ಮಂಡ್ಯದ ಪಾರುಪತ್ಯೆಗಾಗಿ 3 ರಾಜಕೀಯ ಪಕ್ಷಗಳ ತಯಾರಿ!
ಮಂಡ್ಯ, ಜೂನ್ 29: ಈಗ ಕೊರೊನಾ ವೈರಸ್ ಮಹಾಮಾರಿ ಸೋಂಕು ಎಲ್ಲೆಡೆಯೂ ಅಬ್ಬರಿಸುತ್ತಿದೆ. ಇದನ್ನು ನಿಯಂತ್ರಿಸಲು ಸರ್ಕಾರಗಳು ಹೋರಾಟ ನಡೆಸುತ್ತಿವೆ. ಕೊರೊನಾ ವೈರಸ್ ಕಾಣಿಸಿಕೊಂಡ ಬಳಿಕ ಎಲ್ಲ ರಾಜಕೀಯ ಚಟುವಟಿಕೆಗಳು ದೂರವಾಗಿವೆ. ಇದು ಹೀಗೆ ಮುಂದುವರೆದರೆ ತಮ್ಮ ರಾಜಕೀಯ ಭವಿಷ್ಯಕ್ಕೆ ಎಲ್ಲಿ ಕುತ್ತು ಬರುತ್ತೋ ಎಂಬ ಭಯ ಎಲ್ಲ ರಾಜಕೀಯ ಪಕ್ಷಗಳ ಮುಖಂಡರನ್ನು ಕಾಡತೊಡಗಿದೆ.
Recommended Video
ಈ ಕಾಲದಲ್ಲಿ ರಾಜಕೀಯ ಮಾಡಿದರೆ ಎಲ್ಲಿ ತಮಗೆ ಕಪ್ಪು ಚುಕ್ಕೆಯಾಗುತ್ತೋ ಎಂಬ ಭಯವೂ ಕೆಲವು ನಾಯಕರನ್ನು ತೆಪ್ಪಗೆ ಕುಳಿತುಕೊಳ್ಳುವಂತೆ ಮಾಡಿದೆ. ಆದರೆ ಹೆಚ್ಚು ದಿನ ರಾಜಕೀಯ ಚಟುವಟಿಕೆಗಳಿಂದ ದೂರವಾಗಿ, ಜನಸಂಪರ್ಕದಿಂದ ದೂರ ಹೋದರೆ ಮತ್ತೆ ತಮ್ಮ ಅಸ್ತಿತ್ವ ಕಂಡುಕೊಳ್ಳುವುದು ಅಷ್ಟು ಸುಲಭವಿಲ್ಲ. ಹೀಗಾಗಿ ಇಷ್ಟು ದಿನಗಳ ಕಾಲ ಸುಮ್ಮನಿದ್ದ ರಾಜಕೀಯ ಪಕ್ಷಗಳ ನಾಯಕರು ತಳಮಟ್ಟದಿಂದ ಪಕ್ಷದ ಸಂಘಟನೆಯನ್ನು ಮಾಡಲು ಮುಂದಾಗಿದ್ದಾರೆ. ಈ ಚಟುವಟಿಕೆ ಜಿಲ್ಲಾಮಟ್ಟದಿಂದ ಆರಂಭವಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಮಂಡ್ಯದಲ್ಲಿ ರಾಜಕೀಯ ಜರೂರತ್ತು ಎದ್ದು ಕಾಣುತ್ತಿದೆ.
ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ
ಹಾಗೆ ನೋಡಿದರೆ ರಾಜಕೀಯದಲ್ಲಿ ಮಂಡ್ಯ ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ಇಂಡಿಯಾದ ಗಮನ ಸೆಳೆದಿತ್ತು. ಹೀಗಾಗಿ ಇಲ್ಲಿ ರಾಜಕೀಯ ಚಟುವಟಿಕೆ ಸದಾ ನಡೆಯುತ್ತಲೇ ಇರುತ್ತದೆ. ಗ್ರಾಮೀಣ ಮಟ್ಟದಿಂದ ಆರಂಭವಾಗಿ ಜಿಲ್ಲಾ ಮಟ್ಟದವರೆಗೆ ಇಲ್ಲಿ ಒಂದಲ್ಲ ಒಂದು ಕಾರಣಕ್ಕೆ ರಾಜಕೀಯ ನಡೆಯುತ್ತಲೇ ಇರುತ್ತದೆ. ಇಷ್ಟರಲ್ಲೇ ಗ್ರಾಮ ಪಂಚಾಯಿತಿಯ ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಬೇಕಾಗಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಎಲ್ಲದಕ್ಕೂ ತಡೆಯಾಗಿದೆ. ಆದರೆ ಇನ್ನು ಸುಮ್ಮನೆ ಕುಳಿತರೆ ಮುಂದಿನ ದಿನಗಳಲ್ಲಿ ಕಷ್ಟ ಅನುಭವಿಸಬೇಕಾಗಬಹುದು ಎಂಬುದನ್ನು ಅರಿತ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮದೇ ಪರಿಧಿಯಲ್ಲಿ ಪಕ್ಷದ ಸಂಘಟನೆಗೆ ಮುಂದಾಗಿದೆ.
ಮನ್ ಕೀ ಬಾತ್; ಮಂಡ್ಯದ ಕಾಮೇಗೌಡರನ್ನು ಹೊಗಳಿದ ಮೋದಿ
ಮಂಡ್ಯ ಜೆಡಿಎಸ್ ನ ಭದ್ರಕೋಟೆ
ಇದುವರೆಗೆ ಮಂಡ್ಯ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿತ್ತು. ಈ ಭದ್ರಕೋಟೆಯಲ್ಲಿ ಇದೀಗ ಬಿಜೆಪಿ ಖಾತೆ ತೆರೆದಿದೆ. ಕಾಂಗ್ರೆಸ್ ಗೂ ಸದ್ಯದ ಪರಿಸ್ಥಿತಿಯಲ್ಲಿ ಭಯವಿದೆ. ಅವರನ್ನು ಪ್ರತಿನಿಧಿಸುವವರು ಯಾರೂ ಇಲ್ಲದಂತಾಗಿದೆ. ಒಂದು ವೇಳೆ ಕಾಂಗ್ರೆಸ್ ನಿಂದ ಸುಮಲತಾ ಅವರಿಗೆ ಟಿಕೆಟ್ ನೀಡಿದ್ದರೆ ಗೆಲುವು ಪಡೆದು ಒಬ್ಬ ಸಂಸದರಾದರೂ ಪಕ್ಷದಿಂದ ಉಳಿದುಕೊಳ್ಳುತ್ತಿದ್ದರೇನೋ, ಆದರೆ ಟಿಕೆಟ್ ನೀಡದ ಕಾರಣ ಅವರು ಪಕ್ಷೇತರರಾಗಿ ಗೆಲುವು ಪಡೆದರು. ಆ ಗೆಲುವಿನ ಹಿಂದೆ ಕಾಂಗ್ರೆಸ್ ಕಾರ್ಯಕರ್ತರ ಶ್ರಮವಿದೆ ಎಂಬುದನ್ನು ತಳ್ಳಿಹಾಕಲಾಗದು. ಆದರೆ ಸಂಸದೆ ಸುಮಲತಾ ಅವರು ಕಾಂಗ್ರೆಸ್ ನತ್ತ ಒಲವು ತೋರುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇವತ್ತಿನ ಅವರ ನಡವಳಿಕೆಯನ್ನು ಗಮನಿಸಿದರೆ ಬಿಜೆಪಿಯತ್ತ ಹೆಚ್ಚಿನ ಒಲವು ಇದ್ದಂತಿದೆ.
ಕೈ ಕಾರ್ಯಕರ್ತರಲ್ಲಿ ಗೊಂದಲ
ಜೆಡಿಎಸ್ ಗೆ ಸದ್ಯದ ಪರಿಸ್ಥಿತಿಯಲ್ಲಿ ಶಾಸಕರಿದ್ದಾರೆ. ಒಂದಷ್ಟು ಗ್ರಾ.ಪಂ, ಜಿ.ಪಂ ಹಿಡಿತಗಳು ಅವರ ಕೈನಲ್ಲಿದೆ. ಆದರೆ ಇಲ್ಲಿ ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿರುವುದು ಕಾಂಗ್ರೆಸ್ ಪಕ್ಷಕ್ಕೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಒಡೆದ ಮನೆಯಾದ್ದರಿಂದ ಸುಮಲತಾರನ್ನು ಬೆಂಬಲಿಸಿದ ಕಾರ್ಯಕರ್ತರು ಈಗ ಗೊಂದಲದಲ್ಲಿದ್ದಾರೆ. ಅವರು ಯಾವ ಕಡೆಗೆ ವಾಲುತ್ತಾರೆ ಎಂಬುದು ಗೊತ್ತಿಲ್ಲ. ಒಂದಷ್ಟು ಕಾರ್ಯಕರ್ತರಿಗೆ ಮಾನಸಿಕವಾಗಿಯೂ ಹಿಂಸೆಯಾಗಿದೆ. ಅವರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿ ಪಕ್ಷವನ್ನು ಕಟ್ಟುವ ಜವಾಬ್ದಾರಿ ಕೆಪಿಸಿಸಿಯ ನೂತನ ಸಾರಥ್ಯ ವಹಿಸಿಕೊಳ್ಳುತ್ತಿರುವ ಡಿ.ಕೆ ಶಿವಕುಮಾರ್ ಅವರ ಹೆಗಲ ಮೇಲಿದೆ.
ಮಹಿಳಾ ಕಾರ್ಯಕರ್ತೆಯರ ಸಂಘಟನೆ
ಇದನ್ನು ಹೊರತಾಗಿಯೂ ಕಾಂಗ್ರೆಸ್ ಮತ್ತೊಂದು ರಣತಂತ್ರವನ್ನು ರೂಪಿಸಿದೆ. ಅದೇನೆಂದರೆ ಮಹಿಳಾ ಕಾರ್ಯಕರ್ತೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಳಿಸುವುದು. ಆ ಮೂಲಕ ತಳಮಟ್ಟದಿಂದ ಪಕ್ಷವನ್ನು ಸಂಘಟನೆಗೊಳಿಸಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರುವುದು ಅವರ ಉದ್ದೇಶವಾಗಿದೆ. ಅದು ಒಂದು ವೇಳೆ ಯಶಸ್ವಿಯಾದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿಡಿತ ಸಾಧಿಸಲು ಸಾಧ್ಯವಿದೆ.
ಈ ನಡುವೆ ಜೆಡಿಎಸ್ ಕೂಡ ಸುಮ್ಮನೆ ಕುಳಿತಿಲ್ಲ. ಇಲ್ಲಿನ ಶಾಸಕರು ಸೇರಿದಂತೆ ನಾಯಕರು ಸಕ್ರೀಯರಾಗಿದ್ದಾರೆ. ಹಲವು ಕಾರ್ಯಕ್ರಮಗಳ ಮೂಲಕ ಜನರ ಗಮನ ಸೆಳೆಯುತ್ತಿದ್ದಾರೆ. ಸ್ಥಳೀಯವಾಗಿ ನಡೆಯುವ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಕೂಡ ಗಂಭೀರವಾಗಿ ತೆಗೆದುಕೊಂಡು ತಮ್ಮ ಪಕ್ಷದ ಬೆಂಬಲಿತ ಸದಸ್ಯರನ್ನು ಗೆಲ್ಲಿಸಲು ಶಾಸಕರು ಪಣತೊಟ್ಟಿದ್ದಾರೆ. ಆ ಮೂಲಕ ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.
ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣ
ವಿಧಾನ ಸಭಾ ಉಪ ಚುನಾವಣೆಯಲ್ಲಿ ಡಾ.ಕೆ.ನಾರಾಯಣಗೌಡರು ಗೆಲ್ಲುವ ಮೂಲಕ ಬಿಜೆಪಿ ಖಾತೆ ತೆರೆದಿದೆ. ಇದು ಬಿಜೆಪಿಯಲ್ಲಿ ಆಶಾಭಾವ ಮೂಡಿಸಿದೆ. ಅಲ್ಲಿಂದ ಇಲ್ಲಿವರೆಗೂ ಮಂಡ್ಯದ ಸಂಪರ್ಕದಲ್ಲಿರುವ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ವೈ ವಿಜಯೇಂದ್ರ ಅವರು ಮಂಡ್ಯದಲ್ಲಿ ಬಿಜೆಪಿಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ನಡೆಸುತ್ತಿದ್ದು, ಸದ್ಯ ಮೂರು ಪಕ್ಷಗಳಿಗೂ ಮಂಡ್ಯ ಪ್ರತಿಷ್ಠೆಯ ಕಣವಾಗಿದೆ.