ಮದ್ದೂರಿನ ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ ಸಿಕ್ತು 52 ಲಕ್ಷ ರೂ
ಮಂಡ್ಯ, ನವೆಂಬರ್ 28: ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಅಲ್ಲಲ್ಲಿ, ಮತದಾರರಿಗೆ ಹಣ, ಮದ್ಯ ಹಂಚುವ ಪ್ರಕ್ರಿಯೆಗಳು ಗೌಪ್ಯವಾಗಿ ನಡೆಯುತ್ತಿವೆ. ಹುಣಸೂರಿನಲ್ಲಿ ದಾಖಲೆಯಿಲ್ಲದೆ ಎರಡು ಕೋಟಿ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದ ಪ್ರಕರಣ ಹಸಿರಾಗಿರುವಾಗಲೇ ಇದೀಗ ಮತ್ತೊಮ್ಮೆ ದಾಖಲೆಯಿಲ್ಲದೆ ಹಣ ಸಾಗಿಸುತ್ತಿದ್ದದ್ದು ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ಪೋಸ್ಟ್ನಲ್ಲಿ ಬೆಳಕಿಗೆ ಬಂದಿದೆ.
ಗುರುವಾರ ಬೆಳಿಗ್ಗೆ ತಮಿಳುನಾಡು ಮೂಲದ ಹೊಸೂರಿನ ಆದಿ ಎಂಬಾತ ತನ್ನ ಕಾರಿನಲ್ಲಿ ದಾಖಲೆಯಿಲ್ಲದೆ 52.60 ಲಕ್ಷ ರೂ.ಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ಈ ವೇಳೆ ನಿಡಘಟ್ಟ ಚೆಕ್ ಪೋಸ್ಟ್ನಲ್ಲಿ ಅನುಮಾನಗೊಂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈತ ಸಿಕ್ಕಿಬಿದ್ದಿದ್ದಾನೆ. ದಾಖಲೆಯಿಲ್ಲದ ಈ ಹಣವನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.
ಒಂದೇ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ ಎಂದ ಡಿಸಿಎಂ!
ಈತ ಕಾರಿನ ಚಾಲಕ ಹಾಗೂ ಮಾಲೀಕನೂ ಆಗಿದ್ದು, ಈ ಹಣವನ್ನು ತಮಿಳುನಾಡಿನಿಂದ ಕರ್ನಾಟಕದತ್ತ ಏಕೆ ಸಾಗಿಸುತ್ತಿದ್ದ, ಯಾರಿಗೆ ನೀಡಲು ಕೊಂಡೊಯ್ಯುತ್ತಿದ್ದ ಎಂಬುದು ತನಿಖೆಯಿಂದಷ್ಟೆ ತಿಳಿಯಬೇಕಿದೆ. ಇಷ್ಟಕ್ಕೂ ಕಾರಿನಲ್ಲಿ ಹಣವನ್ನು ಯಾವುದೇ ದಾಖಲೆಯಿಲ್ಲದೆ ಕೊಂಡೊಯ್ಯಬೇಕಾದರೆ ಅದು ಚುನಾವಣೆಯ ಬಳಕೆಗೆ ಆಗಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಚೆಕ್ಪೋಸ್ಟ್ನಲ್ಲಿದ್ದ ಅಧಿಕಾರಿಗಳು ತಪಾಸಣೆ ನಡೆಸಿದ್ದರಿಂದ ಈ ಸಂಗತಿ ಬೆಳಕಿಗೆ ಬಂದಿದೆ.