 2: ಕೇವಲ ಸ್ಯಾಂಡಲ್ ವುಡ್ ಅಥವಾ ಬೆಂಗಳೂರಿಗೆ ಮಾತ್ರ ಡ್ರಗ್ಸ್ ದಂಧೆ ಸಿಮೀತವಾಗಿಲ್ಲ. ಡ್ರಗ್ಸ್ ದಂಧೆ ಗ್ರಾಮೀಣ ಭಾಗಗಳಿಗೆ ತಲುಪಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲೂ ಡ್ರಗ್ಸ್ ದೊರೆಯತ್ತಿದೆ ಎಂದು ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.
Recommended Video
ನಾಗಮಂಗಲದಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಶಿವರಾಮೇಗೌಡ, ಡ್ರಗ್ಸ್ ಮಾಫಿಯಾದಲ್ಲಿ ಬೆಂಗಳೂರು ಹಾಗೂ ಸ್ಯಾಂಡಲ್ ವುಡ್ ಒಂದು ಕಡೆಯಾದರೆ, ಗ್ರಾಮೀಣ ಭಾಗ ಇನ್ನೊಂದು ಕಡೆಯಾಗಿದೆ. ಗ್ರಾಮೀಣ ಭಾಗದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದ್ದು, ಯುವಕರು ಇದರಿಂದ ಹಾಳಾಗುತ್ತಿದ್ದಾರೆ. ಇದೆಲ್ಲವನ್ನು ಕಂಡರೂ ಕಾಣದಂತೆ ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ನಾಗಮಂಗಲದಲ್ಲೂ ಡ್ರಗ್ಸ್ ಮಾರಾಟ ಜೋರಾಗಿ ನಡೆಯುತ್ತಿದೆ ಎಂದಿದ್ದಾರೆ.
ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಆಗಿರುವುದು ದುರ್ದೈವದ ಸಂಗತಿಯಾಗಿದೆ. ಈ ಹಿಂದೆ ಮಹಾನ್ ನಟರು ಇದ್ದ ಸ್ಯಾಂಡಲ್ ವುಡ್ ನಲ್ಲಿ ಈ ರೀತಿಯ ಚಟುವಟಿಕೆಗಳು ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ. ಬೆಂಗಳೂರಿನ ಕಲ್ಯಾಣ ನಗರದ ನನ್ನ ಶಾಲೆಯ ರಸ್ತೆಯಲ್ಲಿ ನೈಜೀರಿಯಾ, ಸೌಥ್ ಆಫ್ರಿಕಾ ಪ್ರಜೆಗಳು ಡ್ರಗ್ಸ್ ಮಾರಾಟ ಹಾಗೂ ಸೇವನೆ ಮಾಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಈ ಡ್ರಗ್ಸ್ ದಂಧೆ ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರದಲ್ಲಿ ಮಾತ್ರವಲ್ಲ ಕಳೆದ 20 ವರ್ಷಗಳಿಂದ ಈ ವ್ಯವಹಾರ ನಡೆಯುತ್ತಿದೆ. ಆದರೆ ಇದೀಗ ಹಂತ ಹಂತವಾಗಿ ದೊಡ್ಡ ಪ್ರಮಾಣಕ್ಕೆ ಈ ದಂಧೆ ವ್ಯಾಪಿಸಿದೆ. ಡ್ರಗ್ಸ್ ದಂಧೆಕೋರರಿಗೆ ರಾಜಕಾರಣಿಗಳ ಬೆಂಬಲವಿದೆ ಎಂದು ಆಪಾದಿಸಿದರು.
ಪ್ರಭಾವಿಗಳ ಬೆಂಬಲದಿಂದ ಇಷ್ಟರ ಮಟ್ಟಿಗೆ ಡ್ರಗ್ಸ್ ದಂಧೆ ವ್ಯಾಪಿಸಿದೆ. ಇದಲ್ಲದೇ ಗೋವಾ, ಶ್ರೀಲಂಕಾಗಳಿಗೆ ಕರೆದುಕೊಂಡು ಹೋಗಿ ಇಸ್ಪೀಟ್ ಆಟ ಆಡಿಸಲಾಗುತ್ತಿದೆ ಹಾಗೂ ತೋಟದ ಮನೆಗಳಲ್ಲಿ ರೇವ್ ಪಾರ್ಟಿಗಳು ನಡೆಯುತ್ತಿವೆ. ಇಂತಹ ಚಟುವಟಿಕೆಗಳನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ಕಠಿಣ ಕ್ರಮವಹಿಸಬೇಕಾಗಿದೆ ಎಂದು ಶಿವರಾಮೇಗೌಡ ಒತ್ತಾಯಿಸಿದರು.