ಇಬ್ಬರು ಮಹಿಳೆಯರ ಭೀಕರ ಕೊಲೆ, ಐವರ ಹತ್ಯೆಗೆ ಸಂಚು!
ಮಂಡ್ಯ, ಆಗಸ್ಟ್ 5: ಮಹಿಳೆಯರಿಬ್ಬರ ದೇಹಗಳನ್ನು ಕತ್ತರಿಸಿ ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ಬಿಸಾಡಿದ್ದ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ ಜಿಲ್ಲೆ ಮಾಗಡಿ ತಾಲೂಕು ಕುದೂರು ಹೋಬಳಿ ಕೋಡಿಹಳ್ಳಿ ಕಾಲೋನಿಯ ಸಿದ್ದಲಿಂಗಪ್ಪ (28) ಹಾಗೂ ಪಾಂಡವಪುರ ತಾಲೂಕು ಹರವು ಗ್ರಾಮದ ಚಂದ್ರಕಲಾ (26) ಎಂಬುವರೇ ಬಂಧಿತ ಆರೋಪಿಗಳಾಗಿದ್ದಾರೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕ ಮಧುಕರ್ ಪವಾರ್ ತಿಳಿಸಿದ್ದಾರೆ.
ಮಂಡ್ಯ; ಹಾವು, ಚೇಳುಗಳಿಗೆ ಮನೆಯಾದ ಮಳವಳ್ಳಿ ದೊಡ್ಡಕೆರೆ ಉದ್ಯಾನ
ಹಣಕಾಸಿನ ವ್ಯವಹಾರ, ವೈಯಕ್ತಿಕ ಅಸೂಯೆ, ಅಕ್ರಮ ಲಾಭಕ್ಕಾಗಿ ಆರೋಪಿಗಳಿಬ್ಬರೂ ಈ ಕೊಲೆಗಳನ್ನು ಮಾಡಿದ್ದಾರೆ. ಕೊಲೆಯಾದ ಮಹಿಳೆಯರಿಬ್ಬರೂ ಆರೋಪಿಗಳಿಗೆ ಹಿಂದೆಯೇ ಪರಿಚಯವಿದ್ದು, ಗಾರ್ಮೆಂಟ್ಸ್ ಮತ್ತು ನರ್ಸಿಂಗ್ ಹೋಂಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಇಬ್ಬರನ್ನೂ ಮೇಟಗಳ್ಳಿಯ ಬಾಡಿಗೆ ಮನೆಗೆ ಕರೆಸಿಕೊಂಡು ಕೊಲೆ ಮಾಡಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಪಾರ್ವತಿ, ಚಾಮರಾಜನಗರ ಟೌನ್ ನಿವಾಸಿ ಗೀತಾ ಅಲಿಯಾಸ್ ಪುಟ್ಟಿ ಕೊಲೆಯಾದವರು. ಪಾರ್ವತಿಯನ್ನು ಮೇ 30ರಂದು, ಗೀತಾಳನ್ನು ಜೂನ್ 3 ರಂದು ಕೊಲೆ ಮಾಡಲಾಗಿತ್ತು. ಶವಗಳನ್ನು ಬೈಕ್ಗಳಲ್ಲಿ ಸಾಗಿಸುವುದು ಕಷ್ಟವೆಂಬ ಕಾರಣಕ್ಕೆ ದೇಹಗಳನ್ನು ಅರ್ಧಕ್ಕೆ ತುಂಡಿರಿಸಿ ಬೇರೆ ಬೇರೆ ಕಡೆಗಳಲ್ಲಿ ಶವಗಳನ್ನು ಬೀಸಾಡಿಸಿದ್ದಾರೆ ಎಂದು ವಿವರಿಸಿದರು.
ಘಟನೆ ನಡೆದಿದ್ದೇನು?; ಜೂನ್ 7ರಂದು ಪಾಂಡವಪುರ ತಾಲ್ಲೂಕು ಬೇಬಿ ಗ್ರಾಮದ ಕೆರೆಕೋಡಿ ಕಟ್ಟೆಯ ಕೆಳಗೆ ಹರಿಯುವ ನೀರಿನಲ್ಲಿ 30-32 ವರ್ಷ ವಯಸ್ಸಿನ ಅಪರಿಚಿತ ಮಹಿಳೆ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಗ್ರಾಮದ ಮಾಡರಹಳ್ಳಿ ರಸ್ತೆ ಬಳಿ ಸಿಡಿಎಸ್ ನಾಲೆಗೆ ಸಂಪರ್ಕಿಸುವ ಸಾರೋಡುಹಳ್ಳದ ಪಕ್ಕದ ಭತ್ತದ ಗದ್ದೆಯಲ್ಲಿ 40-45 ವರ್ಷ ವಯಸ್ಸಿನ ಮತ್ತೊಬ್ಬ ಅಪರಿಚತ ಮಹಿಳೆಯರ ಶವಗಳು ಪತ್ತೆಯಾಗಿದ್ದವು.
ಎರಡೂ ಪ್ರಕರಣಗಳಲ್ಲಿ ತುಂಡರಿಸಿದ ಇಬ್ಬರು ಮಹಿಳೆಯರ ಅರ್ಧ ದೇಹಗಳು ಮಾತ್ರ ಪತ್ತೆಯಾಗಿದ್ದವು. ಎರಡೂ ಶವಗಳಲ್ಲಿ ಸೊಂಟದಿಂದ ಮೇಲ್ಭಾಗದ ದೇಹವೇ ಇರಲಿಲ್ಲ. ಹೀಗಾಗಿ ಶವಗಳ ಗುರುತು ಪತ್ತೆಯಾಗದ ಹಿನ್ನೆಲೆಯಲ್ಲಿ ಈ ಪ್ರಕರಣಗಳು ಪೊಲೀಸರಿಗೆ ಸವಾಲಾಗಿದ್ದವು. ಇದರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಿದ 10 ಸಾವಿರಕ್ಕೂ ಹೆಚ್ಚು ಕರಪತ್ರಗಳನ್ನು ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹಂಚಿಕೆ ಮಾಡಿ, ಮೃತರ ಗುರುತು ಪತ್ತೆಗಾಗಿ ಜನರು, ಪೊಲೀಸರ ಸಹಕಾರ ಕೋರಲಾಗಿತ್ತು.
9 ತನಿಖಾ ತಂಡಗಳನ್ನು ರಚಿಸಿ, ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಲು 2 ತಾಂತ್ರಿಕ ಪರಿಣಿತ ತಂಡಗಳನ್ನು ರಚಿಸಲಾಗಿತ್ತು. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 1,116ಕ್ಕೂ ಹೆಚ್ಚಿನ ಮಹಿಳೆಯರು ಕಾಣೆಯಾದ ಪ್ರಕರಣಗಳನ್ನು ಪರಿಶೀಲಿಸಲಾಗಿತ್ತು. ಕಡೆಗೆ ಜೂನ್ 3ರಂದು ಗೀತಾ ಕಾಣೆಯಾಗಿದ್ದ ಪ್ರಕರಣವು ಜುಲೈ 7ರಂದು ಚಾಮರಾಜನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಎರಡೂ ಪ್ರಕರಣಗಳನ್ನು ಒಂದೇ ರೀತಿಯ ಸಾಮ್ಯತೆಗಳು ಇದ್ದವು. ಹೀಗಾಗಿ ಗೀತಾಳ ಮೊಬೈಲ್ ಕರೆಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.
ವಿಚಾರಣೆ ವೇಳೆ ಬೆಂಗಳೂರಿನಲ್ಲಿ ಕುಮುದ ಎಂಬ ಮತ್ತೊಬ್ಬ ಮಹಿಳೆಯನ್ನು ಕೊಲೆ ಮಾಡಿ, ಚಿತ್ರದುರ್ಗದವರೆಗೆ ಬೈಕ್ನಲ್ಲೇ ಕೊಂಡೊಯ್ದು ಶವ ಬೀಸಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಮಂಡ್ಯ ಎಸ್ಪಿ ಎನ್.ಯತೀಶ್ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಗಟ್ಟಣ ಡಿವೈಎಸ್ಪಿ ನೇತೃತ್ವದ ತನಿಖಾ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಪ್ರಕರಣಗಳನ್ನು ಬೇಧಿಸಿವೆ. ಹೀಗಾಗಿ ತನಿಖಾ ತಂಡದಲಿದ್ದವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ ಎಂದು ತಿಳಿಸಿದರು.
ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸದಿದ್ದಲ್ಲಿ ಮತ್ತೆ ಐವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದರೆನ್ನಲಾಗಿದ್ದು, ಕೊಲೆಗಾಗಿ ಹಗ್ಗ, ಚಾಕು ಇತರೆ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಂಡು ಓಡಾಡುತ್ತಿದ್ದರು ಎಂದು ಮಧುಕರ್ ಮಾಹಿತಿ ನೀಡಿದ್ದಾರೆ.