ಆದಿಚುಂಚನಗಿರಿಯಿಂದ ಹೊರಟಿದ್ದ ಪೊಲೀಸ್ ವಾಹನ ಪಲ್ಟಿ; 25 ಜನರಿಗೆ ಗಾಯ
ಮಂಡ್ಯ, ಮಾರ್ಚ್ 9: ಆದಿಚುಂಚನಗಿರಿಯಿಂದ ಕರ್ತವ್ಯ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಪೊಲೀಸ್ ಸಿಬ್ಬಂದಿ ವಾಹನ ಪಲ್ಟಿಯಾಗಿ 25 ಮಂದಿ ಪೊಲೀಸರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ತೈಲೂರು ಗ್ರಾಮದ ಬಳಿ ನಡೆದಿದೆ.
ವಾಹನದ ಸ್ಟೇರಿಂಗ್ ಬಂದ್ ಆಗಿ ನಾಗಮಂಗಲ ತಾಲೂಕಿನ ಆದಿಚುಂಚನಗಿರಿಯ ರಥೋತ್ಸವ ಮುಗಿಸಿ ಮಂಡ್ಯಕ್ಕೆ ವಾಪಸ್ ಬರುತ್ತಿದ್ದ ಕೆಎಸ್ ಆರ್ಪಿ ತುಕಡಿ ವಾಹನ ಪಲ್ಟಿಯಾಗಿದೆ.
ಸಾಗರದಲ್ಲಿ ರಸ್ತೆ ಅಪಘಾತ: ಮೂವರ ದುರ್ಮರಣ
ಎರಡು ದಿನಗಳಿಂದ ಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿತ್ತು. ಇಂದು ರಥೋತ್ಸವ ಮುಗಿಸಿ ವಾಪಸ್ ಬರುತ್ತಿರುವಾಗ ವಾಹನದ ಸ್ಟೇರಿಂಗ್ ಲಾಕ್ ಆಗಿದೆ. ಈ ಸಂದರ್ಭ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಸ್ಥಳೀಯರು ನೆರವಿಗೆ ಬಂದು, ವಾಹನದೊಳಗೆ ಸಿಲುಕಿದ್ದ ಪೊಲೀಸರನ್ನು ಹೊರಗೆ ತೆಗೆದು ಮದ್ದೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.
ವಾಹನದಲ್ಲಿದ್ದ 25 ಮಂದಿಗೆ ಗಾಯಗಳಾಗಿವೆ. ಸಾಗರ್, ರಾಘವೇಂದ್ರ, ರಾಮನಗೌಡ ಹಾಗೂ ಆನಂದ್ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡಿರುವ ಪೊಲೀಸ್ ಸಿಬ್ಬಂದಿ ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.