ಚುನಾವಣೆ ಮುಗಿದರೂ ಮಂಡ್ಯದಲ್ಲಿ ರಾಜಕೀಯ ಕಾವು ಇನ್ನೂ ಆರಿಲ್ಲ
ಮಂಡ್ಯ, ಏಪ್ರಿಲ್ 21:ಮಂಡ್ಯ ಲೋಕಸಭಾ ಚುನಾವಣೆ ಮುಗಿದಿದೆ. ಆದರೆ ಒಳಗಿನ ರಾಜಕೀಯ ಕಾವು ಮಾತ್ರ ಆರುವ ಲಕ್ಷಣಗಳು ಕಾಣುತ್ತಿಲ್ಲ. ಸದ್ಯ ಚುನಾವಣೆ ಮುಗಿದು ಫಲಿತಾಂಶ ಬರುತ್ತಿದ್ದಂತೆಯೇ ಎಲ್ಲವೂ ಮುಗಿದು ಹೋಯಿತು ಎಂದು ಮಂಡ್ಯದ ವಿಚಾರದಲ್ಲಿ ಹೇಳುವಂತೆಯೂ ಇಲ್ಲ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬೇರೆ ಕಡೆ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿದ್ದಾರೋ ಬಿಟ್ಟಿದ್ದಾರೋ ಗೊತ್ತಿಲ್ಲ. ಆದರೆ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಾಯಕರು ಒಂದಾಗಿಲ್ಲ ಎಂಬುದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಬೀತಾಗಿದೆ.
ಚಿಂಚೋಳಿ ಉಪ ಚುನಾವಣೆ : ಬಿಜೆಪಿಯಿಂದ ಅಚ್ಚರಿಯ ಅಭ್ಯರ್ಥಿ?
ಕೆಲವೇ ಕೆಲವು ಬೆರಳೆಣಿಕೆಯ ನಾಯಕರು ಜೆಡಿಎಸ್ ನೊಂದಿಗೆ ಗುರುತಿಸಿಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ಉಳಿದಂತೆ ಹೆಚ್ಚಿನ ನಾಯಕರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಬಾವುಟ ಹಿಡಿದು ಸುಮಲತಾ ಅವರೊಂದಿಗೆ ಕಾಣಿಸಿಕೊಂಡಿದ್ದರು. ಹೀಗಾಗಿ ಒಂದಷ್ಟು ನಾಯಕರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಈ ನಾಯಕರ ಮುಂದಿನ ರಾಜಕೀಯ ಭವಿಷ್ಯವೇನು? ಎಂಬ ಚಿಂತೆಯೂ ಕಾಡತೊಡಗಿದೆ. ಹೇಳಿ ಕೇಳಿ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್ ನ ಪ್ರಬಲ ಭದ್ರಕೋಟೆ. ಇಲ್ಲಿರುವ ಎಂಟು ಕ್ಷೇತ್ರಗಳಲ್ಲಿ ಪಕ್ಷದ ಸಚಿವರು, ಶಾಸಕರಿದ್ದಾರೆ. ವಿಧಾನಪರಿಷತ್ ಸದಸ್ಯರು, ಸಂಸದರು ಇದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಗೆಲ್ಲಲೇ ಬೇಕಾಗಿದೆ.
ಪಶ್ಚಾತ್ತಾಪ ಪಡುತ್ತೀರಾ: 'ಜೋಡೆತ್ತು'ಗಳಿಗೆ ಕುಮಾರಸ್ವಾಮಿ ವಾರ್ನಿಂಗ್
ಈಗಾಗಲೇ ನಮ್ಮದೇ ಗೆಲುವು ಎಂದು ನಿಖಿಲ್ ಮತ್ತು ಸುಮಲತಾ ಅಂಬರೀಶ್ ಅವರು ಹೇಳಿಕೊಳ್ಳುತ್ತಿದ್ದಾರೆಯಾದರೂ ಒಳಮರ್ಮ ಮಾತ್ರ ಇನ್ನೂ ಗೊತ್ತೇ ಆಗುತ್ತಿಲ್ಲ.
ನಡೆದಿದ್ದು ಅಂತಿಂಥ ಪೈಪೋಟಿ ಅಲ್ಲ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲೂ ಭರ್ಜರಿ ಗೆಲುವನ್ನು ಜೆಡಿಎಸ್ ಸಾಧಿಸಿತ್ತು. ಹೀಗಾಗಿ ಲೋಕಸಭೆಗೆ ಉಪ ಚುನಾವಣೆ ನಡೆದಾಗ ಎಲ್.ಆರ್.ಶಿವರಾಮೇಗೌಡರು ಎದುರಾಳಿ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ವಿರುದ್ಧ 3.50 ಲಕ್ಷ ಮತಗಳ ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೇ ಅಂತರವನ್ನೇ ಮುಂದಿಟ್ಟುಕೊಂಡು ಇದೀಗ ಸುಮಲತಾ ಅವರನ್ನು ಮಣಿಸಬಹುದು ಎಂಬ ಲೆಕ್ಕಾಚಾರ ಹಾಕುವುದು ಕಷ್ಟವಾಗುತ್ತಿದೆ. ಏಕೆಂದರೆ ಈ ಬಾರಿ ನಡೆದಿದ್ದು ಅಂತಿಂಥ ಪೈಪೋಟಿ ಅಲ್ಲ. ಅದು ರಾಜ್ಯ ಮಾತ್ರವಲ್ಲ ಇಡೀ ದೇಶವೇ ತಿರುಗಿ ನೋಡುವಂತಹ ಪೈಪೋಟಿ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ.
ಕಾಂಗ್ರೆಸ್ ಕಾರ್ಯಕರ್ತರ ನಡೆಯೇನು?
ಇಲ್ಲಿ ಮುಖ್ಯವಾದ ವಿಚಾರ ಅದಲ್ಲ, ಚುನಾವಣೆ ಮುಗಿದಿದೆ ಫಲಿತಾಂಶವಷ್ಟೆ ಬರಲು ಬಾಕಿಯಿದೆ. ಹೀಗಿರುವಾಗ ಚುನಾವಣೆ ಬಳಿಕ ಸುಮಲತಾ ಅವರನ್ನು ಬೆಂಬಲಿಸಿದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮುಂದಿನ ನಡೆಯೇನು? ಎಂಬುದು ಇದೀಗ ಪ್ರಶ್ನೆಯಾಗಿ ಕಾಡತೊಡಗಿದೆ. ಈಗಾಗಲೇ ಇವರು ಮೈತ್ರಿ ಧರ್ಮವನ್ನು ಬಹಿರಂಗವಾಗಿಯೇ ವಿರೋಧಿಸಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸುವುದರೊಂದಿಗೆ ಕಾಂಗ್ರೆಸ್ ರಾಜ್ಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರು ಮುಂದೆ ತಮ್ಮ ರಾಜಕೀಯ ಭವಿಷ್ಯವನ್ನು ಯಾವ ಪಕ್ಷದಲ್ಲಿ ಕಟ್ಟಿಕೊಳ್ಳುತ್ತಾರೆ ಎಂಬುದು ಕೂಡ ಕುತೂಹಲವಾಗಿದೆ.
ಎಚ್ಡಿಕೆಯನ್ನು ಎದುರಾಕಿಕೊಂಡ 'ಜೋಡೆತ್ತು'ಗಳ ಧೈರ್ಯ ಮೆಚ್ಚಲೇಬೇಕು: ಏನಂತೀರಾ?
ಕಾಂಗ್ರೆಸ್ ಅಸ್ಥಿತ್ವವೂ ಮುಖ್ಯವಾಗಿದೆ
ಇನ್ನೊಂದೆಡೆ ಜೆಡಿಎಸ್ ನೊಳಗೆ ಕೆಲವರು ಪಕ್ಷದ ಅಭ್ಯರ್ಥಿ ವಿರುದ್ಧವಾಗಿ ಕಾರ್ಯಾಚರಣೆ ನಡೆಸಿದ್ದಾರೆಂಬ ಮಾತುಗಳು ಕೇಳಿ ಬರುತ್ತಿದೆ. ಏಕೆಂದರೆ ಕೆಲವರು ಜೆಡಿಎಸ್ ನಲ್ಲಿದ್ದರೂ ಅವರು ಅಂಬರೀಶ್ ಅಭಿಮಾನಿಗಳಾಗಿದ್ದು, ಸುಮಲತಾ ಅವರನ್ನು ಬೆಂಬಲಿಸಿದ್ದಾರೆ ಎನ್ನಲಾಗುತ್ತಿದೆ. ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಸ್ಥಿತ್ವವೂ ಮುಖ್ಯವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಜೆಡಿಎಸ್ ನೊಂದಿಗೆ ಮೈತ್ರಿಯಾಗಿ ಆಡಳಿತ ನಡೆಸಿದ್ದರೂ ಇದೇ ಪರಿಸ್ಥಿತಿ ಮುಂದೆಯೂ ಇರುತ್ತದೆ ಎನ್ನಲಾಗುವುದಿಲ್ಲ.
ಪಕ್ಷಕ್ಕೂ ಹೊಡೆತ ಬೀಳುವ ಸಾಧ್ಯತೆಯಿದೆ
ಹೀಗಿರುವಾಗ ರಾಜ್ಯನಾಯಕರು ಜಿಲ್ಲೆಯ ತಳಮಟ್ಟದ ಮುಖಂಡರು ಮತ್ತು ಕಾರ್ಯಕರ್ತರನ್ನು ಅಮಾನತು, ಉಚ್ಛಾಟನೆ ತಂತ್ರ ಅನುಸರಿಸುತ್ತಾ ಹೋದರೆ ಅದರಿಂದ ಪಕ್ಷಕ್ಕೂ ಹೊಡೆತ ಬೀಳುವ ಸಾಧ್ಯತೆ ಇಲ್ಲ ಎನ್ನಲಾಗುವುದಿಲ್ಲ. ಒಟ್ಟಾರೆಯಾಗಿ ಹೇಳಬೇಕೆಂದರೆ ಮಂಡ್ಯದಲ್ಲಿ ನಡೆದ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹತ್ತು ಹಲವು ರಾಜಕೀಯ ಬೆಳವಣಿಗೆಗೆ ದಾರಿ ಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ.